ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025 ರ ಮೆಗಾ ಹರಾಜು ಪ್ರಕ್ರಿಯೆ ನವೆಂಬರ್ 24 ಮತ್ತು 25 ರಂದು ನಡೆಯಲಿದೆ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಫ್ರಾಂಚೈಸಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (21 ಕೋಟಿ ರೂ.), ಯುವ ಸ್ಪೋಟಕ ಬ್ಯಾಟರ್ ರಜತ್ ಪಾಟಿದಾರ್ (11 ಕೋಟಿ ರೂ.), ಮತ್ತು ವೇಗದ ಬೌಲರ್ ಯಶ್ ದಯಾಲ್ (ರೂ. 5 ಕೋಟಿ) ಅವರನ್ನು ಉಳಿಸಿಕೊಂಡಿದೆ. ಆರ್ಸಿಬಿ ಮೆಗಾ ಹರಾಜಿನಲ್ಲಿ 83 ಕೋಟಿ ರೂಪಾಯಿಗಳನ್ನು ತನ್ನ ಪರ್ಸ್ನಲ್ಲಿ ಇರಿಸಿಕೊಂಡಿದೆ.
ನಾಯಕನ ಹುಡುಕಾಟದಲ್ಲಿರುವ ಆರ್ಸಿಬಿ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಹೊರ ಬಂದಿರುವ ಕೆಎಲ್ ರಾಹುಲ್ ಅವರನ್ನು ಬಿಡ್ ಮಾಡಲಿದೆ ಎಂಬ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ಸ್ಥಾನಕ್ಕೆ ಯಾರೂ ಊಹಿಸದ ಮತ್ತೊಬ್ಬ ಸ್ಟಾರ್ ಆಟಗಾರನ ಹೆಸರು ಕೇಳಿ ಬರುತ್ತಿದೆ. ಈ ಆಟಗಾರ ಆರ್ಸಿಬಿಗೆ ನಾಯಕನಾಗಲು ಎಲ್ಲಾ ಸಾಮರ್ಥ್ಯವನ್ನು ಹೊಂದಿದ್ದಾರೆ.

ಆರ್ಸಿಬಿ ತಂಡದ ತವರು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣವಾಗಿದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಮೈದಾನ ಚಿಕ್ಕದಾಗಿರುವ ಕಾರಣ ಬೌಂಡರಿ ಹಾಗೂ ಸಿಕ್ಸರ್ಗಳನ್ನು ಹೊಡೆಯಲು ಇದು ಅತ್ಯುತ್ತಮ ಪಿಚ್ ಎನ್ನಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಆಟಗಾರ ಆರಂಭಿಕ ಬ್ಯಾಟರ್ ಮತ್ತು ನಾಯಕನಾಗಿ ರಾಯಲ್ ಆರ್ಸಿಬಿ ಅದೃಷ್ಟವನ್ನು ಬದಲಾಯಿಸಬಹುದು. ಹೀಗಾಗಿ ಈ ಆಟಗಾರನನ್ನು ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಬಿಡ್ ಮಾಡಲು ಆರ್ಸಿಬಿ ತಂತ್ರ ರೂಪಿಸಿದೆ. ಈ ಆಟಗಾರ ಬೇರೆ ಯಾರು ಅಲ್ಲ, ಡೆಲ್ಲಿ ಕ್ಯಾಪಿಟಲ್ಸ್ ಬಿಡುಗಡೆ ಮಾಡಿರುವ ಆಸ್ಟ್ರೇಲಿಯಾದ ಸ್ಪೋಟಕ ಎಡಗೈ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್.
ವರದಿಗಳ ಪ್ರಕಾರ, ಆರ್ಸಿಬಿ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಡೇವಿಡ್ ವಾರ್ನರ್ ಅವರನ್ನು ಭಾರೀ ಮೊತ್ತಕ್ಕೆ ಬಿಡ್ ಮಾಡಬಹುದು. ಒಂದು ವೇಳೆ ವಾರ್ನರ್ ಆರ್ಸಿಬಿ ಸೇರಿದರೆ ಅವರಿಗೆ ನಾಯಕತ್ವ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಪ್ರಸ್ತುತ ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದಾರೆ. ಅವರ ಮೇಲೆ ಯಾವುದೇ ಒತ್ತಡವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರು ಸ್ವತಂತ್ರವಾಗಿ ಆಡುವ ಮೂಲಕ ಆರ್ಸಿಬಿ ತಂಡವನ್ನು ಐಪಿಎಲ್ ಚಾಂಪಿಯನ್ ಮಾಡಬಹುದು.
ಐಪಿಎಲ್ 2016ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ನಾಯಕನಾಗಿ ಡೇವಿಡ್ ವಾರ್ನರ್ ಚಾಂಪಿಯನ್ ಮಾಡಿದ್ದಾರೆ. ಐಪಿಎಲ್ 2016ರ ಆವೃತ್ತಿಯಲ್ಲಿ ಆರ್ಸಿಬಿ ವಿರುದ್ಧ ಹೈದರಾಬಾದ್ ಫೈನಲ್ ಪಂದ್ಯವಾಡಿತ್ತು. ಈ ಎಲ್ಲ ಅಂಶಗಳನ್ನು ಗಮನಿಸಿದರೆ ನಾಯಕತ್ವದಲ್ಲಿ ವಿಷಯದಲ್ಲಿ ಡೇವಿಡ್ ವಾರ್ನರ್ ಅವರಿಂದ ಆರ್ಸಿಬಿ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು.
ಟಿ20 ಕ್ರಿಕೆಟ್ನಲ್ಲಿ ಡೇವಿಡ್ ವಾರ್ನರ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ತಂಡಗಳಿಗೆ ಕಂಟಕವಾಗಿದ್ದಾರೆ. ಈ ಚುಟುಕು ಕ್ರಿಕೆಟ್ನಲ್ಲಿ ವಾರ್ನರ್ ಹಲವು ಬಿಗ್ ಇನ್ನಿಂಗ್ಸ್ ಆಡಿದ್ದಾರೆ. ವಿಶೇಷವೆಂದರೆ ಡೇವಿಡ್ ವಾರ್ನರ್ ನಾಯಕತ್ವ ವಹಿಸಿಕೊಂಡರೆ ಮಾಜಿ ನಾಯಕ ವಿರಾಟ್ ಕೊಹ್ಲಿ ಸಂಪೂರ್ಣ ಬೆಂಬಲ ಪಡೆಯಲಿದ್ದಾರೆ. ಐಪಿಎಲ್ನಲ್ಲಿ ಆರ್ಸಿಬಿ ಒಮ್ಮೆಯೂ ಚಾಂಪಿಯನ್ ಆಗಿಲ್ಲ. ಹೀಗಾಗಿ ಆರ್ಸಿಬಿ ಫ್ರಾಂಚೈಸಿ ಮಾಲೀಕರು ಡೇವಿಡ್ ವಾರ್ನರ್ ಅವರನ್ನು ನಾಯಕರನ್ನಾಗಿ ನೇಮಿಸುವ ಮೂಲಕ ಕಪ್ ಗೆಲ್ಲುವ ಕನಸನ್ನು ನನಸಾಗಿಸು ಮಾಡಿಕೊಳ್ಳುತ್ತಾರಾ ಎಂಬುದು ಕಾದು ನೋಡಬೇಕಾಗಿದೆ.