ಐಪಿಎಲ್ 2025 ರ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಸೋಲಿಸಿತು. ಆರ್ಸಿಬಿ 22 ಎಸೆತಗಳು ಬಾಕಿ ಇರುವಂತೆಯೇ ಕೆಕೆಆರ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿತು. ಆರ್ಸಿಬಿ ಭರ್ಜರಿ ಗೆಲುವಿನ ನಂತರ, ಮಾಜಿ ಮಾಲೀಕ ವಿಜಯ್ ಮಲ್ಯ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಜಯ್ ಮಲ್ಯ ತಮ್ಮ ಹೇಳಿಕೆ ಮೂಲಕ ಸದ್ದು ಮಾಡುತ್ತಿದ್ದಾರೆ.
ಹಣಕಾಸು ವಂಚನೆ ಪ್ರಕರಣದಲ್ಲಿ ವಿಜಯ್ ಮಲ್ಯ ಭಾರತದಿಂದ ತಲೆಮರೆಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಆರ್ಸಿಬಿ ಗೆಲುವಿನ ನಂತರ ವಿಜಯ್ ಮಲ್ಯ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಾಜಿ ತಂಡವನ್ನು ಅಭಿನಂದಿಸುವ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.

ಅದ್ಧೂರಿ ಗೆಲುವು ಸಾಧಿಸಿದ ಆರ್ಸಿಬಿ ತಂಡಕ್ಕೆ ಅಭಿನಂದನೆಗಳ. ಕೊನೆಗೂ ಆರ್ಸಿಬಿ ತಂಡದ ಅದ್ಭುತವಾಗಿ ಬೌಲಿಂಗ್ ಮಾಡಿದೆ. ಈ ಬಗ್ಗೆ ಕಾಮೆಂಟೇಟರ್ಸ್ ಹೇಳಿದ್ದು ಕೇಳಿ ಖುಷಿ ಅಯಿತು. ಬ್ಯಾಟಿಂಗ್ ಲೈನಪ್ ಅಂತೂ ಸಖತ್ತಾಗಿದೆ ಎಂದು ಮಲ್ಯ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಐಪಿಎಲ್ 2008 ರಿಂದ 8 ಸೀಸನ್ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಹೊಂದಿದ್ದ ವಿಜಯ್ ಮಲ್ಯ, ಆರ್ಥಿಕ ಅಪರಾಧಗಳಿಂದಾಗಿ ಯುನೈಟೆಡ್ ಕಿಂಗ್ಡಂನಲ್ಲಿ ವಾಸಿಸುತ್ತಿದ್ದಾರೆ. ಇದಕ್ಕಾಗಿ ಭಾರತ ಸರ್ಕಾರವು ಸುಮಾರು ಒಂದು ದಶಕದಿಂದ ಅವರನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ 12ಕ್ಕೂ ಹೆಚ್ಚು ಭಾರತೀಯ ಬ್ಯಾಂಕುಗಳಿಂದ 9000 ಕೋಟಿ ರೂ.ಗಳಿಗೂ ಹೆಚ್ಚು ಸಾಲವನ್ನು ಮರುಪಾವತಿಸದೆ ಇರುವ ಆರೋಪ ವಿಜಯ್ ಮಲ್ಯ ಮೇಲಿದೆ. 2016 ರಲ್ಲಿ ವಿಜಯ್ ಮಲ್ಯ ಸಂಸತ್ ಸದಸ್ಯರೂ ಆಗಿದ್ದರು. ಆರ್ಸಿಬಿ ಮೂರು ಬಾರಿ ಫೈನಲ್ ತಲುಪಿದ್ದರೂ ಇನ್ನೂ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ.
ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬಿರುಸಿನ ಅರ್ಧಶತಕ ಗಳಿಸುವ ಮೂಲಕ ಐಪಿಎಲ್ 2025ರ ಟೂರ್ನಿಯಲ್ಲಿ ತಮ್ಮ ಅಭಿಯಾನ ಶುರು ಮಾಡಿದ್ದಾರೆ. ವಿರಾಟ್ ಕೊಹ್ಲಿ 36 ಎಸೆತಗಳಲ್ಲಿ ಅಜೇಯ 59 ರನ್ ಗಳಿಸುವ ಮೂಲಕ ಆರ್ಸಿಬಿ ಕೇವಲ 16.2 ಓವರ್ಗಳಲ್ಲಿ 175 ರನ್ಗಳ ಗುರಿ ತಲುಪಲು ನೆರವಾದರು.
ಆರ್ಸಿಬಿ ಪರ ಕೃನಾಲ್ ಪಾಂಡ್ಯ ಮತ್ತು ಜೋಶ್ ಹೇಜಲ್ವುಡ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಮಾಡಿದರು. ಹೇಜಲ್ವುಡ್ ಒಂದು ಕಡೆ ವೇಗದ ಬೌಲಿಂಗ್ ದಾಳಿ ನಡೆಸಿದರೆ, ಮತ್ತೊಂದೆಡೆ ಕೃನಾಲ್ ಪಾಂಡ್ಯ ತಮ್ಮ ಸ್ಪಿನ್ ಮ್ಯಾಜಿಕ್ ತೋರಿಸಿದರು. ಉಳಿದ ಬೌಲರ್ ಕೂಡ ಶಿಸ್ತು ಬದ್ದಿನ ಬೌಲಿಂಗ್ ಪ್ರದರ್ಶನ ನೀಡಿದರು. ವಿರಾಟ್ ಕೊಹ್ಲಿ (ಅಜೇಯ 59) ಮತ್ತು ಫಿಲ್ ಸಾಲ್ಟ್ (56) ಅವರ ಆಕ್ರಮಣಕಾರಿ ಬ್ಯಾಟಿಂಗ್ ಕೆಕೆಆರ್ ವಿರುದ್ಧ ಗೆಲುವು ಸಾಧಿಸಲು ನೆರವಾಯಿತು.