ಮುಂಬೈ ಇಂಡಿಯನ್ಸ್ ತಂಡದ ಎಡಗೈ ಸ್ಟಾರ್ ಬ್ಯಾಟರ್ ತಿಲಕ್ ವರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ವಿಶಿಷ್ಟ ಸಾಧನೆ ಮಾಡಿದ್ದು, ರಿಟೈರ್ಡ್ ಔಟ್ ನಿವೃತ್ತಿ ಘೋಷಿಸಿದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶುಕ್ರವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅವರು 7 ಎಸೆತಗಳು ಬಾಕಿ ಇರುವಾಗ ಮೈದಾನದಿಂದ ಸ್ಪೋಟಕ ಬ್ಯಾಟರ್ ತಿಲಕ್ ವರ್ಮಾ ಹೊರನಡೆದರು. 204 ರನ್ಗಳ ಗುರಿಯನ್ನು ಬೆನ್ನಟ್ಟುವಾಗ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ನಂತರ, ಅವರು 23 ಎಸೆತಗಳಲ್ಲಿ 25 ರನ್ ಗಳಿಸಿದರು. ಐಪಿಎಲ್ ಇತಿಹಾಸದಲ್ಲಿ ರಿಟೈರ್ಡ್ ಔಟ್ ಆದ ಆರ್. ಅಶ್ವಿನ್, ಅಥರ್ವ ಟೇಡೆ ಮತ್ತು ಸಾಯಿ ಸುದರ್ಶನ್ ಅವರ ಪಟ್ಟಿಗೆ ತಿಲಕ್ ವರ್ಮಾ ಸೇರಿದರು.
ಮುಂಬೈ ಇಂಡಿಯನ್ಸ್ ತಂಡಕ್ಕೆ ಕೊನೆಯ 7 ಎಸೆತಗಳಲ್ಲಿ 24 ರನ್ಗಳು ಬೇಕಾಗಿತ್ತು. ಅಲ್ಲದೆ, ಮುಂಬೈ ಬಳಿ 5 ವಿಕೆಟ್ಗಳು ಬಾಕಿ ಇದ್ದವು. ಈ ವೇಳೆ ಸ್ಪೋಟಕ ಬ್ಯಾಟರ್ ತಿಲಕ್ ವರ್ಮಾ ಮೈದಾನ ತೊರೆದು ಎಲ್ಲರನ್ನೂ ಅಚ್ಚರಿಗೊಳಿಸಿದರು. ಆದಾಗ್ಯೂ, ಮುಂಬೈ ಇಂಡಿಯನ್ಸ್ ಗೆಲುವಿನ ಗೆರೆಯನ್ನು ದಾಟಲು ವಿಫಲವಾಯಿತು. ಇದರೊಂದಿಗೆ ಲಕ್ನೋ ಎದುರು ಮುಂಬೈ 12 ರನ್ಗಳಿಂದ ಸೋಲು ಕಂಡಿತು.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಭಾರತ ತಂಡದ ಪರ ಶತಕದ ಮೇಲೆ ಶತಕ ಬಾರಿಸಿರುವ ತಿಲಕ್ ವರ್ಮಾ ರಿಟೈರ್ಡ್ ಔಟ್ ಆಗಿದ್ದೇಕೆ ಎಂಬ ಪ್ರಶ್ನೆಗಳು ಎಲ್ಲರನ್ನು ಕಾಡಿದವು. ಇದು ನಾಯಕ ಹಾರ್ದಿಕ್ ಪಾಂಡ್ಯ ಅವರ ನಿರ್ಧಾರವಾಗಿರಲಿಲ್ಲ. ಬದಲಿಗೆ ಮುಂಬೈ ಇಂಡಿಯನ್ಸ್ ಕೋಚ್ ಮಹೇಲಾ ಜಯವರ್ಧನೆ ಅವರ ನಿರ್ಧಾರವಾಗಿತ್ತು. ಆದರೆ ಮಹೇಲಾ ಜಯವರ್ಧನೆ ಅವರ ಪ್ಲಾನ್ ಲಕ್ನೋ ಎದುರು ವರ್ಕ್ ಆಗಲಿಲ್ಲ. ಈ ಬಗ್ಗೆ ಪಂದ್ಯದ ನಂತರ ಮಹೇಲಾ ಜಯವರ್ಧನೆ ಮಾತನಾಡಿದ್ದಾರೆ.
ತಿಲಕ್ ವರ್ಮಾ ಅವರು ಕೇವಲ ಆಡಲು ಬಯಸಿದ್ದರು, ಆದರೆ ಆಡಲು ಸಾಧ್ಯವಾಗಲಿಲ್ಲ. ನಾವು)ಕೊನೆಯ ಕೆಲವು ಓವರ್ಗಳವರೆಗೆ ಕಾಯುತ್ತಿದ್ದೆವು, ಅವರು ತಮ್ಮ ಲಯವನ್ನು ಕಂಡುಕೊಳ್ಳುತ್ತಾರೆ ಎಂದು ಆಶಿಸುತ್ತಾ, ಏಕೆಂದರೆ ಅವರು ಕ್ರೀಸ್ನಲ್ಲಿ ಸ್ವಲ್ಪ ಸಮಯ ಕಳೆದಿದ್ದರು. ಆದ್ದರಿಂದ ಅವರು ಪಂದ್ಯವನ್ನು ಮುಗಿಸಲು ಮುಂದಾಗಬೇಕಿತ್ತು. ಆದರೆ ಕೊನೆಯಲ್ಲಿ, ನನಗೆ ಹೊಸ ಆಟಗಾರನ ಅವಶ್ಯಕತೆ ಇದೆ ಎಂದು ಅನಿಸಿತು. ಏಕೆಂದರೆ ತಿಲಕ್ ರನ್ ಗಳಿಸಲು ಕಷ್ಟಪಡುತ್ತಿದ್ದರು. ಹೀಗಾಗಿ ತಿಲಕ್ ವರ್ಮಾ ಅವರನ್ನು ಮತ್ತೆ ಪೆವಿಲಿಯನ್ಗೆ ಕರೆಸುವುದು ತಂಡದ ಕಾರ್ಯತಂತ್ರದ ನಿರ್ಧಾರವಾಗಿತ್ತು ಎಂದಿದ್ದಾರೆ.
ಕ್ರಿಕೆಟ್ನಲ್ಲಿ ಇಂತಹ ವಿಷಯಗಳು ನಡೆಯುತ್ತವೆ. ಅವರನ್ನು ಔಟ್ ಮಾಡುವುದು ಒಳ್ಳೆಯದಲ್ಲ, ಆದರೆ ನಾನು ಅದನ್ನು ಮಾಡಲೇಬೇಕಿತ್ತು. ಆ ಸಮಯದಲ್ಲಿ ಅದು ಒಂದು ಕಾರ್ಯತಂತ್ರದ ನಿರ್ಧಾರವಾಗಿತ್ತು ಎಂದು ಮಹೇಲಾ ಜಯವರ್ಧನೆ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಎರಡನೇ ಇನ್ನಿಂಗ್ಸ್ನ 8.1 ಓವರ್ಗಳ ನಂತರ 3 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿತು. ಈ ಸಂದರ್ಭದಲ್ಲಿ ತಿಲಕ್ ಕ್ರೀಸ್ಗೆ ಬಂದರು. ಸೂರ್ಯಕುಮಾರ್ ಯಾದವ್ ಅವರೊಂದಿಗೆ ನಾಲ್ಕನೇ ವಿಕೆಟ್ಗೆ 66 ರನ್ಗಳ ಜೊತೆಯಾಟ ಆಡುವ ಮೂಲಕ ಮುಂಬೈ ತಂಡಕ್ಕೆ ನೆರವಾದರು. ಈ ಜೊತೆಯಾಟದಲ್ಲಿ ಸೂರ್ಯಕುಮಾರ್ 46 ರನ್ಗಳ ಕೊಡುಗೆ ನೀಡಿದರೆ, ತಿಲಕ್ 17 ರನ್ ಗಳಿಸಿದ ನಂತರವೂ ಕಷ್ಟಪಡುತ್ತಿದ್ದರು. ಸೂರ್ಯಕುಮಾರ್ ಔಟಾದ ನಂತರ, ಮುಂಬೈ ತಂಡಕ್ಕೆ ಕೊನೆಯ 23 ಎಸೆತಗಳಲ್ಲಿ 52 ರನ್ಗಳು ಬೇಕಾಗಿದ್ದವು. ಈ ವೇಳೆ ತಿಲಕ್ ಮೈದಾನದಿಂದ ಹೊರನಡೆಯುವ ಮೊದಲು ತಮ್ಮ ಕೊನೆಯ 5 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿದರು.