ಐಪಿಎಲ್ 2025 ರಲ್ಲಿ ಇಲ್ಲಿವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಆರ್ಸಿಬಿ ತಂಡವನ್ನು ಹೊಸ ನಾಯಕನಾಗಿ ರಜತ್ ಪಾಟಿದಾರ್ ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಸತತ 18 ವರ್ಷಗಳಿಂದ ಐಪಿಎಲ್ ಪ್ರಶಸ್ತಿಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಈ ಬಾರಿ ಆರ್ಸಿಬಿ ಕಪ್ ಗೆಲ್ಲುವು ನೆಚ್ಚಿನ ತಂಡವಾಗಿದೆ. ಇಲ್ಲಿವರೆಗೂ ಕಪ್ ಗೆಲ್ಲದೆ ಇದ್ದರೂ, ನೂರು ಆಟಗಾರರು ಬಂದು ಹೋದರೂ, ಅಭಿಮಾನಿಗಳ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ.
ಐಪಿಎಲ್ 2008 ರ ಉದ್ಘಾಟನಾ ಸೀಸನ್ ಬಳಿಕ ಆರ್ಸಿಬಿ ತಂಡದ ಕರ್ನಾಟಕದ ಆಟಗಾರರ ಸಂಖ್ಯೆ ಕಡಿಮೆ ಆಗುತ್ತಿದೆ. ಹರಾಜು ಪ್ರಕ್ರಿಯೆಯಲ್ಲಿ ಕರ್ನಾಟಕದ ಆಟಗಾರರನ್ನು ಬಿಡ್ ಮಾಡಿ ಕರೆ ತಂದರೂ, ಕೇವಲ ಅವರು ಬೆಂಚ್ ಮೇಲೆ ಕೂರಲಷ್ಟೇ ಸೀಮಿತವಾಗಿದ್ದಾರೆ. ಆದರೆ ಈ ಬಾರಿ ಉತ್ತಮ ಭಾರತ ಟ್ರಿಪ್ ಮುಗಿಸಿ ಮರಳಿ ಆರ್ಸಿಬಿ ತಂಡಕ್ಕೆ ಬಂದಿರುವ ಕನ್ನಡಿಗ ದೇವದತ್ ಪಡಿಕ್ಕಲ್ ಎಲ್ಲರ ಚಿತ್ತ ಕದ್ದಿದ್ದಾರೆ. ಸಖತ್ ಫಾರ್ಮ್ನಲ್ಲಿರುವ ದೇವದತ್ ಪಡಿಕ್ಕಲ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸುತ್ತಿದ್ದಾರೆ.

ದೇವದತ್ ಪಡಿಕ್ಕಲ್ ಹುಟ್ಟಿದ್ದು ಕೇರಳವಾದರೂ, ಚಿಕ್ಕವಯಸ್ಸಿನಿಂದ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಹೀಗಾಗಿ ಕನ್ನಡಿಗನಾಗಿ ಬೆಳೆದ ದೇವದತ್ ಪಡಿಕ್ಕಲ್ ಅಂದಿನಿಂದಲ್ಲೂ ಆರ್ಸಿಬಿಯ ಅಪ್ಪಟ ಅಭಿಮಾನಿ. ಕಳೆದ ಎರಡು ಸೀಸನ್ಗಳಿಂದ ಕೈ ತಪ್ಪಿ ಹೋಗಿದ ಸ್ಪೋಟಕ ಬ್ಯಾಟರ್ ಪಡಿಕ್ಕಲ್ ಅವರನ್ನು ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಆರ್ಸಿಬಿ ಬಿಡ್ ಮಾಡಿ ತಂಡಕ್ಕೆ ಮತ್ತೆ ಕರೆ ತಂದಿದೆ. ನಿರೀಕ್ಷೆಗೆ ತಕ್ಕಂತೆ ಪಡಿಕ್ಕಲ್ ಪ್ರದರ್ಶನ ನೀಡುತ್ತಿದ್ದಾರೆ.
ಇತ್ತೀಚೆಗೆ ದೇವದತ್ ಪಡಿಕ್ಕಲ್ ತಮ್ಮ ಖುಷಿಯನ್ನು ಆರ್ಸಿಬಿಯ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಹಲವಾರು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಇದರಲ್ಲಿ ಅವರು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಕ್ರಿಕೆಟ್ ಅನ್ನು ತೊರೆಯಲು ಮಾಡಿದ್ದ ನಿರ್ಧಾರದ ಬಗ್ಗೆಯೂ ಮಾತನಾಡಿದ್ದಾರೆ.
ಐಪಿಎಲ್ 2020 ರಲ್ಲಿ ಆರ್ಸಿಬಿ ಪರ ಆಡುವ ಅವಕಾಶ ಪಡೆದ ದೇವದತ್ ಪಡಿಕ್ಕಲ್ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮಿಂಚಿದ್ದರು. ಈ ಮೂಲಕ ಅವರು ಲಕ್ಷಾಂತರ ಆರ್ಸಿಬಿ ಮಹಿಳಾ ಅಭಿಮಾನಿಗಳ ಕ್ರಶ್ ಬಾಯ್ ಆಗಿದ್ದರು. ಆರ್ಸಿಬಿ ಪರ ಚೊಚ್ಚಲ ಐಪಿಎಲ್ ಶತಕ ಸಿಡಿಸಿ ನಂತರವಂತೂ ಅವರು ಇಡೀ ದೇಶದ ಮನೆ ಮಾತಾಗಿದ್ದರು.
ಬಳಿಕ ನಡೆದ ಐಪಿಎಲ್ ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಅವರನ್ನು ಆರ್ಸಿಬಿ ಉಳಿಸಿಕೊಳ್ಳಲಿಲ್ಲ. ಹೀಗಾಗಿ ಅವರು ಬೇರೆ ತಂಡಗಳಲ್ಲಿ ಆಡಬೇಕಾಯಿತು. ಅಲ್ಲಿ ಅವರಿಗೆ ಸರಿಯಾದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಈ ಮಧ್ಯೆ 2022ರಲ್ಲಿ ಪಡಿಕ್ಕಲ್ಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ವೈದ್ಯರ ಬಳಿ ಪರೀಕ್ಷಿಸಿದಾಗ ಅವರಿಗೆ ಅಲ್ಸೈಟಿಸಿ ಕೊಲೈಟಿಸ್ ಎಂಬ ಆರೋಗ್ಯ ಸಮಸ್ಯೆ ಇರುವುದು ಪತ್ತೆ ಆಗಿತ್ತು.
ಅಲ್ಸೈಟಿಸಿ ಕೊಲೈಟಿಸ್ ಅಂದರೆ ಕರುಳಿನ ಮೇಲೆ ಅಲ್ಸರ್ ಆಗೋದು. ಸಾಮಾನ್ಯವಾಗಿ ನಮ್ಮ ದೇಹದೊಳಗೆ ಯಾವುದೋ ಬ್ಯಾಕ್ಟೀರಿಯಾ ಪ್ರವೇಶ ಮಾಡಿದಾಗ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಕೇಳೋದಕ್ಕೆ ಸಾಮಾನ್ಯ ಎನಿಸಿದರೂ, ಕೆಲವೊಮ್ಮೆ ಪ್ರಾಣ ಕೂಡ ಕಳೆದುಕೊಂಡಿರುವ ಉದಾಹರಣೆಗಳಿವೆ. ಇಂತಹ ಸಂದರ್ಭವನ್ನು ಎದುರಿಸಿದ ದೇವದತ್ ಪಡಿಕ್ಕಲ್ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ.
ದೇವದತ್ ಪಡಿಕ್ಕಲ್ ಫಿಟ್ ಆಗಿದ್ದರೂ ಯಾವಾಗಲೂ ಆಯಾಸವಾಗುತ್ತಿತ್ತು. ಕೇವಲ ಎರಡೇ ತಿಂಗಳಲ್ಲಿ ಅವರು 10-12 ಕೆಜಿ ತೂಕ ಇಳಿಕೆಯಾಗಿದ್ದರು. ಅಷ್ಟೇ ಅಲ್ಲ ಕ್ರಿಕೆಟ್ ಆಡೋದನ್ನೇ 3-4 ತಿಂಗಳು ಬಿಡಬೇಕಾಯಿತು. ಇದಾದ ನಂತರ ನಾನು ಮೊದಲಿನಂತೆ ಕ್ರಿಕೆಟ್ ಅಡಬಹುದಾದ ಎಂಬ ಪ್ರಶ್ನೆ ಎದುರಾಗಿತ್ತು. ಇದು ನನ್ನ ಜೀವನದಲ್ಲೇ ಊಹಿಸಿಕೊಳ್ಳಲಾಗದ ದಿನ ಎಂದು ದೇವದತ್ ಪಡಿಕ್ಕಲ್ ತಮ್ಮ ಜೀವನದ ಕಹಿ ಅನುಭವಗಳನ್ನು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ. ಅದೃಷ್ಟವಶಾತ್ ಸದ್ಯ ಈ ಎಲ್ಲಾ ಸಮಸ್ಯೆಗಳಿಂದ ಚೇತರಿಸಿಕೊಂಡಿರುವ ದೇವದತ್ ಪಡಿಕ್ಕಲ್ ಮತ್ತೆ ಆರ್ಸಿಬಿ ಪರ ಕಣಕ್ಕಿಳಿದ ಧೂಳೆಬ್ಬಿಸುತ್ತಿದ್ದಾರೆ.