ಅಕ್ಟೋಬರ್ 31 ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳು ಮೆಗಾ ಹರಾಜಿನ ಮೊದಲು ಉಳಿಸಿಕೊಂಡಿರುವ ಆಟಗಾರರ ಹೆಸರನ್ನು ಬಿಡುಗಡೆ ಮಾಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ರಿಟೇನ್ ಪಟ್ಟಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಆರ್ಸಿಬಿ ಕೇವಲ ಮೂವರು ಆಟಗಾರನ್ನು ಮಾತ್ರ ರಿಟೇನ್ ಮಾಡಿಕೊಂಡಿದೆ. ಆರ್ಸಿಬಿ ಸ್ಟಾರ್ ಆಟಗಾರರನ್ನು ಬಿಟ್ಟಿರುವುದು ಅಭಿಮಾನಿಗಳಿಗೆ ಅಚ್ಚರಿ ಎನಿಸಿದೆ. ತಂಡದ ನಾಯಕ ಫಾಪ್ ಡು ಪ್ಲೆಸಿಸ್, ಸ್ಟಾರ್ ಆಟಗಾರರಾದ ಮೊಹಮ್ಮದ್ ಸಿರಾಜ್, ವಿಲ್ ಜ್ಯಾಕ್, ಕ್ಯಾಮೆರಾನ್ ಗ್ರೀನ್ ಅವರನ್ನು ಆರ್ಸಿಬಿ ಉಳಿಸಿಕೊಂಡಿಲ್ಲ.

ಐಪಿಎಲ್ 2025ರ ಟೂರ್ನಿಗೆ ಬಲಿಷ್ಠ ತಂಡ ಕಟ್ಟುವ ಸಲುವಾಗಿ ಅಳೆದು ತೂಗಿ ಆರ್ಸಿಬಿ ಸ್ಟಾರ್ ಆಟಗಾರರನ್ನು ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿರುವ ಆಟಗಾರರ ಪೈಕಿ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಕೈ ಬಿಟ್ಟಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಮೊಹಮ್ಮದ್ ಸಿರಾಜ್ ಅವರಂತಹ ಟಾಪ್ ಕೌಲಿಟಿ ಬೌಲರ್ ಆರ್ಸಿಬಿಗೆ ಅವಶ್ಯಕತೆ ಇದೆ, ಆದರೂ ಅವರನ್ನು ತಂಡದಿಂದ ಬಿಡುಗಡೆ ಮಾಡಿರುವುದು ಏಕೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಒಮ್ಮೆಯೂ ಚಾಂಪಿಯನ್ ಆಗದ ಆರ್ಸಿಬಿ ಭವಿಷ್ಯದ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಐಪಿಎಲ್ 2025ರ ಕಪ್ ಗೆಲ್ಲಲು ಆರ್ಸಿಬಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ.ಆರ್ಸಿಬಿ ಉಳಿಸಿಕೊಂಡಿರುವ ಮೂರು ದೊಡ್ಡ ಹೆಸರು ಎಂದರೆ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್. ವಿರಾಟ್ ಕೊಹ್ಲಿ ಅವರನ್ನು ಮೊದಲ ಆಯ್ಕೆಯ ಆಟಗಾರನಾಗಿ ಆರ್ಸಿಬಿ 21 ಕೋಟಿ ರೂ.ಗೆ ಉಳಿಸಿಕೊಂಡಿದೆ. ಎರಡನೇ ಆಯ್ಕೆಯ ಆಟಗಾರನಾಗಿ ರಜತ್ ಪಾಟಿದಾರ್ ಅವರಿಗೆ 11 ಕೋಟಿ ರೂ. ನೀಡಿ ಉಳಿಸಿಕೊಂಡಿದೆ. ಯಶ್ ದಯಾಳ್ ಅವರನ್ನು ಮೂರನೇ ಆಯ್ಕೆಯ ಆಟಗಾರನಾಗಿ 5 ಕೋಟಿ ರೂ. ಗೆ ಆರ್ಸಿಬಿ ರಿಟೇನ್ ಮಾಡಿಕೊಂಡಿದೆ.
ಭಾರತದ ಮೂರು ಮಾದರಿ ಕ್ರಿಕೆಟ್ನಲ್ಲಿ ಮಿಂಚುತ್ತಿರುವ ಸ್ಟಾರ್ ವೇಗದ ಬೌಲರ್ಗಳಲ್ಲಿ ಒಬ್ಬರಾದ ಮೊಹಮ್ಮದ್ ಸಿರಾಜ್ ಬಿಟ್ಟು ಎಡಗೈ ವೇಗಿ ಯಶ್ ದಯಾಲ್ ಅವರನ್ನು ಆರ್ಸಿಬಿ ಉಳಿಸಿಕೊಂಡಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಕಳೆದ ಆವೃತ್ತಿಲ್ಲಿ ಸಿರಾಜ್ ಜೊತೆಗೆ ದಯಾಳ್ ಆರ್ಸಿಬಿ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆದರೆ ಸಿರಾಜ್ ಅವರಿಗಿಂತ ಸ್ವಲ್ಪ ವಿಭಿನ್ನ ಫಾರ್ಮ್ನಲ್ಲಿ ಸಿರಾಜ್ ಕಾಣಸಿಕೊಂಡಿದ್ದರು.
ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 15 ವಿಕೆಟ್ಗಳನ್ನು ಪಡೆದು ಯಶ ದಯಾಳ್ ಮಿಂಚಿದ್ದರು. ಆದರೆ ದುಬಾರಿ ಬೌಲರ್ ಆಗಿಯೂ ತಂಡದಲ್ಲಿ ಗುರುತಿಸಿಕೊಂಡಿದ್ದರೂ, ಆರ್ಸಿಬ ಅನ್ನು ಪ್ಲೇ-ಆಫ್ಗೆ ಕರೆದೊಯ್ಯುವಲ್ಲಿ ದಯಾಳ್ ಪ್ರಮುಖ ಪಾತ್ರವಹಿಸಿದ್ದರು. ಲೀಗ್ ಹಂತದ ಕೊನೆ ಪಂದ್ಯದಲ್ಲಿ ಡೆತ್ ಓವರ್ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡುವ ಮೂಲಕ ಹೆಚ್ಚು ಪ್ರಶಂಸೆಗೆ ಪಾತ್ರರಾಗಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧ ಪಂದ್ಯದಲ್ಲಿ ದಯಾಳ್ ತಮ್ಮ ಖದರ್ ತೋರಿದ್ದರು. ಅವರು ಸಿಎಸ್ಕೆ ಪ್ಲೇ-ಆಪ್ ಹಾದಿಗೆ ಅಡ್ಡಿಯಾಗಿದ್ದರು. ಕೊನೆಯ ಓವರ್ 6 ಎಸೆತಗಳಲ್ಲಿ 17 ರನ್ಗಳ ಅಗತ್ಯವಿತ್ತು. ಕ್ರೀಸ್ನಲ್ಲಿದ ಎಂಎಸ್ ಧೋನಿ ಅವರು ದಯಾಳ್ ಮೊದಲ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದ್ದರು. ಇಲ್ಲಿಂದ ಆರ್ಸಿಬಿ ಟೂರ್ನಿಯಿಂದ ಹೊರಬೀಳುವುದು ಪಕ್ಕಾ ಆಗಿತ್ತು. ಆದರೆ ಧೃತಿಗೆಡದ ದಯಾಳ್ ಎರಡನೇ ಎಸೆತದಲ್ಲಿ ಧೋನಿ ಅವರನ್ನು ಔಟ್ ಮಾಡಿದರು. ನಂತರ ಉಳಿದ ಐದು ಎಸೆತಗಳಲ್ಲಿ ಕೇವಲ 1 ರನ್ ಮಾತ್ರ ಬಟ್ಟುಕೊಟ್ಟಿದ್ದರು. ಈ ಪ್ರದರ್ಶನದ ಆಧಾರದ ಮೇಲೆ ದಯಾಳ್ ಅವರನ್ನು ಆರ್ಸಿಬಿ ಫ್ರಾಂಚೈಸಿ ಉಳಿಸಿಕೊಂಡಿದೆ.