ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಹೈ ಸ್ಕೋರಿಂಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2025 ರಲ್ಲಿ ತಮ್ಮ ಮೂರನೇ ಗೆಲುವು ಸಾಧಿಸಿತು. ಐಪಿಎಲ್ 2025ರ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 12 ರನ್ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಮುಂಬೈ 9 ವಿಕೆಟ್ ಕಳೆದುಕೊಂಡು 209 ರನ್ ಗಳಿಸಲು ಶಕ್ತವಾಯಿತು. ಈ ಗೆಲುವಿನ ಖುಷಿಯಲ್ಲಿದ್ದ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಅವರಿಗೆ ಬಿಸಿಸಿಐ ಶಿಕ್ಷೆ ವಿಧಿಸಿದೆ.
ಆರ್ಸಿಬಿ 222 ರನ್ಗಳ ಯಶಸ್ವಿ ಕಾಪಾಡಿಕೊಳ್ಳುವ ಸಮಯದಲ್ಲಿ ನಿಧಾನಗತಿಯ ಓವರ್ ರೇಟ್ ಅನ್ನು ಕಾಯ್ದುಕೊಂಡಿದ್ದಕ್ಕಾಗಿ ತಪ್ಪಿತಸ್ಥರೆಂದು ಕಂಡುಬಂದಿದೆ. ಪರಿಣಾಮ ರಜತ್ ಪಾಟಿದಾರ್ ಅವರಿಗೆ 12 ಲಕ್ಷ ರೂ. ಗಳನ್ನು ಬಿಸಿಸಿಐ ದಂಡ ವಿಧಿಸಿದೆ.

ಐಪಿಎಲ್ನ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಪ್ರಕಾರ, ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ, ರಜತ್ ಪಾಟಿದಾರ್ ಅವರಿಗೆ ಐಪಿಎಲ್ 2025 ರಲ್ಲಿ ಇದು ಮೊದಲ ಅಪರಾಧವಾಗಿರುವುದರಿಂದ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಜತ್ ಪಟಿದಾರ್ ಸ್ಪೋಟಕ ಬ್ಯಾಟಿಂಗ್ ಮಾಡಿದರು. ಮುಂಬೈ ಬೌಲಿಂಗ್ ವಿಭಾಗದ ನಟ್ಟು ಬೌಲ್ಟ್ ಟೈಟ್ ಮಾಡಿದ ಪಾಟಿದಾರ್ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಅವರು 32 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 64 ರನ್ ಗಳಿಸಿದರು. ಈ ಅದ್ಭುತ ಇನ್ನಿಂಗ್ಸ್ಗಾಗಿ ರಜತ್ ಪಟಿದಾರ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿತು. ಈ ವೇಳೆ ಮಾತನಾಡಿದ ರಜತ್ ಪಾಟಿದಾರ್, ತಮ್ಮ ಬೌಲರ್ಗಳನ್ನು ಶ್ಲಾಘಿಸಿದರು.
'ಇದು ನಿಜಕ್ಕೂ ಉತ್ತಮ ಪಂದ್ಯವಾಗಿತ್ತು. ಬೌಲರ್ಗಳು ಧೈರ್ಯ ತೋರಿಸಿದ ರೀತಿಯಿಂದಾಗಿ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಯಿತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಪ್ರಶಸ್ತಿ ಬೌಲಿಂಗ್ ವಿಭಾಗಕ್ಕೆ ಸಲ್ಲುತ್ತದೆ. ಏಕೆಂದರೆ ಈ ಮೈದಾನದಲ್ಲಿ ಬ್ಯಾಟಿಂಗ್ ವಿಭಾಗವನ್ನು ತಡೆಯುವುದು ಸುಲಭವಲ್ಲ. ಆದ್ದರಿಂದ ಅದರ ಕ್ರೆಡಿಟ್ ನಮ್ಮ ಬೌಲರ್ಗಳಿಗೆ ಸಲ್ಲುತ್ತದೆ' ಎಂದು ಪಾಟಿದಾರ್ ಹೇಳಿದರು.