ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾವಾದರೂ, ಟೀಮ್ ಇಂಡಿಯಾ ಸ್ಟಾರ್ ವಿಕೆಟ್ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರ ಬಗ್ಗೆ ಮಾತ್ರ ಚರ್ಚೆಗಳು ನಿಲ್ಲುತ್ತಿಲ್ಲ. ಈ ಬಾರಿಯ ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ದಾಖಲೆ ಬೆಲೆಗೆ ಬಿಡ್ ಆಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ತಂಡವು ರಿಷಬ್ ಪಂತ್ ಅವರಿಗೆ 27 ಕೋಟಿ ರೂ. ನೀಡಿದೆ. ಇದು ಐಪಿಎಲ್ ಇತಿಹಾಸದಲ್ಲಿ ಆಟಗಾರರನೊಬ್ಬ ಪಡೆದ ಅತಿಹೆಚ್ಚು ಸಂಭಾವನೆಯಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಮೂಲಕವೇ ರಿಷಬ್ ಪಂತ್ ಟೀಮ್ ಇಂಡಿಯಾಗೆ ಪ್ರವೇಶಿಸಿದರು. ಅಲ್ಲದೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರನಾಗಿಯೂ ಹಲವು ಅವೃತ್ತಿಗಳಲ್ಲಿ ಮಿಂಚಿದ್ದಾರೆ. ಆದರೆ ಐಪಿಎಲ್ 2025ರ ಟೂರ್ನಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ರಿಷಬ್ ಪಂತ್ ಹೊರ ಬಂದಿದ್ದರು. ಈ ಸಂದರ್ಭದಲ್ಲಿ ಉತ್ತಮ ಸಂಬಂಧ ಹೊಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಬ್ ಪಂತ್ ಯಾವ ಕಾರಣಕ್ಕಾಗಿ ತೊರೆದಿದ್ದಾರೆ ಎಂಬುದು ಅಭಿಮಾನಿಗಳಿಗೆ ದೊಡ್ಡ ಪ್ರಶ್ನೆಯಾಗಿತ್ತು. ಇದೀಗ ಈ ಪ್ರಶ್ನೆಗೆ ಡೆಲ್ಲಿ ಕ್ಯಾಪಿಟಲ್ಸ್ ಸಹಾ ಮಾಲೀಕರಾದ ಪಾರ್ಥ್ ಜಿಂದಾಲ್ ಅವರು ಉತ್ತರ ಕೊಟ್ಟಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಪಾರ್ಥ್ ಜಿಂದಾಲ್ ಅವರು, ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ರಿಷಬ್ ಪಂತ್ ಅವರನ್ನು ಉಳಿಸಿಕೊಳ್ಳಲು ಫ್ರಾಂಚೈಸಿ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಪ್ರಯತ್ನಿಸಿತ್ತು. ಆದರೆ ಅವರು ಮುಂದೆ ಹೋಗಲು ಮನಸ್ಸು ಮಾಡಿದ್ದರು. ಹೀಗಾಗಿ ಅನುಭವಿ ವಿಕೆಟ್ ಕೀಪರ್-ಬ್ಯಾಟರ್ನೊಂದಿಗೆ ತಂಡವನ್ನು ನಡೆಸುವ ಬಗ್ಗೆ ಮ್ಯಾನೇಜ್ಮೆಂಟ್ ಚರ್ಚೆ ನಡೆಸಿತ್ತು ಎಂದು ಪಾರ್ಥ್ ಜಿಂದಾಲ್ ಹೇಳಿದ್ದಾರೆ.
ಡೆಲ್ಲಿ ಫ್ರಾಂಚೈಸಿ ಕಾರ್ಯದ ಬಗ್ಗೆ ನಾವು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದೇವೆ. ಹಣದ ಕಾರಣಕ್ಕೆ ಪಂತ್ ತಂಡದಿಂದ ಹೊರಬಂದರು ಎಂದು ಹಲವರ ಅಭಿಪ್ರಾಯ. ಆದರೆ ಪಂತ್ ತಂಡದಿಂದ ಹೋಗಿರುವುದಕ್ಕೂ ಹಣಕ್ಕೂ ಯಾವುದೇ ಸಂಬಂಧವಿಲ್ಲ. ರಿಷಭ್ಗೆ ಹಣ ಎಂದಿಗೂ ಸಮಸ್ಯೆಯಾಗಿರಲಿಲ್ಲ. ಹಣವು ನಮಗೆ ಎಂದಿಗೂ ಸಮಸ್ಯೆಯಾಗಿರಲಿಲ್ಲ. ಆದರೆ, ನಾನು ಮತ್ತು ಕಿರಣ್ ಗ್ರಾಂಧಿ, ಪಂತ್ ನಡುವೆ ಒಂದೇ ರೀತಿಯ ಆಲೋಚನೆ ಇರಲಿಲ್ಲ ಅಂದುಕೊಳ್ಳುತ್ತೇನೆ ಎಂದಿದ್ದಾರೆ.