ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾರ್ಚ್ 28ರಿಂದ ಆರಂಭವಾಗಲಿದೆ. ಈ ಲೀಗ್ನ ಉದ್ಘಾಟನಾ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹಾಗೂ ಎಸ್ಆರ್ಎಚ್ ತಂಡಗಳು ಕಾದಾಟ ನಡೆಸಲಿವೆ. 19ನೇ ಆವೃತ್ತಿಯ ಲೀಗ್ನಲ್ಲಿ ಸ್ಥಿರ ಪ್ರದರ್ಶನ ನೀಡುವ ಬಯಕೆ ಯುವ ಆಟಗಾರದ್ದಾಗಿದೆ. ಈ ವೇಳೆ ಎಲ್ಲರ ಕಣ್ಣುಗಳು ಐದು ಆಟಗಾರರ ಮೇಲೆ ನೆಟ್ಟಿರಲಿದೆ. ಈ ಲೀಗ್ನಲ್ಲಿ ಸ್ಥಿರ ಪ್ರದರ್ಶನ ನೀಡಿ ಟೀಮ್ ಇಂಡಿಯಾ ಕದ ತಟ್ಟುವ ಬಯಕೆಯನ್ನು ಆಟಗಾರರು ಹೊಂದಿದ್ದಾರೆ.ಆ ಬಗ್ಗೆ ವರದಿ ಇಲ್ಲಿದೆ.
ಈ ವೇಳೆ ಎಲ್ಲರ ಕಣ್ಣುಗಳು ಜಮ್ಮು ಮತ್ತು ಕಾಶ್ಮೀರ ತಂಡದ ಆಕಿಬ್ ನಬಿ ಅವರ ಮೇಲೆ ನೆಟ್ಟಿರಲಿವೆ. ಇವರು ಇತ್ತೀಚಿಗೆ ಮುಕ್ತಾಯಗೊಂಡ ರಣಜಿ ಟ್ರೋಫಿಯಲ್ಲಿ ಜಮ್ಮು ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದರು. ಈ ಋತುವಿನ ರಣಜಿಯಲ್ಲಿ ಬಿಗುವಿನ ದಾಳಿ ನಡೆಸಿದ ಆಕಿಬ್ 60 ವಿಕೆಟ್ ಪಡೆದಿದ್ದರು. ಇವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಿನಿ ಹರಾಜಿನಲ್ಲಿ ಖರೀದಿಸಿತ್ತು. ಈ ಲೀಗ್ನಲ್ಲಿ ಸ್ಥಿರ ದಾಳಿ ನಡೆಸಿ ಆಯ್ಕೆದಾರರ ಮನವೊಲಿಸುವ ಕಾರ್ಯ ಆಕಿಬ್ ಅವರದ್ದಾಗಿದೆ.

ಈ ಬಾರಿಯ ಐಪಿಎಲ್ನಲ್ಲಿ ಎಲ್ಲರ ಚಿತ್ತ ಕದ್ದ ಇನ್ನೋರ್ವ ಯುವ ಆಟಗಾರ ವೈಭವ್ ಸೂರ್ಯವಂಶಿ. ಇವರು ಕಳೆದ ಆವೃತ್ತಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಸುದ್ದಿಯಾಗಿದ್ದರು. ಈ ಐಪಿಎಲ್ನಲ್ಲಿ ಇವರಿಗೆ ಖೆಡ್ಡಾ ತೋಡಲು ತಂಡಗಳು ಸಹ ಪ್ಲ್ಯಾನ್ ಮಾಡಿಕೊಂಡಿವೆ. ಈ ಬಾರಿಯ ಲೀಗ್ನಲ್ಲಿ ವೈಭವ್ ಮನಮೋಹಕ ಪ್ರದರ್ಶನ ನೀಡಿದಲ್ಲಿ ಟೀಮ್ ಇಂಡಿಯಾ ಸೇರಲು ಬಾಗಿಲು ತೆರೆಯಬಹುದು.
ಪಂಜಾಬ್ನ 19 ವರ್ಷದ ಆಲ್ರೌಂಡರ್ ವಿಹಾನ್ ಮಲೋತ್ರಾ ಅವರ ಮೇಲೂ ಎಲ್ಲರ ಕಣ್ಣುಗಳು ನೆಟ್ಟಿವೆ. ಇವರು ಮಿನಿ ಹರಾಜಿನಲ್ಲಿ 30 ಲಕ್ಷ ಮೂಲ ಬೆಲೆಗೆ ಆರ್ಸಿಬಿ ತಂಡದ ಪಾಲಾಗಿದ್ದಾರೆ. ವಿಹಾನ್ಗೆ ಇದು ದೊಡ್ಡ ವೇದಿಕೆಯಾಗಿದ್ದು, ತಮ್ಮ ಪ್ರತಿಭೆಯನ್ನು ತೋರಿಸಬಹುದಾಗಿದೆ. ಇವರು ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿ ಸ್ಥಾನವನ್ನು ಭದ್ರ ಪಡಿಸಿಕೊಳ್ಳಬಹುದು.
ದೇಶೀಯ ಕ್ರಿಕೆಟ್ನಲ್ಲಿ ರಾಜಸ್ಥಾನ ಪರ ಆಡುವ 23 ವರ್ಷದ ವೇಗದ ಬೌಲರ್ ಅಶೋಕ್ ಶರ್ಮಾ, ಈ ಬಾರಿ ಗುಜರಾತ್ ಟೈಟಾನ್ಸ್ ಪರ ಆಡಲಿದ್ದಾರೆ. ಇವರನ್ನು ಗುಜರಾತ್ ಹರಾಜಿನಲ್ಲಿ 90 ಲಕ್ಷ ನೀಡಿ ಖರೀದಿಸಿದೆ. ಇವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 22 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇವರು ಈಗಾಗಲೇ ರಾಜಸ್ಥಾನ ರಾಯಲ್ಸ್ ತಂಡದ ಪರವೂ ಆಡಿದ್ದಾರೆ. ಸದ್ಯ ಅವರ ಲಯವನ್ನು ಗಮನಿಸಿದರೆ, ಅವರು ಈ ಬಾರಿ ಆಡುವ ಬಳಗದಲ್ಲಿ ಅವಕಾಶವನ್ನು ಪಡೆಯಬಹುದಾಗಿದೆ.
ಸನ್ರೈಸರ್ಸ್ ಹೈದರಾಬಾದ್ನ 26 ವರ್ಷದ ಲೆಗ್-ಸ್ಪಿನ್ನರ್ ಜೀಶನ್ ಅನ್ಸಾರಿಗೂ ಈ ಆವೃತ್ತಿ ನಿರ್ಣಾಯಕವಾಗಲಿದೆ. ಇವರು ಕಳೆದ ಆವೃತ್ತಿಯಲ್ಲಿ ಲೀಗ್ಗೆ ಪದಾರ್ಪಣೆ ಮಾಡಿದ್ದರು. ಅಂಡರ್ 19 ವಿಶ್ವಕಪ್ ಆಡಿದ ಅನುಭವ ಹೊಂದಿರುವ ಜೀಶನ್ ಈ ಬಾರಿ ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು, ಇದೇ ಪ್ರದರ್ಶನ ಮುಂದುವರೆಸುವ ಇರಾದೆ ಹೊಂದಿದ್ದಾರೆ.