19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ಭರದ ಸಿದ್ಧತೆಗಳು ನಡೆದಿವೆ. ಉದ್ಘಾಟನಾ ಪಂದ್ಯಕ್ಕಾಗಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಸಜ್ಜಾಗಲಿದೆ. ಮೊದಲ ಪಂದ್ಯದಲ್ಲಿ ಹಾಕಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಲಿವೆ. ಈ ಬಾರಿ ಆರ್ಸಿಬಿ ಹಾಲಿ ಚಾಂಪಿಯನ್ ಆಗಿ ಕಣಕ್ಕೆ ಇಳಿಯಲಿದೆ. ಐಪಿಎಲ್ ಆರಂಭಕ್ಕೂ ಮುನ್ನವೇ ಆರ್ಸಿಬಿ ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ದೊಡ್ಡ ಹೇಳಿಕೆ ನೀಡಿದ್ದಾರೆ.
17 ವರ್ಷಗಳ ಪ್ರಶಸ್ತಿ ಎತ್ತದ ಬರವನ್ನು ಕಳೆದ ಆವೃತ್ತಿಯಲ್ಲಿ ಆರ್ಸಿಬಿ ಕೊನೆಯಾಗಿಸಿತು. ಈಗ ತಂಡ ಬಲಿಷ್ಠವಾಗಿದೆ. ಅಲ್ಲದೆ ಹರಾಜಿನಲ್ಲಿ ಕೆಲವು ಸ್ಟಾರ್ ಆಟಗಾರರನ್ನು ತಂಡ ಕೊಂಡಿದ್ದರಿಂದ ಭರವಸೆಗಳು ಹೆಚ್ಚಾಗಿವೆ. ಈ ಸಮಯದಲ್ಲಿ ಆರ್ಸಿಬಿ ಮತ್ತೊಮ್ಮೆ ಪ್ರಶಸ್ತಿ ಗೆಲ್ಲಬಹುದಾ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ಪ್ರಶ್ನೆಗೆ ತಂಡದ ಮಾಜಿ ಆಟಗಾರ ಎಬಿಡಿ ಉತ್ತರ ನೀಡಿದ್ದಾರೆ.

ಜಿಯೋ ಹಾಟ್ಸ್ಟಾರ್ ಶೋನಲ್ಲಿ ಎಬಿಡಿ ಆರ್ಸಿಬಿ ತಂಡದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರು ಈ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಅವರಿಗೆ ಕಳೆದ ಆವೃತ್ತಿಯಲ್ಲೇ ತಂಡದ ಹೊರೆ ತಮ್ಮ ಮೇಲೆ ಹೆಚ್ಚಾಗಿ ಬೀಳದು ಎಂಬ ಅರಿವು ಆಗಿತ್ತು. ವಿರಾಟ್ ಕೊಹ್ಲಿ ಅವರ ತಂಡದಲ್ಲಿರುವ ಹಲವು ಆಟಗಾರರಲ್ಲಿ ಟ್ರೋಫಿ ಗೆಲ್ಲುವ ಹಸಿವು ಇದೆ ಎಂದು ತಿಳಿಸಿದ್ದಾರೆ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಆರ್ಸಿಬಿ ತಂಡದಲ್ಲಿ ದೊಡ್ಡ ಬದಲಾವಣೆಗಳು ಏನು ಆಗಿಲ್ಲ. ತಂಡದಲ್ಲಿ ಹೆಚ್ಚಿನ ಬದಲಾವಣೆ ಇಲ್ಲದೆ ಇರುವುದು ಸಹ ಒಳ್ಳೆಯ ವಿಷಯವೇ ಆಗಿದೆ. ವಿರಾಟ್ ಕೊಹ್ಲಿ ಬಿಡುವಿನ ಬಳಿಕ ಮೈದಾನಕ್ಕೆ ಇಳಿಯುತ್ತಿದ್ದಾರೆ. ಆದರೆ ಅವರಷ್ಟು ಕಷ್ಟ ಪಡುವ ಇನ್ನೊಬ್ಬ ಆಟಗಾರನನ್ನು ನಾನು ನೋಡಿಲ್ಲ. ನನಗೆ ವಿಶ್ವಾಸವಿದೆ ಅವರು ಪೂರ್ಣ ತಯಾರಿಯಿಂದ ಕಣಕ್ಕೆ ಇಳಿಯಲಿದ್ದಾರೆ.

ಡಿವಿಲಿಯರ್ಸ್ ಇದೇ ವೇಳೆ ವಿರಾಟ್ ಕೊಹ್ಲಿ ಆರ್ಸಿಬಿ ಡ್ರೆಸ್ಸಿಂಗ್ ರೂಮ್ನಲ್ಲಿ ಹೇಳುತ್ತಿದ್ದ ಆ ಒಂದು ಮಾತನ್ನು ತಿಳಿಸಿದ್ದಾರೆ. ವಿರಾಟ್ ಯಾವಾಗಲೂ ಡ್ರೆಸ್ಸಿಂಗ್ ರೂಮ್ನಲ್ಲಿ ನಾವು ಒಂದು ಬಾರಿ ಟ್ರೋಫಿ ಗೆದ್ದರೆ, ಎರಡು ಹಾಗೂ ಮೂರು ಟ್ರೋಫಿ ಗೆಲ್ಲಬಲ್ಲೇವು. ನನಗೆ ವಿರಾಟ್ ಅವರ ಮಾತಿನ ಮೇಲೆ ವಿಶ್ವಾಸವಿದೆ. ಆರ್ಸಿಬಿ ಈಗ ಟ್ರೋಫಿ ಗೆಲ್ಲುವ ಸಾಮರ್ಥ್ಯವನ್ನು ಹೊಂದಿದೆ. ಈ ಬಾರಿ ಆರ್ಸಿಬಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ ಎಂದು ಎಬಿಡಿ ಭವಿಷ್ಯ ನುಡಿದಿದ್ದಾರೆ.

ಆರ್ಸಿಬಿ ತನ್ನ ಮೊದಲ ಪಂದ್ಯವನ್ನು ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಆಡಲಿದೆ. ಈ ಬಾರಿಯೂ ಆರ್ಸಿಬಿ ತಂಡವನ್ನು ರಜತ್ ಪಾಟಿದಾರ್ ಮುನ್ನಡೆಸಲಿದ್ದು, ಸ್ಟಾರ್ ಆಟಗಾರರ ಬಳಗವೇ ಆರ್ಸಿಬಿ ತಂಡದಲ್ಲಿದೆ. 19ನೇ ಆವೃತ್ತಿಯಲ್ಲಿ ಆರ್ಸಿಬಿ 5 ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡಲಿದ್ದು, 2 ಪಂದ್ಯಗಳನ್ನು ರಾಯ್ಪುರದಲ್ಲಿ ಆಡಲಿದೆ.