ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಲೀಗ್ನಲ್ಲಿ ಭಾಗವಹಿಸಲು ಎಲ್ಲ ತಂಡಗಳು ತಯಾರಿ ನಡೆಸಿವೆ. ಈ ಮಧ್ಯೆ ಬೆಂಗಳೂರು ತಂಡದ ಅಭಿಮಾನಿಗಳಲ್ಲಿ ಇದ್ದ ಆತಂಕ ಒಂದನ್ನು ಕರ್ನಾಟಕ ಸರ್ಕಾರ ದೂರ ಮಾಡಿದೆ. ಆ ಆತಂಕ ಏನು? ಎಂಬ ಬಗ್ಗೆ ವರದಿ ಇಲ್ಲಿದೆ.
ಐಪಿಎಲ್ ಉದ್ಘಾಟನಾ ಪಂದ್ಯ ಎಲ್ಲಿ ನಡೆಯುತ್ತದೆ ಎಂಬ ಬಗ್ಗೆ ಕೆಲ ದಿನಗಳಿಂದ ಕುತೂಹಲ ಮನೆ ಮಾಡಿತ್ತು. ಈ ಕುತೂಹಲಕ್ಕೆ ಸೋಮವಾರ ತೆರೆ ಬಿದ್ದಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯವನ್ನು ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಗಳಿಗೆ ಸರ್ಕಾರ ಅನುಮತಿ ನೀಡಿದೆ. 19ನೇ ಆವೃತ್ತಿಯ ಐಪಿಎಲ್ನ ಮೊದಲ ಪಂದ್ಯ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಮೊದಲ ಪಂದ್ಯ ಮಾರ್ಚ್ 28 ರಿಂದ ನಡೆಯಲಿದ್ದು, ಆರ್ಸಿಬಿ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಲಿವೆ.

ಆರ್ಸಿಬಿ ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ವೇಳೆ ಅಭಿಮಾನಿಗಳು ತುಂಬಾನೇ ಖುಷಿ ಪಟ್ಟಿದ್ದರು. ಈ ಸಂಭ್ರಮಾಚರಣೆಯನ್ನು ಆರ್ಸಿಬಿ ಅಭಿಮಾನಿಗಳೊಂದಿಗೆ ಆಚರಿಸಲು ಪ್ಲ್ಯಾನ್ ಮಾಡಿಕೊಂಡಿತ್ತು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದರು. ಇದರಿಂದ ಕ್ರೀಡಾಂಗಣದ ಭದ್ರತಾ ವ್ಯವಸ್ಥೆಗಳು ಮತ್ತು ಮೂಲಸೌಕರ್ಯಗಳ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದವು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಡಿ.ಕುನ್ಹಾ ಸಮಿತಿಯು ಹಲವಾರು ಮಾರ್ಪಾಡುಗಳಿಗೆ ಸೂಚನೆ ನೀಡಿತು.
ಕೆಎಸ್ಸಿಎ ಸಹ ಪಂದ್ಯ ನಡೆಸಲು ಬೇಕಾಗಿರುವ ಎಲ್ಲ ಮಾರ್ಪಾಡುಗಳನ್ನು ಪೂರ್ಣಗೊಳಿಸಲು ಮಾರ್ಚ್ 15 ರಂದು ಸಮಯ ನೀಡಲಾಗಿತ್ತು. ಇನ್ನು ಸಮಿತಿ ಕಾರ್ಯಗಳನ್ನು ಪರಿಶೀಲಿಸಿ ಪಂದ್ಯಗಳನ್ನು ನಡೆಸಲು ಸಮ್ಮತಿ ನೀಡಿದೆ.
ಬಿಸಿಸಿಐ ಬಿಡುಗಡೆ ಮಾಡಿದ ಮೊದಲ ಹಂತದ ವೇಳಾಪಟ್ಟಿಯ ಅನುಸಾರ ಚಿನ್ನಸ್ವಾಮಿ ಮೈದಾನ, ಆರಂಭಿಕ ಪಂದ್ಯವನ್ನು ಹಾಗೂ ಏಪ್ರಿಲ್ 5 ರಂದು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯವನ್ನು ಆಡಲಿದೆ. ಈ ಮೈದಾನದಲ್ಲಿ ಒಟ್ಟು ಆರ್ಸಿಬಿ ಐದು ಪಂದ್ಯಗಳನ್ನು ಆಡಲಿದೆ. ಎರಡು ತವರು ಪಂದ್ಯಗಳು ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ಆಡಲಿದೆ. ಐಪಿಎಲ್ನ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.
18ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ, ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಐಪಿಎಲ್ 2025ರ ಪ್ರಶಸ್ತಿ ಎತ್ತಿ ಸಂಭ್ರಮಿಸಿತ್ತು. ಆಗ ತಂಡವನ್ನು ಮುನ್ನಡೆಸಿದ್ದ ರಜತ್ ಪಾಟಿದಾರ್ ಅವರೇ ಈ ಆವೃತ್ತಿಯಲ್ಲೂ ತಂಡವನ್ನು ಮುನ್ನಡೆಸಲಿದ್ದಾರೆ. ಆರ್ಸಿಬಿ ಈ ಬಾರಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಆರ್ಸಿಬಿ ಶತಾತ ಗತಾಯ ಶ್ರಮಿಸುತ್ತಿದೆ. ತಂಡದ ಸ್ಟಾರ್ ಆಟಗಾರರ ಮೇಲೆ ಈ ಬಾರಿಯೂ ಅಭಿಮಾನಿಗಳ ನಿರೀಕ್ಷೆ ಹೆಚ್ಚಿರಲಿದೆ.