19ನೇ ಆವೃತ್ತಿಯ ಐಪಿಎಲ್ ಶನಿವಾರ (ಮಾರ್ಚ್ 28)ದಿಂದ ಆರಂಭವಾಗಲಿದೆ. ಈ ಮೆಗಾ ಲೀಗ್ಗೆ ಈಗಾಗಲೇ ಭರದ ಸಿದ್ಧತೆಗಳು ಸಹ ನಡೆದಿವೆ. ಬೆಂಗಳೂರಿನ ಐಕಾನಿಕ್ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಬಾರಿ ಉದ್ಘಾಟನಾ ಪಂದ್ಯದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸುತ್ತಿಲ್ಲ. ಕಳೆದ ವರ್ಷ ಆರ್ಸಿಬಿ ಸಂಭ್ರಮಾಚರಣೆಯಲ್ಲಿ ಜೀವ ಕಳೆದುಕೊಂಡ 11 ಅಭಿಮಾನಿಗಳಿಗೆ ಗೌರವಾರ್ಥ ಉದ್ಘಾಟನಾ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಬಹು ದಿನಗಳ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಪಂದ್ಯವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾತುರರಾಗಿದ್ದಾರೆ. ಹಾಗಿದ್ದರೆ ಈ ಪಂದ್ಯವನ್ನು ನೋಡಲು ಟಿಕೆಟ್ ಪಡೆದ ಅಭಿಮಾನಿಗಳು ಈ ಸುದ್ದಿಯನ್ನು ಒಮ್ಮೆ ಗಮನಿಸಿ.
ಕಳೆದ ವರ್ಷ ನಡೆದ ಕಾಲ್ತುಳಿತದ ಪರಿಣಾಮ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ), ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ, ಆರ್ಸಿಬಿ ಮ್ಯಾನೇಜ್ಮೆಂಟ್ ಮುಂಜಾಗರುಕತೆ ವಹಿಸಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದೆ. ಟಿಕೆಟ್ ಹೊಂದಿರುವ ಅಭಿಮಾನಿಗಳಿಗೆ ತೊಂದರೆ ಆಗದ ರೀತಿ ನೋಡಿಕೊಳ್ಳುವ ಜವಾಬ್ದಾರಿ ಸಹ ಎಲ್ಲರ ಮೇಲಿದೆ. ಅಭಿಮಾನಿಗಳು ಮೈದಾನಕ್ಕೆ ಪ್ರವೇಶಿಸುವ ಮುನ್ನ ಗಮನಿಸಬೇಕಾದ ಕೆಲವು ಅಂಶಗಳ ಬಗ್ಗೆ ವರದಿ ಇಲ್ಲಿದೆ.

ಆರ್ಸಿಬಿ ಹಾಗೂ ಎಸ್ಆರ್ಎಚ್ ಪಂದ್ಯವನ್ನು ವೀಕ್ಷಿಸಲು ಹೋಗುವ ಅಭಿಮಾನಿಗಳ ಅನುಕೂಲಕ್ಕೆ ಉಚಿತ ಮೆಟ್ರೋ ಸೇವೆಯನ್ನು ನೀಡಲಾಗಿದೆ. ಅಭಿಮಾನಿಗಳು ತಾವು ಪಡೆದ ಟಿಕೆಟ್ನಲ್ಲಿ ಲಭ್ಯ ಇರುವ ಕ್ಯೂಆರ್ ಕೋಡ್ ಬಳಸಿ ಮೆಟ್ರೋ ಸೇವೆಯನ್ನು ಬಳಸಬಹುದಾಗಿದೆ.
ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು, ಕ್ರೀಡಾಂಗಣದ ಸುತ್ತಲೂ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿಲ್ಲ. ಬಾಳೇಕುಂದ್ರಿ ವೃತ್ತ ಮತ್ತು ಸಿಟಿಒ ಜಂಕ್ಷನ್ ನಡುವಿನ ಕ್ವೀನ್ಸ್ ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತ, ಎಂಜಿ ರಸ್ತೆ ಮತ್ತು ಎಂಜಿ ರಸ್ತೆಯನ್ನು ಕಬ್ಬನ್ ರಸ್ತೆಗೆ ಸಂಪರ್ಕಿಸುವ ಲಿಂಕ್ ರಸ್ತೆ, ಕಬ್ಬನ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಬಾ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಲ್ಯಾವೆಲ್ಲೆ ರಸ್ತೆ ಮತ್ತು ವಿಟ್ಟಲ್ ಮಲ್ಯ ರಸ್ತೆಗಳಲ್ಲಿಯೂ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಸಿದ್ದಲಿಂಗಯ್ಯ ವೃತ್ತದಲ್ಲಿರುವ ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ ಮೈದಾನ ಮತ್ತು ಮ್ಯೂಸಿಯಂ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ಸ್ ಯುರೋಪಿಯನ್ ಸ್ಕೂಲ್ ಮೈದಾನ, ಫ್ರೀಡಂ ಪಾರ್ಕ್, ಗರುಡ ಮಾಲ್, ಯುಬಿ ಸಿಟಿ ಮತ್ತು ಶಿವಾಜಿನಗರ ಟಿಟಿಎಂಸಿಯ ಮೊದಲ ಮಹಡಿಯಲ್ಲಿ ಅಭಿಮಾನಿಗಳು ತಮ್ಮ ವಾಹನವನ್ನು ಪಾರ್ಕ್ ಮಾಡಬಹುದಾಗಿದೆ. ಕ್ರೀಡಾಂಗಣದ ಬಳಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ವ್ಯವಸ್ಥೆ ಕಲ್ಪಿಸಲಾಗಿದೆ.
ಕಬ್ಬನ್ ರಸ್ತೆಯಲ್ಲಿ E-1 ರಿಂದ E-3, E-18, E-19, E-22, ಮತ್ತು E-23, ಲಿಂಕ್ ರಸ್ತೆಯಲ್ಲಿ E-11 ರಿಂದ E-17 ಮತ್ತು ಕ್ವೀನ್ಸ್ ರಸ್ತೆಯಲ್ಲಿ E-05 ಮತ್ತು E-08 ದ್ವಾರಗಳ ಮೂಲಕ ಪ್ರವೇಶವನ್ನು ಅನುಮತಿ ನೀಡಲಾಗಿದೆ. ನಿರ್ಗಮನಕ್ಕಾಗಿ, E-09 ಮತ್ತು E-9A ದ್ವಾರಗಳನ್ನು ಬಳಸಲಾಗುತ್ತದೆ.

ಪಿಸ್ತೂಲ್, ಚಾಕು, ಕತ್ತರಿ, ಆಲ್ಕೋಹಾಲ್, ಬಾಟಲ್, ಪಟಾಕಿ, ಪೆಟ್ರೋಲ್, ಡೀಸೆಲ್, ಲೈಟರ್, ಆಹಾರ ಪದಾರ್ಥ, ಸಿಗರೇಟ್, ಬ್ಯಾಗ್, ಹೆಲ್ಮೆಟ್, ಎಲೆಕ್ಟ್ರಾನಿಕ್ ವಸ್ತುಗಳು, ಕ್ಯಾಮೆರಾಗಳನ್ನು ಒಳಗಡೆ ತೆಗೆದುಕೊಂಡು ಹೋಗಲು ಅನುಮತಿ ಇರುವುದಿಲ್ಲ.
ಬಹುದಿನಗಳ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಪಂದ್ಯವನ್ನು ನೋಡಲು ಹೋಗುವ ಅಭಿಮಾನಿಗಳು ಈ ಬಗ್ಗೆ ಗಮನ ಹರಿಸುವುದು ಅವಶ್ಯಕ.