ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರೋಚಕ ಘಟ್ಟದತ್ತ ಮುಖ ಮಾಡಿದೆ. ಮೇ ತಿಂಗಳ ಅಂತ್ಯದಲ್ಲಿ ಈ ಮೆಗಾ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ. ಲೀಗ್ ಹಂತದ ಪಂದ್ಯಗಳು ಮುಕ್ತಾಯದತ್ತ ಮುಖ ಮಾಡಿದ್ದು, ಪ್ಲೇ ಆಫ್ ಪಂದ್ಯಗಳು ಸಮೀಪಿಸುತ್ತಿವೆ. ಫೈನಲ್ ಹಾಗೂ ಪ್ಲೇ ಆಫ್ ಪಂದ್ಯಗಳ ಸ್ಥಳಗಳನ್ನು ಘೋಷಿಸುವ ಮೊದಲು ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ)ಗೆ ಹೊಸ ತಲೆನೋವು ಆರಂಭವಾಗಿದೆ.
ಸಂಪ್ರದಾಯದಂತೆ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ತಂಡದ ತವರು ಮೈದಾನದಲ್ಲಿ ಉದ್ಘಾಟನಾ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ. ಇದರಂತೆ 2025ರ ಐಪಿಎಲ್ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಉದ್ಘಾಟನಾ ಪಂದ್ಯವನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಆಡಿತ್ತು. ಈಗ ಫೈನಲ್ ಸಹ ಇದೇ ಮೈದಾನದಲ್ಲಿ ಆಡಲು ತಯಾರಿ ನಡೆದಿತ್ತು. ಆದರೆ ರಾಜ್ಯದ ಶಾಸಕರ ಆ ಒಂದು ಪಟ್ಟು ಬಿಸಿಸಿಐ ಐಪಿಎಲ್ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಬೇರೆ ಕಡೆಗೆ ಶಿಫ್ಟ್ ಮಾಡುವತ್ತ ಯೋಚನೆಯನ್ನು ನಡೆಸಿದೆ.

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಐಪಿಎಲ್ ಪ್ಲೇಆಫ್ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳು ಪಂಜಾಬ್ ಮತ್ತು ಕರ್ನಾಟಕದಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷದ ಚಾಂಪಿಯನ್ಸ್ ಆರ್ಸಿಬಿಯ ತವರು ಮೈದಾನದಲ್ಲಿ ಫೈನಲ್ ನಡೆಯಬೇಕು. ಆದರೆ ಎಂಎಲ್ಎಗಳಿಗೆ ಉಚಿತ ಟಿಕೆಟ್ ನೀಡುವುದು ಬೆಂಗಳೂರಿನಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಇದು ಬಗೆಹರಿಯದೆ ಉಳಿದರೆ, ಫೈನಲ್ ಬೆಂಗಳೂರು ಹೊರತುಪಡಿಸಿ ಬೇರೆ ನಗರಕ್ಕೆ ಶಿಫ್ಟ್ ಆಗುವ ಸಾಧ್ಯತೆ ಇದೆ.
ಕರ್ನಾಟಕದ ಹುನಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್, ಐಪಿಎಲ್ ಪಂದ್ಯಗಳಿಗೆ ಕನಿಷ್ಠ ಐದು ಟಿಕೆಟ್ಗಳನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಅಲ್ಲದೆ ಶಾಸಕರನ್ನು ಸಹ ವಿಐಪಿಗಳಂತೆ ಪರಿಗಣಿಸಬೇಕು ಎಂದು ಹೇಳಿದ್ದರು. ಬೇರೆ ಶಾಸಕರು ಸಹ ಈ ಬೇಡಿಕೆಗೆ ಧ್ವನಿ ಗೂಡಿಸಿದ್ದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರತಿ ಶಾಸಕರಿಗೆ ಮೂರು ಟಿಕೆಟ್ಗಳನ್ನು ಹಂಚಿಕೆ ಮಾಡುವ ಮೂಲಕ ರಾಜಿ ಮಾಡಿಕೊಳ್ಳುವುದಾಗಿ ಘೋಷಿಸಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳಿಗೆ ಶಾಸಕರು ಅಥವಾ ಅವರ ಕುಟುಂಬ ಸದಸ್ಯರು ಮಾತ್ರ ಹಾಜರಾಗಬಹುದು ಎಂದು ಗೃಹಸಚಿವ ಜಿ ಪರಮೇಶ್ವರ್ ಹೇಳಿದ್ದರು.
ಪ್ಲೇ ಆಫ್ಗೆ ಇನ್ನು ದಿನಗಣನೆ ಆರಂಭವಾದಗ ಇನ್ನು ಸ್ಥಳಗಳು ಅಂತಿಮವಾಗದೇ ಇರುವುದೇ ಇರುವುದು ಚಿಂತೆಯನ್ನು ಹೆಚ್ಚಿಸಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲಾಗುತ್ತದೆಯೇ ಎಂಬುದರ ಕುರಿತು ಸ್ಪಷ್ಟತೆ ಇಲ್ಲ.