ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಿದೆ. ಈ ಲೀಗ್ನಲ್ಲಿ ಕರ್ನಾಟಕದ ಸ್ಟಾರ್ ಆಟಗಾರರು ಸಹ ಸದ್ದು ಮಾಡುತ್ತಿದ್ದಾರೆ. ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ವೇಗದ ಬೌಲರ್ ವಿಜಯ್ಕುಮಾರ್ ವೈಶಾಖ್. ಪಂಜಾಬ್ ಕಿಂಗ್ಸ್ ತಂಡದ ಪರ ಮೈದಾನಕ್ಕೆ ಇಳಿಯುವ ಬಲಗೈ ವೇಗದ ಬೌಲರ್, ಎದುರಾಳಿ ಬ್ಯಾಟರ್ಗಳನ್ನು ಕಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬದಲಾದ ಟಿ20 ಫಾರ್ಮೆಟ್ ಬಗ್ಗೆ ಕನ್ನಡಿಗ ವಿಜಯ್ಕುಮಾರ್ ವೈಶಾಖ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ವಿಜಯ್ಕುಮಾರ್ ವೈಶಾಖ್ ಹೇಳುವಂತೆ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಹಾಗೂ ರಣತಂತ್ರದ ಅರಿವು ತುಂಬಾ ಅವಶ್ಯಕ. ಬದಲಾಗುತ್ತಿರುವ ಟಿ20 ಫಾರ್ಮೆಟ್ಗೆ ಈ ಎರಡೂ ಅಂಶಗಳು ತುಂಬ ಮಹತ್ವದಾಗಿದೆ ಎಂದಿದ್ದಾರೆ.

ವಿಜಯ್ಕುಮಾರ್ ವೈಶಾಖ್ ಅವರು ಪಂದ್ಯದ ಬೇರೆ ಬೇರೆ ಸನ್ನಿವೇಶಗಳಲ್ಲಿ ದಾಳಿಯನ್ನು ಸಂಘಟಿಸಬಲ್ಲ ಕ್ಷಮತೆಯನ್ನು ಹೊಂದಿರುವ ಬೌಲರ್. ಪಂಜಾಬ್ ಕಿಂಗ್ಸ್ ಇವರ ಮೇಲೆ ವಿಶ್ವಾಸವಿಟ್ಟಿದ್ದು ಇವರಿಗೆ ಡೆತ್ ಓವರ್ ಹಾಗೂ ಮಿಡ್ಲ್ ಓವರ್ಗಳ ಜವಾಬ್ದಾರಿಯನ್ನು ನೀಡಿದೆ. ತಮ್ಮ ಕ್ಷಮತೆಯ ಬಗ್ಗೆ ಮಾತನಾಡಿರುವ ಕನ್ನಡಿಗ ಬೌಲರ್, ನಾನು ಗಂಟೆಗೆ 155 ಕಿಲೊ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಬೌಲರ್ ಅಲ್ಲ. ಆದರೆ ನಾನು ಗಂಟೆಗೆ 140 ರಿಂದ 144 ಕಿಲೊ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಬಲ್ಲೆ. ನಾನು ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡುತ್ತೇನೋ ಅಥವಾ ಹಾಗೂ ಡೆತ್ ಓವರ್ಗಳಲ್ಲಿ ಬೌಲಿಂಗ್ ಮಾಡುತ್ತೇನೊ ತಿಳಿದಿಲ್ಲ. ಆದರೆ ನನ್ನ ಪ್ರದರ್ಶನ ತಂಡಕ್ಕೆ ನೆರವಾಗುತ್ತಿದೆ ಎಂಬುದೇ ಖುಷಿಯ ವಿಚಾರ ಎಂದಿದ್ದಾರೆ.
"ಇಂತಹ ಬಿಗ್ ಲೀಗ್ಗಳಲ್ಲಿ ನೀವು ಆಡುವಾಗ ಕಠಿಣ ಪರಿಶ್ರಮ ಪಡದೆ ಆಡುವುದು ಅಸಾಧ್ಯ. ನನಗೆ ಕರ್ನಾಟಕದ ಹಿರಿಯ ಆಟಗಾರರ ಪ್ರೇರಣೆ ಹಾಗೂ ಕೋಚ್ ಮಾರ್ಗದರ್ಶನ ಕಾಲಕಾಲಕ್ಕೆ ಸಿಗುತ್ತಲೇ ಇದೆ. ದೇಶೀಯ ಟೂರ್ನಿಗಳಲ್ಲಿ ಆಡಿದ್ದು ಸಹ ಆತ್ಮವಿಶ್ವಾಸ ಇಮ್ಮಡಿಗೊಳಿಸಿದೆ. ತಂಡದ ಸಹಾಯಕ ಸಿಬ್ಬಂದಿಗಳ ನೆರವಿನಿಂದ ನನ್ನ ಬೌಲಿಂಗ್ ಇನ್ನು ಉತ್ತಮವಾಗಿದೆ. ನಾನು ನನ್ನ ದಾಳಿಯಲ್ಲಿ ಭಿನ್ನತೆ ತರಲು ನೆರವಾಗಿದೆ" ಎಂದು ವೈಶಾಖ್ ತಿಳಿಸಿದ್ದಾರೆ.
ಪಂದ್ಯದ ಯಾವುದೇ ಸನ್ನಿವೇಶದಲ್ಲಿಯಾದರೂ ಬೌಲಿಂಗ್ ಮಾಡಲು ನಾನು ಸಿದ್ಧ. ನಾನು ಯಾರ್ಕರ್ಗಳನ್ನು ಎಸೆಯುವುದನ್ನು ರೂಡಿಸಿಕೊಂಡಿದ್ದೇನೆ ಎಂದಿದ್ದಾರೆ. ಇನ್ನು ಸಿಎಸ್ಕೆ ತಂಡದ ಆಯುಷ್ ಮಾತ್ರೆಯನ್ನು ಔಟ್ ಮಾಡುವಾಗ ಬಳಸಿದ ತಂತ್ರದ ಬಗ್ಗೆಯೂ ಸಹ ಮಾತನಾಡಿದ್ದಾರೆ. ಆಯುಷ್ ಲೆಗ್ ಸೈಡ್ನಲ್ಲಿ ಉತ್ತಮವಾಗಿ ಆಡಬಲ್ಲ ಆಟಗಾರ. ನಾವು ಅವರಿಗೆ ಪಾಯಿಂಟ್ ಹಾಗೂ ಥರ್ಡ್ ಮೆನ್ಗಳಲ್ಲಿ ಶಾಟ್ಗಳನ್ನು ಪ್ರಯೋಗಿಸಲು ಒತ್ತಾಯ ಮಾಡುತ್ತಿದ್ದೇವು. ಇದು ನನಗೆ ಅವರನ್ನು ಕಟ್ಟಿ ಹಾಕಲು ನೆರವಾಯಿತು.
ಪ್ರತಿ ಕ್ರಿಕೆಟ್ ಆಟಗಾರನ ಕನಸು ಇದ್ದಂತೆ ನಾನು ಸಹ ಭಾರತ ಟೆಸ್ಟ್ ತಂಡದ ಕ್ಯಾಪ್ ಧರಿಸುವ ಆಸೆಯನ್ನು ಹೊಂದಿದ್ದೇನೆ ಎಂದು ವಿಜಯ್ಕುಮಾರ್ ವೈಶಾಖ್ ತಿಳಿಸಿದ್ದಾರೆ.