19ನೇ ಆವೃತ್ತಿಯ ಐಪಿಎಲ್ಗೆ ದಿನಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಅಂತಿಮ ಹಂತದ ತಯಾರಿಗಳು ನಡೆದಿವೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳ ಮಧ್ಯೆ ಕಾದಾಟ ನಡೆಯಲಿದೆ. ಬಹುದಿನಗಳ ಬಳಿಕ ಬೆಂಗಳೂರಿನ ಐಕಾನಿಕ್ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಪಂದ್ಯ ಯಾವುದೇ ತೊಂದರೆಗಳು ಆಗದರೀತಿ ನಡೆಯಲಿ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ದೇವರ ಮೊರೆ ಹೋಗಿದೆ. ಇದೇ ವೇಳೆ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತದಲ್ಲಿ ಜೀವ ಕಳೆದುಕೊಂಡು ಅಭಿಮಾನಿಗಳ ನೆನಪಿನಲ್ಲಿ ಸ್ಮಾರಕ ನಿರ್ಮಿಸಿದೆ.
18ನೇ ಆವೃತ್ತಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ್ದ ಆರ್ಸಿಬಿ ಈ ಸಂಭ್ರಮವನ್ನು ಅಭಿಮಾನಿಗಳ ಜೊತೆ ಆಚರಿಸುವ ಉದ್ದೇಶದಿಂದ ಚಿನ್ನಸ್ವಾಮಿ ಮೈದಾನದಲ್ಲಿ ಸಮಾರಂಭವನ್ನು ಏರ್ಪಡಿಸಿತ್ತು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರಿಂದ ಕಾಲ್ತುಳಿತ ಸಂಭವಿಸಿ, 11 ಜನರು ಸಾವನ್ನಪ್ಪಿದರು. ಈಗಾಗಲೇ ಆರ್ಸಿಬಿ ಮ್ಯಾನೇಜ್ಮೆಂಟ್ ಈ 11 ಜನರ ಸ್ಮರಣಾರ್ಥ ಪಂದ್ಯದಲ್ಲಿ ವೇಳೆ 11 ಕುರ್ಚಿಗಳನ್ನು ಖಾಲಿ ಬಿಡಲು ನಿರ್ಧರಿಸಿದೆ. ಈಗ ಕೆಎಸ್ಸಿಎ ಅಭಿಮಾನಿಗಳ ನೆನಪಿನಲ್ಲಿ ಸ್ಮಾರಕ ಭವನವನ್ನು ನಿರ್ಮಾಣ ಮಾಡಿದೆ.

ಸ್ಮಾರಕದ ಮೇಲೆ ಇನ್ ಮೆಮೋರಿ ಆಫ್ ಫ್ಯಾನ್ಸ್ ಜೂನ್ 4, 2025 ಎಂದು ಬರೆಯಲಾಗಿದೆ. ಇವರ ನೆನಪಿಗಾಗಿ ಕೆಎಸ್ಸಿಎ ಮೈದಾನದಲ್ಲಿ 11 ಸೀಟುಗಳನ್ನು ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಖಾಲಿ ಬಿಡಲಾಗುವುದು ಎಂದು ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ. ಅಲ್ಲದೆ ಈ ಆಸನದ ಟಿಕೆಟ್ಗಳನ್ನು ಎಂದಿಗೂ ಮಾರಾಟ ಮಾಡುವುದಿಲ್ಲ ಎಂದು ಸಹ ಘೋಷಿಸಿದ್ದಾರೆ.
ಸ್ಮಾರಕವನ್ನು ಗೃಹಸಚಿವ ಜಿ ಪರಮೇಶ್ವರ್ ಅವರು ಉದ್ಘಾಟಿಸಿದರು. ಆ ಬಳಿಕ ಮಾತನಾಡಿದ ಅವರು ಕಳೆದ ವರ್ಷ ಆರ್ಸಿಬಿ ಸಂಭ್ರಮಾಚರಣೆಯ ವೇಳೆ ದುರಂತ ಸಂಭವಿಸಿದೆ. ಇದರಿಂದ ಕೆಎಸ್ಸಿಎ ಹಾಗೂ ರಾಜ್ಯ ಸರ್ಕಾರ ಟೀಕೆಗೆ ಗುರಿಯಾಗಿತ್ತು. ಸರ್ಕಾರ ನೇಮಿಸಿದ ಕುನ್ಹಾ ವರದಿಯ ಶಿಫಾರಸ್ಸಿನಂತೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಕೆಎಸ್ಸಿಎಗೆ ಅಭಿನಂದನೆ ಸಲ್ಲಿಸುತ್ತೇನೆ. ಇಂತಹ ದುರ್ಘಟನೆ ಮರುಕಳಿಸದ ಹಾಗೇ ನಡೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಪಂದ್ಯಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸಮಿತಿ ನೀಡಿರುವ ಮಾರ್ಗ ಸೂಚಿಗಳನ್ನು ಕೆಎಸ್ಸಿಎ ಪಾಲಿಸುವ ಭರವಸೆ ನೀಡಿದೆ.