ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ವೇಳೆ ಎಲ್ಲ ತಂಡಗಳು ತಮ್ಮ ತಮ್ಮ ಸಂಯೋಜನೆಯ ಬಗ್ಗೆ ತಲೆ ಕೆಡಿಸಿಕೊಂಡಿವೆ. ಆದರೆ ಮಾಜಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ಮತ್ತೊಂದು ಪೆಟ್ಟು ಬಿದ್ದಿದೆ. ಈಗಾಗಲೇ ವೇಗದ ಬೌಲರ್ ಹರ್ಷಿತ್ ರಾಣಾ ಗಾಯದಿಂದ ಚೇತರಿಸಿಕೊಳ್ಳದೇ ಇರುವುದು ತಂಡಕ್ಕೆ ದೊಡ್ಡ ಪೆಟ್ಟು ನೀಡಿದೆ. ಈ ವೇಳೆ ಮತ್ತೊಬ್ಬ ವೇಗದ ಬೌಲರ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಈ ಮೂಲಕ ಕೆಕೆಆರ್ ಕ್ಯಾಂಪ್ನಲ್ಲಿ ಚಿಂತೆಯ ಕಾರ್ಮೋಡ ಕವಿದಿದೆ.
ಇತ್ತೀಚಿಗೆ ಶ್ರೀಲಂಕಾದ ವೇಗದ ಬೌಲರ್ ಮತಿಶ ಪತಿರಾನ ಫಿಟ್ ಆಗಿರುವ ಸುದ್ದಿ ಬರುತ್ತಿದ್ದಂತೆ, ಈಗ ಕೆಕೆಆರ್ ತಂಡ ವೇಗದ ಬೌಲರ್ ಗಾಯಕ್ಕೆ ತುತ್ತಾಗಿರುವುದು ತಿಳಿದು ಬಂದಿದೆ. ಈ ಬೌಲರ್ ಬೇರೆ ಯಾರೂ ಅಲ್ಲ ಆಕಾಶ್ ದೀಪ್. ಇವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಮುಂಬರುವ ಐಪಿಎಲ್ ಸೀಸನ್ ನಿಂದ ಹೊರಗುಳಿದಿದ್ದಾರೆ. ಪರಿಣಾಮ, ವೇಗದ ಬೌಲರ್ಗಳು ನಿರಂತರ ಗಾಯಕ್ಕೆ ತುತ್ತಾಗುತ್ತಿರುವುದು ತಂಡಕ್ಕೆ ನುಂಗಲಾರದ ಸಮಸ್ಯೆಯಾಗಿದೆ.

ಆಕಾಶ್ ದೀಪ್ ಅವರು ಐಪಿಎಲ್ 2026 ಆಡಲು ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ. ಗಾಯದ ಸಮಸ್ಯೆಯಿಂದಾಗಿ ಅವರು ಪೂರ್ತಿ ಆವೃತ್ತಿ ತಂಡದಿಂದ ಹೊರಗುಳಿಯಲಿದ್ದಾರೆ.29 ವರ್ಷದ ವೇಗದ ಬೌಲರ್ ಆಕಾಶ್ ದೀಪ್ ಅವರನ್ನು ಕೆಕೆಆರ್ ತಂಡ, ಅಬುಧಾಬಿಯಲ್ಲಿ ನಡೆದಿದ್ದ ಮಿನಿ ಹರಾಜಿನಲ್ಲಿ 1 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಹರ್ಷಿತ್ ರಾಣಾ ಅನುಪಸ್ಥಿತಿಯಲ್ಲಿ ಆಕಾಶ್ ದೀಪ್ ವೇಗದ ದಾಳಿಯನ್ನು ಮುನ್ನಡೆಸುವ ನಿರೀಕ್ಷೆಯಿತ್ತು. ಇವರು ಗಾಯಕ್ಕೆ ತುತ್ತಾಗಿರುವುದು ನಿಜಕ್ಕೂ ತಂಡದ ಮನೋಬಲಕ್ಕೆ ಪೆಟ್ಟು ನೀಡಿದೆ.
ಆಕಾಶ್ ದೀಪ್ ದೇಶೀಯ ಟುರ್ನಿಗಳಲ್ಲಿ ಬಂಗಾಳ ತಂಡದ ಪರ ಆಡುತ್ತಾರೆ. ಇವರು ವೃತ್ತಿ ಜೀವನದ ಉದ್ದಕ್ಕೂ ಗಾಯದ ಸಮಸ್ಯೆಯನ್ನು ಎದುರಿಸಿದ್ದಾರೆ. 2022ರಲ್ಲಿ ಆಕಾಶ್ ದೀಪ್ ಐಪಿಎಲ್ಗೆ ಪದಾರ್ಪಣೆ ಮಾಡಿದರು. ಅಲ್ಲಿಂದ ಈ ವರೆಗೆ ಇವರು ಒಟ್ಟು 14 ಪಂದ್ಯಗಳನ್ನು ಆಡಿದ್ದು, 10 ವಿಕೆಟ್ ಕಬಳಿಸಿದ್ದಾರೆ. ಈ ವೇಳೆ ಇವರ ಎಕಾನಮಿ 11.82 ಆಗಿದೆ. ಇವರು ಈ ವರೆಗೆ ಐಪಿಎಲ್ನಲ್ಲಿ ಒಂದು ಆವೃತ್ತಿಯನ್ನೂ ಸಹ ಪೂರ್ತಿಯಾಗಿ ಆಡಿಲ್ಲ. ಇವರು ಭಾರತದ ಪರ 10 ಟೆಸ್ಟ್ ಪಂದ್ಯಗಳನ್ನು ಆಡಿದ್ದು 28 ವಿಕೆಟ್ ಕಬಳಿಸಿದ್ದಾರೆ. ಇವರಿಗೆ ಸೀಮಿತ ಓವರ್ಗಳ ಪಂದ್ಯವಾಡುವ ಅವಕಾಶ ಇನ್ನು ಸಿಕ್ಕಿಲ್ಲ.
ಆಕಾಶ್ ದೀಪ್ ಸದ್ಯ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ನಲ್ಲಿ ಪುನರ್ವಸತಿ ಪಡೆಯುತ್ತಿದ್ದಾರೆ. ಅವರ ಗಾಯದ ತೀವ್ರತೆಯ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ. ಕೆಕೆಆರ್ ಮಾರ್ಚ್ 18 ರಂದು ಕೋಲ್ಕತ್ತಾದಲ್ಲಿ ಶಿಬಿರವನ್ನು ಪ್ರಾರಂಭಿಸಿತು, ಆದರೆ ಆಕಾಶ್ ದೀಪ್ ಹಾಜರಾಗಲು ಸಾಧ್ಯವಾಗಲಿಲ್ಲ.ಇವರಿಗೆ ಬದಲಿ ಆಟಗಾರನನ್ನು ಹುಡುಕುವುದು ಸಹ ಕೆಕೆಆರ್ ತಂಡಕ್ಕೆ ಸವಾಲಾಗಿದೆ.