ಇನ್ನೇನು ಕೆಲವೇ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಲೀಗ್ನಲ್ಲಿ ಒಟ್ಟು ತಂಡಗಳು ಕಣಕ್ಕೆ ಇಳಿಯಲಿವೆ. ಈಗಾಗಲೇ 10 ತಂಡಗಳ ಆಟಗಾರರು ಭರದ ಅಭ್ಯಾಸ ನಡೆಸಿದ್ದಾರೆ. ಈ ನಡುವೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸೌರವ್ ಗಂಗೂಲಿ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ಈ ಐಪಿಎಲ್ನಲ್ಲಿ ಇವರು ಈ ಆಟಗಾರನ ಆಟವನ್ನು ನೋಡಲು ಕಾತುರರಾಗಿರುವುದಾಗಿ ತಿಳಿಸಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಆಡಲಿರುವ ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ ಸೇರಿದಂತೆ ಹಲವು ಆಟಗಾರರ ಬಗ್ಗೆ ಸೌರವ್ ಗಂಗೂಲಿ ಮಾತನಾಡಿದ್ದಾರೆ. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ಆಕಿಬ್ ನಬಿ ಬಗ್ಗೆಯೂ ಮಾತನಾಡಿದ್ದಾರೆ. ಈ ಪ್ಲೇಯರ್ ಇತ್ತೀಚೆಗೆ ನಡೆದ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಇವರು ಸಹ ಈ ಬಾರಿಯ ಐಪಿಎಲ್ನಲ್ಲಿ ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದಾರೆ. ಆಕಿಬ್ ನಬಿ ಅವರನ್ನು ದೆಹಲಿ ಕ್ಯಾಪಿಟಲ್ಸ್ನಿಂದ ₹8.4 ಕೋಟಿ ರೂ. ನೀಡಿ ಖರೀದಿಸಿದೆ.

ಪಿಟಿಐ ಜೊತೆಗೆ ಮಾತನಾಡಿರುವ ಗಂಗೂಲಿ, ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಯಶಸ್ವಿ ಜೈಸ್ವಾಲ್, ಆಯುಷ್ ಮಹಾತ್ರೆ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಆಟಗಾರರು ಐಪಿಎಲ್ನಲ್ಲಿ ಆಡುತ್ತಿದ್ದಾರೆ. ಆದರೆ ನಾನು ಜಮ್ಮು ವೇಗಿಯ ಆಟವನ್ನು ನೋಡಲು ಕಾತರದಿಂದ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದೇ ಸಂಭಾಷಣೆಯಲ್ಲಿ ದಾದಾ ಇಂಪ್ಯಾಕ್ಟ್ ಪ್ಲೇಯರ್ ಬಗ್ಗೆಯೂ ಮಾತನಾಡಿದ್ದಾರೆ. ಈ ನಿಯಮವನ್ನು ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಟೀಕಿಸಿದ್ದರು. ಇದೇ ನಿಯಮದ ಬಗ್ಗೆ ಮಾತನಾಡಿರುವ ಗಂಗೂಲಿ, 'ಇಂಪ್ಯಾಕ್ಟ್ ಪ್ಲೇಯರ್ ಉಳಿಯಲಿದೆ ಎಂದು ನಾನು ಭಾವಿಸುತ್ತೇನೆ. ನಾನು ಬಿಸಿಸಿಐ ಅಧ್ಯಕ್ಷನಾಗಿದ್ದಾಗ ಇದನ್ನು ಪರಿಚಯಿಸಲಾಯಿತು. ಈ ನಿಯಮ ಉಳಿಯುತ್ತದೆ. ಇದು ಕೆಲವರಿಗೆ ಇಷ್ಟವಾಗುತ್ತದೆ, ಇನ್ನು ಹಲವರಿಗೆ ಇಷ್ಟವಾಗುವುದಿಲ್ಲ ಎಂದಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮಗಳ ಪ್ರಕಾರ ಎರಡೂ ತಂಡಗಳು ಆಡುವ ಪ್ಲೇಯಿಂಗ್ ಇಲೆವೆನ್ನಲ್ಲಿ ಒಬ್ಬ ಆಟಗಾರರನ್ನು ಬದಲಾಯಿಸುವ ಅವಕಾಶ ಹೊಂದಿರುತ್ತಾರೆ.

ಗಂಗೂಲಿ ತಾವು ಕ್ರಿಕೆಟ್ನೊಂದಿಗೆ ಸಂಬಂಧ ಹೊಂದುವುದಾಗಿ ತಿಳಿಸಿದ್ದಾರೆ. ಅದು ಕೋಚ್ ಆಗಿರಲಿ, ಬೇರೆ ಪಾತ್ರದಲ್ಲಾಗಲಿ ಎಂದಿದ್ದಾರೆ. ನನ್ನ ವೃತ್ತಿಜೀವನದಲ್ಲಿ ನಾನು ಪ್ರತಿಯೊಂದು ಪಾತ್ರವನ್ನು ನಿರ್ವಹಿಸಿದ್ದೇನೆ - ಆಟಗಾರ, ನಾಯಕ ಮತ್ತು ಆಡಳಿತಾಧಿಕಾರಿ, ಇನ್ನು ಭವಿಷ್ಯದಲ್ಲಿ ಕೋಚಿಂಗ್ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಸಿದ್ಧ ಎಂದು ಅವರು ತಿಳಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು ಅಂತಿಮವಾಗಿ SA20 ಲೀಗ್ ಫೈನಲ್ ತಲುಪಿತು.

ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯ ಮಾರ್ಚ್ 28 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಲಿವೆ.