
ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಪ್ರತಿನಿಧಿಸುವ ರಾಯಲ್ ಚಾಲೆಂಜರ್ಸ್ ತಂಡದಲ್ಲಿ ರಾಜ್ಯದ ಪ್ರತಿಭಾನ್ವಿತ ಆಟಗಾರರಿಗೆ ಸ್ಥಾನ ಸಿಗುವುದಿಲ್ಲ ಎನ್ನುವ ಅಭಿಮಾನಿಗಳ ಆಕ್ರೋಶ ಹಿಂದಿನಿಂದಲೂ ಇದೆ. ಅದು ಈಗಿನ ಐಪಿಎಲ್ ಮಿನಿ ಹರಾಜಿನ ನಂತರವೂ ಮುಂದುವರಿದಿದೆ.
ಇದುವರೆಗಿನ ಐಪಿಎಲ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಸಾಧನೆಯನ್ನೇನು ಮಾಡದ ಆರ್ಸಿಬಿ ತಂಡಕ್ಕೆ ಉತ್ತಮ ಬ್ಯಾಟ್ಸಮ್ಯಾನಿನ ಅಗತ್ಯವಿದೆ. ಹಾಗಾಗಿ, ರಾಜ್ಯದ ಮಯಾಂಕ್ ಅಗರ್ವಾಲ್ ಮತ್ತು ಮನೀಶ್ ಪಾಂಡೆ ಅವರನ್ನು ಈ ಬಾರಿ ರಾಯಲ್ ಚಾಲೆಂಜರ್ಸ್ ಖರೀದಿಸಬಹುದು ಎನ್ನುವ ಲೆಕ್ಕಾಚಾರವಿತ್ತು.
ಆದರೆ, ಅದು ನಡೆಯಲಿಲ್ಲ, ಇಬ್ಬರೂ ಈ ಸ್ಟಾರ್ ಆಟಗಾರರು ಬೇರೆ ತಂಡದ ಪಾಲಾಗಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ತಂಡ ಮನೀಶ್ ಪಾಂಡೆಯನ್ನು 2.4 ಕೋಟಿಗೆ ಮತ್ತು ಮಯಾಂಕ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ 8.25 ಕೋಟಿಗೆ ಖರೀದಿಸಿತು. ಆ ಮೂಲಕ, ಈ ಇಬ್ಬರು ಆಟಗಾರರು ಈ ಬಾರಿ ಬೆಂಗಳೂರು ಪರ ಆಡಲಿದ್ದಾರೆ ಕ್ರಿಕೆಟ್ ಅಭಿಮಾನಿಗಳ ಕನಸು, ಕನಸಾಗಿಯೇ ಉಳಿಯಿತು.

ಸದ್ಯ ರಾಯಲ್ ಚಾಲೆಂಜರ್ಸ್ ತಂಡದಲ್ಲಿರುವ ಏಕೈಕ ಕರ್ನಾಟಕ ಮೂಲದ ಆಟಗಾರನೆಂದರೆ ಅದು ಮನೋಜ್ ಶಿವರಾಂಸ ಭಾಂಡಗೆ ಮಾತ್ರ. ಈ ಆಟಗಾರನನ್ನು ಆರ್ಸಿಬಿ ಮಂಡಳಿ ಮೂಲಬೆಲೆ ಇಪ್ಪತ್ತು ಲಕ್ಷ ರೂಪಾಯಿಗೆ ಖರೀದಿಸಿದೆ.
ಮೂಲತಃ ರಾಯಚೂರಿನವರಾದ ಭಾಂಡಗೆ, ಕರ್ನಾಟಕ ಪ್ರೀಮಿಯಲ್ ಲೀಗ್ ನಲ್ಲಿ ಬಿಜಾಪುರ ಬುಲ್ಸ್ ಪರ ಆಡಿದ್ದಾರೆ. ಇತ್ತೀಚೆಗೆ ನಡೆದ ಮುಸ್ತಾಕ್ ಆಲಿ ಟ್ರೋಫಿಯಲ್ಲಿ ಭಾಂಡಗೆ ಉತ್ತಮ ಪ್ರದರ್ಶನವನ್ನು ನೀಡಿದ್ದರು.
ಎಡಗೈ ಬ್ಯಾಟ್ಸಮ್ಯಾನ್, ಬಲಗೈ ಮೀಡಿಯಂ ಫಾಸ್ಟ್ ಬೌಲರ್ ಆಗಿರುವ ಭಾಂಡಗೆ, ಟಿ20 ಫಾರ್ಮ್ಯಾಟ್ ಬ್ಯಾಟಿಂಗ್ ನಲ್ಲಿ 154.66 ಸ್ಟ್ರೈಕ್ ರೇಟ್ ಮತ್ತು ಬೌಲಿಂಗ್ ನಲ್ಲಿ 9.50 ಇಕಾನಮಿ ರೇಟ್ ಅನ್ನು ಹೊಂದಿದ್ದಾರೆ.
ಕಳೆದ ಬಾರಿಯ ಐಪಿಎಲ್ ನಲ್ಲಿ ಕರ್ನಾಟಕದಿಂದ ಅನೀಶ್ವರ್ ಗೌತಂ ಮತ್ತು ಲುವನೀತ್ ಸಿಸೋಡಿಯಾ ಇಬ್ಬರಿದ್ದರು. ಈ ಸಂಖ್ಯೆ ಈಗ ಒಂದಕ್ಕೆ ಇಳಿದಿದೆ. ಕೆ.ಎಲ್.ರಾಹುಲ್, ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್, ದೇವದತ್ ಪಡಿಕಲ್, ಪ್ರಸಿದ್ದ ಕೃಷ್ಣ, ಶ್ರೇಯಸ್ ಐಯ್ಯರ್ ಮುಂತಾದ ಘಟಾನುಗಟಿಗಳು ಬೇರೆ ತಂಡಕ್ಕೆ ಆಡುತ್ತಿದ್ದಾರೆ.