2008ರಿಂದ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಮೂರು ಫೈನಲ್ಗೆ ಪ್ರವೇಶಿಸಿದ್ದರೂ, ಒಂದು ಬಾರಿಯೂ ಪ್ರಶಸ್ತಿಯನ್ನು ಗೆದ್ದಿಲ್ಲ ಎಂಬುದು ಗಮನಾರ್ಹ.
ಮುಂಬರುವ 2024ರ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ, ಡಿಸೆಂಬರ್ 19ರಂದು ದುಬೈನಲ್ಲಿ ನಿಗದಿಪಡಿಸಲಾಗಿದೆ. ಬೆಂಗಳೂರು ಫ್ರಾಂಚೈಸಿ ಐಪಿಎಲ್ನ ಮುಂಬರುವ ಆವೃತ್ತಿಯಲ್ಲಿ ಜಿಂಕ್ಸ್ ಅನ್ನು ಕೊನೆಗೊಳಿಸಲು ಅಗತ್ಯವಾದ ಪ್ರತಿಭೆಗಳನ್ನು ಪಡೆಯಲು ಪ್ರಯತ್ನಿಸಲಿದೆ.
ಆರ್ಸಿಬಿ ಈ ಋತುವಿನಲ್ಲಿ ತಮ್ಮ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಬದಲಾವಣೆ ಮಾಡಿದೆ. ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಫಾಫ್ ಡು ಪ್ಲೆಸಿಸ್ ನಾಯಕತ್ವದ ತಂಡವು 11 ಆಟಗಾರರನ್ನು ಅದರಲ್ಲಿ ಹೆಚ್ಚಿನ ಬೌಲರ್ಗಳನ್ನು ಕೈಬಿಡಲು ನಿರ್ಧರಿಸಿತು.

ಆರ್ಸಿಬಿ ಬಿಡುಗಡೆ ಮಾಡಿದ ಸಾಗರೋತ್ತರ ಆಟಗಾರರಲ್ಲಿ ವನಿಂದು ಹಸರಂಗ, ಜೋಶ್ ಹ್ಯಾಜಲ್ವುಡ್, ಫಿನ್ ಅಲೆನ್, ಮೈಕಲ್ ಬ್ರೇಸ್ವೆಲ್, ಡೇವಿಡ್ ವಿಲ್ಲಿ ಮತ್ತು ವೇಯ್ನ್ ಪಾರ್ನೆಲ್ ಸೇರಿದ್ದಾರೆ.
ಕೈ ಬಿಟ್ಟ ಭಾರತೀಯ ಆಟಗಾರರ ಪಟ್ಟಿಯಲ್ಲಿ ಹರ್ಷಲ್ ಪಟೇಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ಧಾರ್ಥ್ ಕೌಲ್ ಮತ್ತು ಕೇದಾರ್ ಜಾಧವ್ ಇದ್ದಾರೆ.
ಇವರ ನಿರ್ಗಮನದ ಹೊರತಾಗಿ, ಟ್ರೇಡ್ ವಿಂಡೋದಲ್ಲಿ ಆರ್ಸಿಬಿ ತಂಡವು ಮುಂಬೈ ಇಂಡಿಯನ್ಸ್ನಿಂದ ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮೆರಾನ್ ಗ್ರೀನ್ ಅವರನ್ನು ಎಲ್ಲಾ ನಗದು ಒಪ್ಪಂದದಲ್ಲಿ ವ್ಯಾಪಾರ ಮಾಡಿಕೊಂಡಿತು.
ಇದಕ್ಕೂ ಮುನ್ನ ಆರ್ಸಿಬಿ ಆಲ್ರೌಂಡರ್ ಶಹಬಾಜ್ ಅಹ್ಮದ್ ಅವರನ್ನು ಬಿಟ್ಟುಕೊಟ್ಟು ಬದಲಿಗೆ ಸನ್ರೈಸರ್ಸ್ ಹೈದರಾಬಾದ್ನಿಂದ ಮಯಾಂಕ್ ಡಾಗರ್ ಅವರನ್ನು ವ್ಯಾಪಾರ ಮಾಡಿದೆ.

ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೊರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ವಿಜಯ್ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಮಯಾಂಕ್ ಡಾಗರ್, ಕ್ಯಾಮೆರಾನ್ ಗ್ರೀನ್.
ಉಳಿಸಿಕೊಂಡ ಮತ್ತು ಬಿಡುಗಡೆ ಲೆಕ್ಕಹಾಕಿದ ನಂತರ, ಆರ್ಸಿಬಿ ತಂಡ 23.25 ಕೋಟಿ ರೂಪಾಯಿಗಳ ಪರ್ಸ್ನೊಂದಿಗೆ ಮಿನಿ ಹರಾಜಿಗೆ ಹೋಗಲಿದೆ. ಇನ್ನೂ ಆರು ಸ್ಲಾಟ್ಗಳನ್ನು ಭರ್ತಿ ಮಾಡಬೇಕಾಗಿದ್ದು, ಇದರಲ್ಲಿ ಮೂರು ಸಾಗರೋತ್ತರ ಆಟಗಾರರು ಸೇರಿದ್ದಾರೆ.
ಮಂಗಳವಾರದ ಹರಾಜಿನಲ್ಲಿ ಫಾಫ್ ಡು ಪ್ಲೆಸಿಸ್ ಮತ್ತು ಆರ್ಸಿಬಿ ಮ್ಯಾನೇಜ್ಮೆಂಟ್ ಯಾವ ಆಟಗಾರರನ್ನು ಗುರಿಯಾಗಿಸಿಕೊಂಡಿದೆ ಎಂಬುದು ಐಪಿಎಲ್ 2024ರ ಸೀಸನ್ಗೆ ಪ್ರಮುಖವಾಗಿದೆ.
ಆರ್ಸಿಬಿ ಸ್ಪಷ್ಟ ತಂತ್ರದೊಂದಿಗೆ 2024ರ ಐಪಿಎಲ್ ಹರಾಜಿಗೆ ಪ್ರವೇಶಿಸಲಿದೆ. ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ, ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ವೇಗಿ ಜೋಶ್ ಹೇಝಲ್ವುಡ್, ಇಂಗ್ಲೆಂಡ್ನ ಎಡಗೈ ಬೌಲರ್ ಡೇವಿಡ್ ವಿಲ್ಲಿ ಮತ್ತು ದಕ್ಷಿಣ ಆಫ್ರಿಕಾದ ಆಲ್ರೌಂಡರ್ ವೇಯ್ನ್ ಪಾರ್ನೆಲ್ ಅವರಂತಹ ಕೆಲವು ಪ್ರಮುಖ ಬೌಲರ್ಗಳನ್ನು ಬಿಡುಗಡೆ ಮಾಡಿದ ಆರ್ಸಿಬಿ ತಮ್ಮ ಬೌಲಿಂಗ್ ಪಡೆಯನ್ನು ಬಲಪಡಿಸಲು ಉತ್ಸುಕರಾಗಿದೆ.
2023ರ ಏಕದಿನ ವಿಶ್ವಕಪ್ ಸಂದರ್ಭದಲ್ಲಿ ಗಾಯದ ಹಿನ್ನಡೆಯ ಹೊರತಾಗಿಯೂ ಬೆಂಗಳೂರು ತಂಡವು ಇಂಗ್ಲೆಂಡ್ ವೇಗಿ ರೀಸ್ ಟೋಪ್ಲೆಯನ್ನು ಉಳಿಸಿಕೊಂಡಿದೆ. ಆರ್ಸಿಬಿ ತಂಡದ ಮುಖ್ಯ ಉದ್ದೇಶವು ಭಾರತೀಯ ವೇಗಿ ಮೊಹಮ್ಮದ್ ಸಿರಾಜ್ಗೆ ಪೂರಕವಾಗಿರುವ ಮುಂಚೂಣಿ ಬೌಲರ್ನನ್ನು ಪಡೆದುಕೊಳ್ಳುವುದು.
ಆರ್ಸಿಬಿಯ ಆದ್ಯತೆ ಪಟ್ಟಿಯ ಮುಂಚೂಣಿಯಲ್ಲಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಇದ್ದಾರೆ. ಸ್ಟಾರ್ಕ್ ಈ ಹಿಂದೆ 2015ರಲ್ಲಿ ಆರ್ಸಿಬಿ ಪರ ಕಾಣಿಸಿಕೊಂಡಿದ್ದರು.
ಮುಂದಿನ ವರ್ಷ ಐಪಿಎಲ್ಗೆ ಮರಳಲು ತಮ್ಮ ಆಸಕ್ತಿ ವ್ಯಕ್ತಪಡಿಸಿರುವ ಮಿಚೆಲ್ ಸ್ಟಾರ್ಕ್, ಆರ್ಸಿಬಿಗೆ ಹೆಚ್ಚಿನ ಆದ್ಯತೆಯಾಗಲಿದೆ ಮತ್ತು ಮುಂಬರುವ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ ಅವರ ಸೇವೆ ಪಡೆದುಕೊಳ್ಳಲು ಎದುರು ನೋಡುತ್ತದೆ.
ಮತ್ತೊಂದೆಡೆ, ಡೇವಿಡ್ ವಿಲ್ಲಿ ಅವರನ್ನು ಕಡಿಮೆ ಬೆಲೆಗೆ ಪುನಃ ಪಡೆದುಕೊಳ್ಳುವುದು ಆರ್ಸಿಬಿಯ ಹರಾಜು ತಂತ್ರದ ಒಂದು ಭಾಗವಾಗಿದೆ. 2023ರ ಏಕದಿನ ವಿಶ್ವಕಪ್ನಲ್ಲಿ ಆಂಗ್ಲ ವೇಗಿ ಆರು ಪಂದ್ಯಗಳಲ್ಲಿ 11 ವಿಕೆಟ್ಗಳನ್ನು ಪಡೆದರು.
ದಕ್ಷಿಣ ಆಫ್ರಿಕಾದ ವೇಗಿ ಜೆರಾಲ್ಡ್ ಕೊಯೆಟ್ಜಿ ಆರ್ಸಿಬಿ ತಂಡದ ಟಾರ್ಗೆಟ್ನಲ್ಲಿರುವ ಮತ್ತೊಬ್ಬ ವೇಗಿ. ಹರಿಣ ಪಡೆಯ ವೇಗಿ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಎಂಟು ಪಂದ್ಯಗಳಲ್ಲಿ 20 ವಿಕೆಟ್ಗಳೊಂದಿಗೆ ಕಬಳಿಸಿದರು.
ಮೊಹಮ್ಮದ್ ಸಿರಾಜ್ ಜೊತೆ ಜೆರಾಲ್ಡ್ ಕೊಯೆಟ್ಜಿ ಜೋಡಿಯು ಆರ್ಸಿಬಿ ತಂಡಕ್ಕಾಗಿ ಮಾರಕ ಬೌಲಿಂಗ್ ಸಂಯೋಜನೆಯನ್ನು ರಚಿಸಬಹುದು. ವನಿಂದು ಹಸರಂಗ ಬಿಡುಗಡೆಯ ನಂತರ, ಆರ್ಸಿಬಿ ಸ್ಪಿನ್ನರ್ಗಾಗಿ ಹುಡುಕಾಟ ನಡೆಸಲಿದೆ. ಲೆಗ್ ಸ್ಪಿನ್ನರ್ ಕಳೆದ ಮೂರು ಋತುಗಳಲ್ಲಿ ಬೆಂಗಳೂರು ಫ್ರಾಂಚೈಸಿ ಭಾಗವಾಗಿದ್ದರು.
ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ಗೆ ಬಿಡ್ ಮಾಡುವ ಆಯ್ಕೆಯನ್ನು ಆರ್ಸಿಬಿ ಇಟ್ಟುಕೊಂಡಿದೆ. 2 ಕೋಟಿ ರೂಪಾಯಿ ಮೂಲ ಬೆಲೆಯೊಂದಿಗೆ, ಆದಿಲ್ ರಶೀದ್ ಅನುಭವವನ್ನು ಆರ್ಸಿಬಿ ತಂಡಕ್ಕೆ ತರುತ್ತಾರೆ.