ಭಾರೀ ಕುತೂಹಲ ಮೂಡಿಸಿದ್ದ ಐಪಿಎಲ್ ಮೆಗಾ ಹರಾಜು ಮೊದಲ ದಿನ ಪೂರ್ಣಗೊಂಡಿದ್ದು, ಹಲವು ತಂಡಗಳು ಸ್ಟಾರ್ ಆಟಗಾರರನ್ನು ಖರೀದಿ ಮಾಡಿವೆ. ಇನ್ನು ನಾಯಕನ ಹುಡುಕಾಟದಲ್ಲಿದ್ದ ತಂಡಗಳು ತಮ್ಮ ತಂಡಕ್ಕೆ ನಾಯಕರನ್ನು ಕರೆತರುವಲ್ಲಿ ಸಫಲವಾಗಿವೆ. ಮೊದಲ ದಿನದ ಹರಾಜಿನಲ್ಲಿ ಹಲವು ಸ್ಟಾರ್ ಆಟಗಾರರು ಐಪಿಎಲ್ ಮೆಗಾ ಹರಾಜು ಅಂಗಳ ಪ್ರವೇಶಿಸಿದ್ದರು. ಈ ವೇಳೆ ನಾಲ್ಕು ತಂಡಗಳಿಗೆ ತಮ್ಮ ನಾಯಕ ಹರಾಜಿನಲ್ಲಿ ಸಿಕ್ಕಂತೆ ಆಗಿದೆ.
ಮೆಗಾ ಹರಾಜಿನಲ್ಲಿ ಎಲ್ಲರ ಚಿತ್ತ ಕದ್ದಿದ್ದ ಮಾರ್ಕಿ ಪ್ಲೇಯರ್ ಆಕ್ಷನ್ನಲ್ಲಿ ಸ್ಟಾರ್ ಆಟಗಾರರು ಭಾರೀ ಮೊತ್ತವನ್ನು ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ. ನಿರೀಕ್ಷೆ ಹೆಚ್ಚಿಸಿದ್ದ ಆಟಗಾರರು ಅಂದುಕೊಂಡಷ್ಟು ಹಣಕ್ಕೆ ಬಿಕರಿ ಆಗಿಲ್ಲ. ಐಪಿಎಲ್ ಹಾರಜಿನಲ್ಲಿ ಮಾಲೀಕರು ಕ್ಯಾಪ್ಡ್ ಹಾಗೂ ಅನ್ ಕ್ಯಾಪ್ಡ್ ಆಟಗಾರರಿಗೆ ಭಾರೀ ಮೊತ್ತವನ್ನು ವಾವತಿಸಿದ್ದಾರೆ.

ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಹರಾಜಿನ ಅಂಗಳಕ್ಕೆ ಬಿಟ್ಟಿತ್ತು. ಹೀಗಾಗಿ ಈ ಬಾರಿ ಕೆಕೆಆರ್ ತಂಡವನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಇದಕ್ಕೆ ಪೂರಕ ಎಂಬಂತೆ, ಕೆಕೆಆರ್ ಭಾರೀ ಮೊತ್ತವನ್ನು ಪಾವತಿಸಿ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಅವರಿಗೆ ಮಣೆ ಹಾಕಿದೆ. ಕೆಕೆಆರ್ ವೆಂಕಟೇಶ್ ಅಯ್ಯರ್ ಅವರನ್ನು 23.75 ಕೋಟಿ ರೂಪಾಯಿಗೆ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಈ ಮೂಲಕ ವೆಂಕಟೇಶ್ ಅಯ್ಯರ್ ಮುಂದಿನ ವರ್ಷ ತಮ್ಮ ತಂಡದ ನಾಯಕತ್ವ ವಹಿಸಬಹುದು ಎಂಬ ಸಂಕೇತವನ್ನು ನೀಡಿದೆ.
ಈ ಬಾರಿ ಐಪಿಎಲ್ ಹರಾಜು ಆರಂಭವಾಗುವ ಮೊದಲ ಕೆಎಲ್ ರಾಹುಲ್ ಯಾವ ತಂಡಕ್ಕೆ ಸೇರಿಕೊಳ್ಳುತ್ತಾರೆ ಎಂಬ ಕುತೂಹಲ ಇತ್ತು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕರ್ನಾಟಕದ ಸೂಪರ್ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ. ಇವರು ಅಂದುಕೊಷ್ಟು ದೊಡ್ಡ ಮೊತ್ತಕ್ಕೆ ಬಿಡ್ ಆಗದೇ ಇದ್ದರೂ,14 ಕೋಟಿ ರೂಪಾಯಿ ಪಡೆದಿದ್ದಾರೆ. ರಾಹುಲ್ ದೆಹಲಿಯ ಮುಂದಿನ ನಾಯಕನಾಗಲಿದ್ದಾರೆ ಎಂಬುದು ಸ್ಪಷ್ಟವಾಯಿತು.
ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕೈ ಬಿಟ್ಟ ರಿಷಭ್ ಪಂತ್ ಅವರಿಗೆ ಮಣೆ ಹಾಕುವಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸಫಲವಾಗಿದೆ. ಇವರನ್ನು ಕೊಳ್ಳಲು ಎಲ್ಎಸ್ಜಿ ಭಾರೀ ಮೊತ್ತವನ್ನು ಹೂಡಿದೆ. ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರಿಗೆ ಎಲ್ಎಸ್ಜಿ 27 ಕೋಟಿ ಹಣವನ್ನು ನೀಡಿ ತಮ್ಮ ತಂಡಕ್ಕೆ ಬರಮಾಡಿಕೊಂಡಿದೆ. ಈ ಮೂಲಕ ರಿಷಬ್ ಪಂತ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು.
ಪಂಜಾಬ್ ಕಿಂಗ್ಸ್ 26.75 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ನೀಡಿ ಶ್ರೇಯಸ್ ಅಯ್ಯರ್ ಅವರನ್ನು ಸೇರಿಸಿಕೊಂಡಿದೆ. ಕಳೆದ ಋತುವಿನಲ್ಲಿ ಕೆಕೆಆರ್ ಅನ್ನು ಚಾಂಪಿಯನ್ ತಂಡಕ್ಕೆ ಏರಿಸಿದ್ದ ಶ್ರೇಯಸ್, ಇನ್ನು ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಅಯ್ಯರ್ ಅವರ ಅತ್ಯುತ್ತಮ ನಾಯಕತ್ವವನ್ನು ನೋಡಿದ ಪಂಜಾಬ್ ಅವರಿಗೆ ತನ್ನ ತಂಡದ ನಾಯಕತ್ವವನ್ನು ನೀಡುವುದು ಬಹುತೇಕ ಖಚಿತವಾಗಿದೆ.