ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿಗೆ ಲೆಕ್ಕಾಚಾರಗಳು ಆರಂಭವಾಗಿವೆ. ಈ ಬಾರಿ ತಾವು ಕೈ ಬಿಟ್ಟ ಹಾಗೂ ತಂಡದಲ್ಲಿ ಉಳಿಸಿಕೊಂಡ ಆಟಗಾರರನ್ನು ಫ್ರಾಂಚೈಸಿಗಳು ಬಿಡುಗಡೆ ಮಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಹ ಸ್ಟಾರ್ ಆಟಗಾರರನ್ನು ಉಳಿಸಿಕೊಂಡಿದ್ದು, ಹಲವರನ್ನು ಕೈ ಬಿಟ್ಟಿದೆ. ಅಲ್ಲದೆ ಡಿಸೆಂಬರ್ 16 ರಂದು ಆರಂಭವಾಗುವ ಹರಾಜಿನಲ್ಲಿ ಆರ್ಸಿಬಿ (RCB) ತಂಡ ಕರ್ನಾಟಕದ ಸ್ಟಾರ್ ಆಟಗಾರರನ್ನು ಟಾರ್ಗೆಟ್ ಮಾಡಲಿದೆ.
ಆರ್ಸಿಬಿ 19ನೇ ಆವೃತ್ತಿಗೆ ಸ್ವಸ್ತಿಕ್ ಚಿಕಾರ, ಮಯಾಂಕ್ ಅಗರ್ವಾಲ್, ಟಿಮ್ ಸೀಫರ್ಟ್, ಲಿಯಾಮ್ ಲಿವಿಂಗ್ಸ್ಟೋನ್, ಮನೋಜ್ ಭಾಂಡಗೆ, ಲುಂಗಿ ಎನ್ಗಿಡಿ, ಬ್ಲೆಸಿಂಗ್ ಮುಜರಾಬಾನಿ, ಮೋಹಿತ್ ರಾಠಿ ಅವರನ್ನು ಕೈ ಬಿಟ್ಟಿದೆ. ಆರ್ಸಿಬಿ ತನ್ನ ಉಳಿದ ಸ್ಥಾನವನ್ನು ತುಂಬಿಕೊಳ್ಳಲು ಹರಾಜಿನಲ್ಲಿ ಹುಡುಕಾಟವನ್ನು ನಡೆಸಲಿದೆ. ಈ ಬಾರಿ ಆರ್ಸಿಬಿ ಕೆಲವು ಕರ್ನಾಟಕದ ಸ್ಟಾರ್ ಆಟಗಾರರನ್ನು ಟಾರ್ಗೆಟ್ ಮಾಡುವ ಸಾಧ್ಯತೆ ಇದೆ.

ಕಳೆದ ಆವೃತ್ತಿಯ ಕೊನೆಯಲ್ಲಿ ದೇವದತ್ ಪಡಿಕ್ಕಲ್ ಅವರು ಗಾಯದಿಂದ ಟೂರ್ನಿಯಿಂದ ಹೊರ ನಡೆದಾಗ ತಂಡಕ್ಕೆ ಮಯಾಂಕ್ ಅಗರ್ವಾಲ್ ಅವರನ್ನು ಬರಮಾಡಿಕೊಳ್ಳಲಾಯಿತು. ಇವರು ನಾಕೌಟ್ ಹಂತದ ಪಂದ್ಯಗಳಲ್ಲಿ ತಂಡವನ್ನು ಸೇರಿಕೊಂಡರು. ಅಲ್ಲದೆ ತಂಡದ ಪರ ಸ್ಥಿರ ಪ್ರದರ್ಶನ ನೀಡಿ ಅಬ್ಬರಿಸಿದ್ದರು. ಇವರ ಆಟವನ್ನು ಕಂಡು ಅಭಿಮಾನಿಗಳು ಇವರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿತ್ತು.
ಆರ್ಸಿಬಿ ಮ್ಯಾನೇಜ್ಮೆಂಟ್ ಉಳಿಸಿಕೊಂಡ ಆಟಗಾರರ ದೇವದತ್ ಪಡಿಕ್ಕಲ್ ಅವರನ್ನು ಉಳಿಸಿಕೊಂಡಿತ್ತು. ಮಯಾಂಕ್ ಅಗರ್ವಾಲ್ ಅವರನ್ನು ಹರಾಜಿನ ಅಂಗಳಕ್ಕೆ ಬಿಟ್ಟಿತ್ತು. ಇದಕ್ಕೆ ಕಾರಣ ಬಿಸಿಸಿಐ ಆ ನಿರ್ಧಾರ. ಗಾಯಾಳು ಆಟಗಾರನ ಬದಲಿಗೆ ತಂಡವನ್ನು ಸೇರಿಕೊಳ್ಳುವ ಆಟಗಾರನನ್ನು ರಿಟೈನ್ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಎಂಬುದನ್ನು ಸ್ಪಷ್ಟ ಪಡಿಸಿತ್ತು. ಹೀಗಾಗಿ ತಂಡ ಮಯಾಂಕ್ ಅಗರ್ವಾಲ್ ಅವರನ್ನು ಹರಾಜಿನ ಅಂಗಳಕ್ಕೆ ಬಿಟ್ಟಿದೆ. ಆದರೆ ಹರಾಜಿನಲ್ಲಿ ಇವರ ಕ್ಷಮತೆಗೆ ಮಣೆ ಹಾಕಿ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.

ಆರ್ಸಿಬಿ ತಂಡ ಸದ್ಯ ಬಲಿಷ್ಠವಾಗಿದೆ. ಆದರೆ ಮಧ್ಯಮ ಕ್ರಮಾಂಕದ ಚಿಂತೆ ಈಗಲೂ ತಂಡಕ್ಕೆ ಕೊಂಚವಾಗಿ ಕಾಡುತ್ತಿದೆ. ಹೀಗಾಗಿ ಆರ್ಸಿಬಿ ಸನ್ರೈಸರ್ಸ್ ಹೈದರಾಬಾದ್ ತಂಡ ಕೈ ಬಿಟ್ಟ ಕರ್ನಾಟಕದ ಅಭಿನವ್ ಮನೋಹರ್ ಅವರನ್ನು ಹರಾಜಿನಲ್ಲಿ ಟಾರ್ಗೆಟ್ ಮಾಡುವ ಸಾಧ್ಯತೆ ಇದೆ. ಇವರು ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗ ಬಲ್ಲ ಆಟಗಾರ. ಅಭಿನವ್ ಕಳೆದ ಬಾರಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರು. ಅಲ್ಲದೆ ಕೆಲವು ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.
ಅಭಿನವ್ ಮನೋಹರ್ ದೇಶೀಯ ಲೀಗ್ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅಲ್ಲದೆ ಇವರು ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲೂ ಸ್ಥಿರ ಪ್ರದರ್ಶನ ನೀಡಿದ್ದರು. ಇವರು ಆಡಿದ 11 ಪಂದ್ಯಗಳಲ್ಲಿ 165ರ ಸ್ಟ್ರೈಕ್ ರೇಟ್ನಲ್ಲಿ 284 ರನ್ ಸಿಡಿಸಿದ್ದರು. ಇವರ ಕ್ಷಮತೆಯನ್ನು ಗುರುತಿಸಿ ಆರ್ಸಿಬಿ ಅವರಿಗೆ ಮಣೆ ಹಾಕ ಬಹುದು ಎಂದು ಅಭಿಮಾನಿಗಳು ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾರೆ.