ಐಪಿಎಲ್ ಇತಿಹಾಸದಲ್ಲಿ ತಮ್ಮ ತಂಡದಿಂದಲೇ ಅವಮಾನಕ್ಕೊಳಗಾದ 5 ಆಟಗಾರರು

ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಧ್ಯದಲ್ಲಿಯೇ ಮೊಟಕುಗೊಂಡಿದೆ. ಟೂರ್ನಿಯಲ್ಲಿ ಇದುವರೆಗೂ 29 ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದು ಕೆಲ ಆಟಗಾರರಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಕಾರಣ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಮುಂದೂಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಉಳಿದ 31 ಪಂದ್ಯಗಳು ಇಂಗ್ಲೆಂಡ್ ಅಥವಾ ಯುಎಇಯಲ್ಲಿ ನಡೆಯಲಿವೆ ಎಂಬ ಸುದ್ದಿ ಹರಿದಾಡುತ್ತಿದೆ.
ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಉತ್ತಮ ಪ್ರದರ್ಶನ ತೋರುವುದರ ಮೂಲಕ ಟಾಪ್ 4 ಸ್ಥಾನಗಳನ್ನು ಅಲಂಕರಿಸಿದ್ದರೆ ಉಳಿದ 4 ತಂಡಗಳು ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡದೇ ಅಂಕಪಟ್ಟಿಯಲ್ಲಿ ಕಡೆಯ 4 ಸ್ಥಾನಗಳಿಗೆ ಸೀಮಿತವಾಗಿವೆ. ಅದರಲ್ಲಿಯೂ ಈ ಬಾರಿ ಸನ್ ರೈಸರ್ಸ್ ಹೈದರಾಬಾದ್ ತಂಡ ತೀರಾ ಕಳಪೆ ಮಟ್ಟದ ಪ್ರದರ್ಶನವನ್ನು ನೀಡುವುದರ ಮೂಲಕ ಅಂಕಪಟ್ಟಿಯಲ್ಲಿ ಕಡೆಯ ಸ್ಥಾನದಲ್ಲಿದೆ. ಟೂರ್ನಿ ನಿಲುಗಡೆಯ ವೇಳೆಗೆ 7 ಪಂದ್ಯಗಳನ್ನಾಡಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ 6 ಪಂದ್ಯಗಳಲ್ಲಿ ಸೋಲುಂಡು ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಜಯಗಳಿಸಿದೆ.
ಡೇವಿಡ್ ವಾರ್ನರ್ ನಾಯಕತ್ವದಲ್ಲಿ 6 ಪಂದ್ಯಗಳನ್ನಾಡಿದ್ದ ಹೈದರಾಬಾದ್ ತಂಡ 5 ಪಂದ್ಯಗಳಲ್ಲಿ ಸೋಲನ್ನು ಕಂಡ ಕಾರಣ ಟೂರ್ನಿಯ ಮಧ್ಯದಲ್ಲಿಯೇ ಹೈದರಾಬಾದ್ ತಂಡದ ನಾಯಕತ್ವವನ್ನು ಕೇನ್ ವಿಲಿಯಮ್ಸನ್ ಹೆಗಲಿಗೆ ಹಾಕಲಾಯಿತು. ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದ ಡೇವಿಡ್ ವಾರ್ನರ್ನ್ನು ತಂಡದ ನಾಯಕತ್ವದಿಂದ ವಜಾ ಮಾಡಿದ್ದು ಮಾತ್ರವಲ್ಲದೆ, ನಂತರದ ಪಂದ್ಯದಲ್ಲಿ ತಂಡದಲ್ಲಿ ಕೂಡ ಸ್ಥಾನವನ್ನು ನೀಡದೆ ತಂಡದಿಂದ ಹೊರಗಿಡಲಾಯಿತು.
ಐಪಿಎಲ್ ಇತಿಹಾಸದಲ್ಲಿ ತಮ್ಮ ತಂಡದಿಂದಲೇ ಅಗೌರವಕ್ಕೊಳಗಾದ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ ನೋಡಿ.

1. ಡೇವಿಡ್ ವಾರ್ನರ್
ಈ ಮೇಲೆ ಹೇಳಿರುವ ಹಾಗೆ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಹೈದರಾಬಾದ್ ತಂಡ ಸಾಲುಸಾಲು ಕಳಪೆ ಪ್ರದರ್ಶನ ನೀಡಿದ ಕಾರಣ ವಾರ್ನರ್ ಅವರನ್ನು ನಾಯಕತ್ವದಿಂದ ವಜಾಗೊಳಿಸಿ ಕೇನ್ ವಿಲಿಯಮ್ಸನ್ ಹೆಗಲಿಗೆ ಹೈದರಾಬಾದ್ ತಂಡದ ನಾಯಕತ್ವವನ್ನು ಹಾಕಲಾಯಿತು. ಅಷ್ಟೇ ಅಲ್ಲದೆ ನಾಯಕತ್ವದಿಂದ ಹೊರಹಾಕಿದ ನಂತರದ ಪಂದ್ಯದಲ್ಲಿ ಹೈದರಾಬಾದ್ ತಂಡದ ಆಡುವ ಬಳಗದಿಂದ ವಾರ್ನರ್ ಅವರನ್ನು ಕೈಬಿಡಲಾಯಿತು. ಹೀಗೆ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಟ್ರೋಫಿಯನ್ನು ತಂದುಕೊಟ್ಟಿದ್ದ ಡೇವಿಡ್ ವಾರ್ನರ್ ತಮ್ಮ ತಂಡದಿಂದಲೇ ಅಗೌರವಕ್ಕೆ ಒಳಗಾದರು.

2. ಎಂಎಸ್ ಧೋನಿ
2016 ಮತ್ತು 2017ನೇ ಸಾಲಿನ ಐಪಿಎಲ್ ಆವೃತ್ತಿಯಲ್ಲಿ ಮಹೇಂದ್ರ ಸಿಂಗ್ ಧೋನಿ ರೈಸಿಂಗ್ ಪುಣೆ ಸೂಪರ್ಜಿಯಂಟ್ ತಂಡದ ಪರ ಆಡಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ. ಹೀಗೆ ಪುಣೆ ತಂಡದ ಪರ ಮಹೇಂದ್ರ ಸಿಂಗ್ ಧೋನಿ ನಾಯಕತ್ವವನ್ನು ವಹಿಸಿಕೊಂಡಿದ್ದರು, ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಮಹೇಂದ್ರ ಸಿಂಗ್ ಧೋನಿ ಕೂಡ ಒಬ್ಬರು. ಆದರೆ ಇಂತಹ ನಾಯಕನನ್ನು ರೈಸಿಂಗ್ ಪುಣೆ ಸೂಪರ್ಜಿಯಂಟ್ ತಂಡ ಕಳಪೆ ನಾಯಕತ್ವದ ಕಾರಣವನ್ನು ನೀಡಿ ಎಂಎಸ್ ಧೋನಿ ಅವರನ್ನು ನಾಯಕತ್ವದಿಂದ ವಜಾಗೊಳಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲಿಯೇ ಆಟಗಾರನೋರ್ವನಿಗೆ ಫ್ರಾಂಚೈಸಿ ತೋರಿಸಿದ ಅತಿದೊಡ್ಡ ಅಗೌರವ ಎನ್ನಬಹುದು.

3. ಸೌರವ್ ಗಂಗೂಲಿ
ಐಪಿಎಲ್ ಆರಂಭವಾದಾಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಥಮ ನಾಯಕನಾಗಿ ಸೌರವ್ ಗಂಗೂಲಿ ಆಯ್ಕೆಯಾಗಿದ್ದರು. ಸೌರವ್ ಗಂಗೂಲಿ ಉತ್ತಮ ನಾಯಕತ್ವದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಕೆಕೆಆರ್ ತಂಡ ಮಾತ್ರ ಎರಡನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗುವ ಕೆಲ ದಿನಗಳಲ್ಲಿಯೇ ಕೆಲ ಕಾರಣಗಳನ್ನು ನೀಡಿ ಗಂಗೂಲಿಯವರನ್ನು ಕೊಲ್ಕತ್ತಾ ನಾಯಕತ್ವದಿಂದ ಕೈಬಿಟ್ಟಿತು. ಇದು ಒಬ್ಬ ಹಿರಿಯ ನಾಯಕನಿಗೆ ಕೆಕೆಆರ್ ತಂಡ ತೋರಿಸಿದ ಅಗೌರವವಾಗಿತ್ತು.

4. ಗ್ಲೆನ್ ಮೆಕ್ಗ್ರಾ
2008ರ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದ ಗ್ಲೆನ್ ಮೆಕ್ಗ್ರಾ ಅವರನ್ನು ಮುಂದಿನ ಆವೃತ್ತಿಯಲ್ಲಿಯೇ ತಂಡದಲ್ಲಿ ಅವಕಾಶವನ್ನೂ ನೀಡದೆ ಕಡೆಗಣಿಸಲಾಯಿತು. ಒಬ್ಬ ವಿಶ್ವಶ್ರೇಷ್ಠ ಬೌಲರ್ ಅದರಲ್ಲಿಯೂ ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಕೂಡ ತಂಡದಲ್ಲಿ ಅವಕಾಶವನ್ನು ನೀಡದೆ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಗ್ಲೆನ್ ಮೆಕ್ಗ್ರಾಗೆ ಅಗೌರವವನ್ನು ಸಲ್ಲಿಸಿತ್ತು.

5. ಕ್ರಿಸ್ ಗೇಲ್
ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2018ರಲ್ಲಿ ತಂಡದಲ್ಲಿ ಉಳಿಸಿಕೊಳ್ಳದೆ ಕೈಬಿಟ್ಟಿತು. ಈ ಒಂದು ನಿರ್ಧಾರ ಪ್ರತಿಯೊಬ್ಬ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಯನ್ನು ಇಂದಿಗೂ ಸಹ ಕಾಡುತ್ತದೆ, ಏಕೆಂದರೆ ಬೆಂಗಳೂರು ತಂಡದ ಅಭಿಮಾನಿಗಳು ಹಾಗೂ ಬೆಂಗಳೂರು ತಂಡದ ಜೊತೆ ಕ್ರಿಸ್ ಗೇಲ್ ಅವರಿಗೆ ಅಂತಹ ಅವಿನಾಭಾವ ಸಂಬಂಧವಿತ್ತು. ಬೆಂಗಳೂರು ತಂಡದ ಪರ ಅಪಾರವಾದ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದ ಗೇಲ್ ಅವರು 2017ರ ಐಪಿಎಲ್ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ 2018ರಲ್ಲಿ ಬೆಂಗಳೂರು ತಂಡದಿಂದ ಕೈಬಿಡಲಾಯಿತು. ಈ ಮೂಲಕ ಬೆಂಗಳೂರು ತಂಡ ಅಪಾರವಾದ ಕೊಡುಗೆ ಸಲ್ಲಿಸಿದ ಗೇಲ್ ಅವರಿಗೆ ಅಗೌರವವನ್ನು ಸಲ್ಲಿಸಿದಂತಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications