ನವದೆಹಲಿ, ಅ.20: ಇಂಡಿಯನ್ ಪ್ರಿಮಿಯರ್ ಲೀಗ್ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಲವು ಮಹತ್ವದ ನಿರ್ಧಾರಗಳನ್ನು ಇತ್ತೀಚೆಗೆ ಕೈಗೊಂಡಿದೆ. ಈ ಪೈಕಿ ಮುಂದಿನ ಐಪಿಎಲ್ ನಲ್ಲಿ ಎರಡು ಹೊಸ ತಂಡಗಳು ಸೇರ್ಪಡೆಗೊಳ್ಳುವುದು ಕೂಡಾ ಸೇರಿದೆ. ಆದರೆ, ಬಿಡ್ಡಿಂಗ್ ಮಾಡಲು ಹೂಡಿಕೆದಾರರು ಆಸಕ್ತಿ ಕಳೆದುಕೊಂಡಿರುವ ಹಿನ್ನಲೆಯಲ್ಲಿ ಬಿಸಿಸಿಐ ಹೊಸ ತಂತ್ರಕ್ಕೆ ಶರಣಾಗಿದೆ.
ಈಗಾಗಲೇ ಬಿಸಿಸಿಐ, ಐಪಿಎಲ್ ನಲ್ಲಿ ಭ್ರಷ್ಟಾಚಾರ ನಡೆದಿದೆ ಇದರಿಂದ ನಮ್ಮ ಸಂಸ್ಥೆ ಮರ್ಯಾದೆ ಹಾಳಾಗಿದೆ ಎಂದು ಪೆಪ್ಸಿಕೋ ಸಂಸ್ಥೆ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಂಥ ತಂಡಗಳ ಬದಲಿಗೆ ಹೊಸ ತಂಡಗಳ ಆಯ್ಕೆ ಹಾಗೂ ಹರಾಜು ಪ್ರಕ್ರಿಯೆ ಅಷ್ಟು ಸರಳವಲ್ಲ ಎಂಬ ಅಂಶ ಬಿಸಿಸಿಐಗೆ ಮನವರಿಕೆಯಾಗಿದೆ. [ವಿವೋ ಐಪಿಎಲ್: ಬಿಸಿಸಿಐ ನಿರ್ಣಯಗಳ ಡೀಟೈಲ್ಸ್]
ರಿವರ್ಸ್ ಬಿಡ್ಡಿಂಗ್: ಚೆನ್ನೈ ಹಾಗೂ ರಾಜಸ್ಥಾನ್ ತಂಡಗಳು ಎರಡು ವರ್ಷ ಕಳೆದು ಮತ್ತೊಮ್ಮೆ ಐಪಿಎಲ್ ಸೇರಬಹುದಾಗಿದೆ. ಈ ಎರಡು ವರ್ಷ ಅವಧಿಗೆ ಹೂಡಿಕೆ ಮಾಡಲು ಸಂಸ್ಥೆಗಳು ಹಿಂದೇಟು ಹಾಕುತ್ತಿವೆ. ಕಡಿಮೆ ಅವಧಿಗೆ ಅತಿ ಹೆಚ್ಚು ಹೂಡಿಕೆ ಮಾಡಲು ಯಾರು ಮುಂದಾಗುತ್ತಿಲ್ಲ.

ಹೀಗಾಗಿ ರಿವರ್ಸ್ ಬಿಡ್ಡಿಂಗ್ ನಡೆಸಲು ಬಿಸಿಸಿಐ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ. ಈ ಬಗ್ಗೆ ನವೆಂಬರ್ 9ರಂದು ನಡೆಯಲಿರುವ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ರಿವರ್ಸ್ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಯಾವ ಸಂಸ್ಥೆ ಅತ್ಯಂತ ಕಡಿಮೆ ಬಿಡ್ ಮಾಡಿರುತ್ತದೋ ಆವರಿಗೆ ಬಿಡ್ ಮಾಡಿದ ಆಟಗಾರ ಹಾಗೂ ತಂಡ ಸಿಗುತ್ತದೆ.[ಚೆನ್ನೈ, ರಾಜಸ್ಥಾನ ಬದಲಿಗೆ ಹೊಸ 2 ತಂಡ!]
ಉದಾಹರಣೆಗೆ ಬಿಸಿಸಿಐ 70 ಕೋಟಿ ರು ಮಾರ್ಜಿನ್ ಬಿಡ್ಡಿಂಗ್ ನಡೆಸಿದರೆ, ಸಮರ್ಥ ಬಿಡ್ಡರ್ ಗಳು 50 ಕೋಟಿ ರು, 4 ಅಥವಾ 30 ಕೋಟಿ ರು ನಂತೆ ಬಿಡ್ ಮಾಡಬಹುದಾಗಿದೆ. ಬಿಡ್ ದರದ ರೇಂಜ್ ಮೊದಲೇ ತಿಳಿಸಲಾಗಿರುತ್ತದೆ. ಈ ಪ್ರಕ್ರಿಯೆಯಿಂದ ಹೂಡಿಕೆದಾರರು ಹಾಗೂ ಬಿಸಿಸಿಐ ಎರಡು ಕೂಡಾ ನಷ್ಟದಿಂದ ತಪ್ಪಿಸಿಕೊಳ್ಳಬಹುದು ಎಂಬ ಸಲಹೆ ಬಂದಿದೆ.
ಅಮಾನತುಗೊಂಡಿರುವ ಚೆನ್ನೈ ಹಾಗೂ ರಾಜಸ್ಥಾನ ತಂಡದ ಆಟಗಾರರು ಸೇರಿದಂತೆ ಇತರೆ ಯುವ ಪ್ರತಿಭೆಗಳು ಹರಾಜು ಪ್ರಕ್ರಿಯೆಗೆ ಲಭ್ಯರಿರುವ ಸಾಧ್ಯತೆಯಿದೆ. ಒಟ್ಟಾರೆ 2017ರ ನಂತರ ಮತ್ತೊಮ್ಮೆ ಎಲ್ಲಾ ತಂಡ, ಆಟಗಾರರ ಹರಾಜು ನಡೆಯುವ ಸಾಧ್ಯತೆಯಿದೆ ಎಂದು ಬಿಸಿಸಿಐ ಹೇಳಿದೆ. (ಪಿಟಿಐ)