ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಲೀಗ್ 18ನೇ ಆವೃತ್ತಿಗೆ ಕಾಲಿಟ್ಟಿದೆ. ಈ ಬಾರಿ 10 ತಂಡಗಳು ಕಾದಾಟ ನಡೆಸಲಿವೆ. ಈ ಹಿಂದೆ ನಡೆದ 17 ಆವೃತ್ತಿಯ ಐಪಿಎಲ್ ಹಲವು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಈ ವೇಳೆ ಹಲವು ಪಂದ್ಯಗಳು ಕೊನೆಯ ಎಸೆತದ ವರೆಗೂ ನಡೆದಿವೆ. ಈ ವೇಳೆ ಬ್ಯಾಟರ್ಗಳು ಆರ್ಭಟಿಸಿದರೆ, ಇನ್ನು ಕೆಲವೊಮ್ಮೆ ಸ್ಕೋರ್ ಡಿಫೆಂಡ್ ಮಾಡಿಕೊಳ್ಳುವಲ್ಲಿ ಬೌಲರ್ಗಳು ಯಶಸ್ವಿಯಾಗಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಎಂದು ನೆನಪು ಹಾರದ ಪಂದ್ಯಗಳಲ್ಲಿ ಕೆಕೆಆರ್ ಹಾಗೂ ಗುಜರಾತ್ ಟೈಟನ್ಸ್ ನಡುವಣ ಪಂದ್ಯಕ್ಕೂ ಸ್ಥಾನ. 2023ರಲ್ಲಿ ನಡೆದ ಈ ಪಂದ್ಯ ಇಬ್ಬರು ಆಟಗಾರರ ಲಕ್ ಬದಲಿಸಿತು. ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ 20 ಓವರ್ಗಳಲ್ಲಿ 4 ವಿಕೆಟ್ಗೆ 204 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕೆಕೆಆರ್ 19 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಸೇರಿಸಿತ್ತು. ಈ ಪಂದ್ಯ ಗೆಲ್ಲಲು ಕೋಲ್ಕತ್ತಾಗೆ ಕೊನೆಯ ಓವರ್ನಲ್ಲಿ 29 ರನ್ ಅವಶ್ಯಕತೆ ಇತ್ತು. ಟೈಟಾನ್ಸ್ ಪರ ಯಶ್ ದಯಾಳ್ ಕೊನೆಯ ಓವರ್ ಬೌಲ್ ಮಾಡಿದ್ರು. ಮೊದಲ ಬೌಲ್ನಲ್ಲಿ ಉಮೇಶ್ ಯಾದವ್ ಸಿಂಗಲ್ ತೆಗೆದುಕೊಂಡು ರಿಂಕು ಸಿಂಗ್ಗೆ ಸ್ಟ್ರೈಕ್ ನೀಡಿದರು. ಇಲ್ಲಿಂದ ರಿಂಕು ಸಿಂಗ್ ಸತತ ಐದು ಸಿಕ್ಸರ್ ಬಾರಿಸಿ ಕೋಲ್ಕತ್ತಾಗೆ ಜಯದ ಮಾಲೆ ತೊಡಿಸಿದರು. ಈ ಮೂಲಕ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಹ ಹಲವು ಬಾರಿ ಕೊನೆಯ ಓವರ್ನಲ್ಲಿ ಗೆದ್ದಿದೆ. ಆದರೆ ದುಬೈನಲ್ಲಿ 2021ರಲ್ಲಿ ನಡೆದಿದ್ದ ಐಪಿಎಲ್ 56ನೇ ಪಂದ್ಯ ಈಗಲೂ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಲು ಕೆಎಸ್ ಭರತ್ ಅವರ ಆ ಮನಮೋಹಕ ಇನಿಂಗ್ಸ್ ಕಾರಣ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ನಿಗದಿತ ಓವರ್ಗಳಲ್ಲಿ 5 ವಿಕೆಟ್ಗೆ 164 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆರ್ಸಿಬಿ 19 ಓವರ್ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 150 ರನ್ ಸೇರಿಸಿತ್ತು. ಕೊನೆಯ ಓವರ್ನಲ್ಲಿ 15 ರನ್ ಅವಶ್ಯಕತೆ ಇತ್ತು. ಕೊನೆಯ ಓವರ್ ರೋಚಕತೆ ಇಂದ ಕೂಡಿತ್ತು. ಈ ಪಂದ್ಯವನ್ನು ಗೆಲ್ಲಲು ಆರ್ಸಿಬಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಬೇಕಿತ್ತು. ಸ್ಟ್ರೈಕ್ನಲ್ಲಿದ್ದ ಕೆಎಸ್ ಭರತ್ ಆವೀಶ್ ಖಾನ್ ಎಸೆತದಲ್ಲಿ ಲಾಂಗ್ ಆನ್ ಮೇಲೆ ಸಿಕ್ಸರ್ ಬಾರಿಸಿ ಮಿಂಚಿದರು.
ಸಿಎಸ್ಕೆ ತಂಡಕ್ಕೆ ಐದು ಬಾರಿ ಚಾಂಪಿಯನ್ ಪಟ್ಟವನ್ನು ತೊಡಿಸಿದ ನಾಯಕ ಮಹೇಂದ್ರ ಸಿಂಗ್ ಧೋನಿ. ಇವರು ನಿವೃತ್ತರಾದ ಬಳಿಕವೂ ತಮ್ಮ ಫಿನಿಷರ್ ಛಾಪನ್ನು ಹಾಗೆ ಹೊಂದಿದ್ರು. ಇದಕ್ಕೆ ಏಪ್ರಿಲ್ 21, 2022ರಂದು ನಡೆದ ಪಂದ್ಯವೇ ಬೆಸ್ಟ್ ಎಕ್ಸಾಮ್ಪಲ್. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 155 ರನ್ ಸೇರಿಸಿತು. ಗುರಿಯನ್ನು ಬೆನ್ನಟ್ಟಿದ ಚೆನ್ನೈ ನಿಗದಿತ ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 156 ರನ್ ಸಿಡಿಸಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಧೋನಿ ಆಟವನ್ನು ಕಂಡು ಅಭಿಮಾನಿಗಳು ಫುಲ್ ಫಿದಾ ಆದ್ರು. ಈ ಓವರ್ನ ಮೊದಲ ಎಸೆತದಲ್ಲಿ ಜಯದೇವ್ ಉನಾದ್ಕಟ್ ವಿಕೆಟ್ ಪಡೆದರು. ಬಳಿಕ ಡ್ವೇನ್ ಬ್ರಾವೋ ಹಾಗೂ ಮಾಹಿ ಅಬ್ಬರಿಸಿದರು. ಈ ಓವರ್ನಲ್ಲಿ ಸಿಎಸ್ಕೆ ಗೆಲುವಿಗೆ 17 ರನ್ ಅವಶ್ಯಕತೆ ಇತ್ತು. ಜಯದೇವ್ ಉನಾದ್ಕಟ್ ಎಸೆತದಲ್ಲಿ ಧೋನಿ ಕೊನೆಯ ನಾಲ್ಕು ಎಸೆತದಲ್ಲಿ 16 ರನ್ ಬಾರಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.
2009ರಲ್ಲಿ ಮುಂಬೈ ಹಾಗೂ ರಾಜಸ್ಥಾನ ತಂಡಗಳ ನಡುವೆ ಕಾದಾಟ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ ರಾಯಲ್ಸ್ ನಿಗದಿತ ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 145 ರನ್ ಕಲೆ ಹಾಕಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಮುಂಬೈ ಸಹ ಸಚಿನ್ ತೆಂಡೂಲ್ಕರ್ (40), ಅಭಿಷೇಕ್ ನಯ್ಯರ್(35) ಇವರುಗಳ ಸೊಗಸಾದ ಆಟದಿಂದ ಉತ್ತಮ ಸ್ಥಿತಿಯಲ್ಲೇ ಇತ್ತು. ಕೊನೆಯ ಓವರ್ನಲ್ಲಿ ಮುಂಬೈ ಗೆಲುವಿಗೆ 4 ರನ್ ಅವಶ್ಯಕತೆ ಇತ್ತು. ಆಗ ಮುನಾಫ್ ಪಟೇಲ್ ಬೌಲಿಂಗ್ ನಡೆಸಿದರು. ಕೊನೆಯ ಓವರ್ನಲ್ಲಿ ಚೇತನ್ಯ ನಂದ, ಲಸಿತ್ ಮಲಿಂಗ್, ಧವಳ್ ಕುಲ್ಕರ್ಣಿ ಅವರ ವಿಕೆಟ್ ಪಡೆದ ಮುನಾಫ್, ತಮ್ಮ ತಂಡದಿಂದ ಕೈ ಜಾರಿದ್ದ ಗೆಲುವನ್ನು ಮತ್ತೆ ಸಾಧಿಸುವಲ್ಲಿ ಯಶಸ್ವಿಯಾದರು.

2019ರ ಐಪಿಎಲ್ನಲ್ಲಿ ಕುಲ್ದೀಪ್ ಯಾದವ್ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ ಅವರು ಪ್ರತಿ ನಿಧಿಸಿದ ತಂಡ ಗೆಲ್ಲಲಿಲ್ಲ ಆದ್ರೆ, ಇವರು ಖ್ಯಾತಿ ಪಡೆದರು. 2019ರ ಐಪಿಎಲ್ನಲ್ಲಿ ಕೆಕೆಆರ್ ಹಾಗೂ ಡೆಲ್ಲಿ ತಂಡಗಳು ಮುಖಾಮುಖಿ ಆದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕೆಕೆಆರ್ 8 ವಿಕೆಟ್ ನಷ್ಟಕ್ಕೆ 185 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಡೆಲ್ಲಿ 19 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 180 ರನ್ ಬಾರಿಸಿತ್ತು. ಕೊನೆಯ ಓವರ್ನಲ್ಲಿ 6 ರನ್ ಅವಶ್ಯಕತೆ ಇತ್ತು. ಕುಲ್ದೀಪ್ ಕೇವಲ 5 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು.