ಐಪಿಎಲ್ 2025 ರ 14 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಗುಜರಾತ್ ಟೈಟಾನ್ಸ್ ಮಣಿಸಿದೆ. ತವರಿನಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲಿದ್ದ ರಜತ್ ಪಾಟಿದಾರ್ ನೇತೃತ್ವದ ಆರ್ಸಿಬಿ ತಂಡಕ್ಕೆ ನಿರಾಸೆಯಾಗಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಅನುಭವಿ ವೇಗಿ ಮೊಹಮ್ಮದ್ ಸಿರಾಜ್ ಎಲ್ಲರ ಚಿತ್ತ ಕದ್ದರು. ತಮ್ಮ ಮಾಜಿ ತಂಡ ಆರ್ಸಿಬಿ ವಿರುದ್ಧ ಮೊಹಮ್ಮದ್ ಸಿರಾಜ್ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡುವ ಮೂಲಕ ಮೆಚ್ಚುಗೆ ಗಳಿಸಿದರು. ಉರಿ ಬೌಲಿಂಗ್ ದಾಳಿ ನಡೆಸಿದ ಸಿರಾಜ್ ಆರ್ಸಿಬಿ ತಂಡದ ಟಾಪ್ ಆರ್ಡರ್ ಬ್ಯಾಟಿಂಗ್ ಕ್ರಮಾಂಕವನ್ನು ಉಡೀಸ್ ಮಾಡಿದರು.
ಐಪಿಎಲ್ 2025 ರ ಹರಾಜಿಗೂ ಮುನ್ನ ಮೊಹಮ್ಮದ್ ಸಿರಾಜ್ ಅವರನ್ನು ಆರ್ಸಿಬಿ ಉಳಿಸಿಕೊಂಡಿರಲಿಲ್ಲ. ಹೀಗಾಗಿ ಮೆಗಾ ಹರಾಜಿನಲ್ಲಿ ಸಿರಾಜ್ ಗುಜರಾತ್ ಸೇರಿದರು. ಬುಧವಾರ ತಮ್ಮ ಮಾಜಿ ತಂಡ ಆರ್ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ಸಿರಾಜ್ ಎಲ್ಲ ಪ್ರಶ್ನೆಗಳಿಗೆ ತಮ್ಮ ಬೌಲಿಂಗ್ ಪ್ರದರ್ಶನದ ಮೂಲಕ ಉತ್ತರಿಸಿದರು.

ಮೊಹಮ್ಮದ್ ಸಿರಾಜ್ ಅವರು ತಮ್ಮ ಮೊದಲ ಸ್ಪೆಲ್ನಲ್ಲಿ ದೇವದತ್ ಪಡಿಕ್ಕಲ್ (4) ಮತ್ತು ಫಿಲಿಪ್ ಸಾಲ್ಟ್ (14) ಅವರನ್ನು ಔಟ್ ಮಾಡುವ ಮೂಲಕ ಆರ್ಸಿಬಿಯನ್ನು ಆಘಾತಗೊಳಿಸಿದರು. ಅವರು ತಮ್ಮ ಎರಡನೇ ಸ್ಪೆಲ್ನಲ್ಲಿ ಒಂದು ಓವರ್ ಬೌಲ್ ಮಾಡಿದರು. 19ನೇ ಓವರ್ನ ಎರಡನೇ ಎಸೆತದಲ್ಲಿ ಸಿರಾಜ್ ಲಿಯಾಮ್ ಲಿವಿಂಗ್ಸ್ಟೋನ್ (54) ಅವರನ್ನು ಔಟ್ ಮಾಡುವ ಮೂಲಕ ಆರ್ಸಿಬಿ ಬಿಗ್ ಸ್ಕೋರ್ ದಾಖಲಿಸುವುದನ್ನು ತಡೆದರು. ಆರ್ಸಿಬಿ ವಿರುದ್ಧ ಸಿರಾಜ್ 4 ಓವರ್ಗಳಲ್ಲಿ 19 ರನ್ಗಳಿಗೆ 3 ವಿಕೆಟ್ಗಳನ್ನು ಕಬಳಿಸಿದರು.
ಮೊಹಮ್ಮದ್ ಸಿರಾಜ್ ಅವರು ಗುಜರಾತ್ ಸೇರುವ ಮೊದಲು ಏಳು ವರ್ಷಗಳ ಕಾಲ ಆರ್ಸಿಬಿ ತಂಡದ ಭಾಗವಾಗಿದ್ದರು. ಎರಡೂ ವಿಕೆಟ್ಗಳನ್ನು ಪಡೆದ ನಂತರ, ಸಿರಾಜ್ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಅವರಂತೆ ಸಂಭ್ರಮಾಚರಣೆ ಮಾಡಿದರು. ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್ನಿಂದ ಅವರ ಸಂಭ್ರಮಾಚರಣೆಯನ್ನು ವೀಕ್ಷಿಸುತ್ತಲೇ ಇದ್ದರು. ಈ ಅದ್ಭುತ ಪ್ರದರ್ಶನಕ್ಕಾಗಿ ಸಿರಾಜ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ದೊರೆಯಿತು.
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಆರ್ಸಿಬಿ 20 ಓವರ್ಗಳಲ್ಲಿ 8 ವಿಕೆಟ್ಗೆ 169 ರನ್ ಗಳಿಸಿತು. ಆರ್ಸಿಬಿ ಪರ ಲಿಯಾಮ್ ಲಿವಿಂಗ್ಸ್ಟೋನ್ 54 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಜಿತೇಶ್ ಶರ್ಮಾ 33 ಮತ್ತು ಟಿಮ್ ಡೇವಿಡ್ 32 ರನ್ ಗಳಿಸಿದರು. ಗುಜರಾತ್ ಪರ ಮೊಹಮ್ಮದ್ ಸಿರಾಜ್ 3 ವಿಕೆಟ್ಗಳನ್ನು ಪಡೆದರೆ, ಆರ್ ಸಾಯಿ ಕಿಶೋರ್ 2 ವಿಕೆಟ್ ಕಬಳಿಸಿದರು. ಅರ್ಷದ್ ಖಾನ್, ಪ್ರಸಿದ್ಧ್ ಕೃಷ್ಣ ಮತ್ತು ಇಶಾಂತ್ ಶರ್ಮಾ ತಲಾ 1 ವಿಕೆಟ್ ಉರುಳಿಸಿದರು.
ಇದಕ್ಕೆ ಉತ್ತರವಾಗಿ ಗುಜರಾತ್ 17.5 ಓವರ್ಗಳಲ್ಲಿ 2 ವಿಕೆಟ್ಗೆ 170 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಜೋಸ್ ಬಟ್ಲರ್ 73 ರನ್ ಗಳಿಸಿದರು. ಸಾಯಿ ಸುದರ್ಶನ್ 49 ರನ್ ಗಳಿಸಿ ಔಟಾದರೆ, ಶೆರ್ಫೇನ್ ರುದರ್ಫೋರ್ಡ್ 30 ರನ್ ಗಳಿಸಿ ಅಜೇಯರಾಗುಳಿದರು. ನಾಯಕ ಶುಭಮನ್ ಗಿಲ್ ಕೇವಲ 14 ರನ್ ಗಳಿಸಲಷ್ಟೇ ಶಕ್ತರಾದರು. ಆರ್ಸಿಬಿ ಪರ ಜೋಶ್ ಹೇಜಲ್ವುಡ್ ಮತ್ತು ಭುವನೇಶ್ವರ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು.