ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ವೇಳೆ 10 ತಂಡಗಳು ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿವೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪ್ರಶಸ್ತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ನಡೆಸಲಿದೆ. ಆರ್ಸಿಬಿ ಈಗಾಗಲೇ ಅಭ್ಯಾಸ ಶಿಬಿರವನ್ನು ಆರಂಭಿಸಿದೆ. ಅಭ್ಯಾಸ ಶಿಬಿರದಲ್ಲಿ ಆರ್ಸಿಬಿ ತಂಡದ ಆಟಗಾರರು ಭಾಗವಹಿಸಿದ್ದಾರೆ. ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸಹ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ.
ವರ್ಷಗಳ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ಕ್ರಿಕೆಟ್ ಕಲರವ ಆರಂಭವಾಗಿದ್ದು, ಈ ಪಂದ್ಯವನ್ನು ನೋಡಲು ಅಭಿಮಾನಿಗಳು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇನ್ನು ಈ ಬಾರಿಯ ಐಪಿಎಲ್ನ 5 ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದ್ದು, 2 ಪಂದ್ಯಗಳು ರಾಯ್ಪುರದಲ್ಲಿ ನಡೆಯಲಿವೆ. ಈ ವೇಳೆ ಎಲ್ಲರ ಕಣ್ಣುಗಳು ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿರಲಿವೆ. ಇವರು ಭಾರತದ ಪರ ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. ಹೀಗಾಗಿ ಚುಟುಕು ಲೀಗ್ನಲ್ಲಿ ಇವರ ಪ್ರದರ್ಶನ ಹೇಗಿರಲಿದೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇದೇ ವೇಳೆ ವಿರಾಟ್, ಆಟಗಾರರಿಗೆ ಕಿವಿ ಮಾತನ್ನು ನೀಡಿದ್ದಾರೆ.

ವಿರಾಟ್ ಕೊಹ್ಲಿ ಆರ್ಸಿಬಿ ಅಭ್ಯಾಸ ಶಿಬಿರದ ವೇಳೆ ತಮ್ಮ ಸಹ ಆಟಗಾರರಿಗೆ ಮುಂಬರುವ ಐಪಿಎಲ್ ಆವೃತ್ತಿಗೆ ಸಂಪೂರ್ಣ ಸಿದ್ಧರಾಗಿ. ನಿಮ್ಮ ಶಕ್ತಿಯನ್ನೆಲ್ಲಾ ಹಾಕಿ ಆಟವಾಡಿ. ಪ್ರಶಸ್ತಿಯನ್ನು ಗೆಲ್ಲುವುದು ಎಷ್ಟು ಕಷ್ಟವೋ, ಅದನ್ನು ಉಳಿಸಿಕೊಳ್ಳುವುದು ಇನ್ನೂ ದೊಡ್ಡ ಸವಾಲಾಗಿರುತ್ತದೆ ಎಂದು ಕೊಹ್ಲಿ ಸ್ಪಷ್ಟಪಡಿಸಿದರು.
ಕಳೆದ ಕೆಲವು ವರ್ಷಗಳಲ್ಲಿ ನಮ್ಮ ತಂಡದ ಸಾಧನೆ ಅಮೋಘ. ಈ ಸಾಧನೆಯನ್ನು ಮಾಡಲು ನಾವು ಹಗಲಿರುಳು ಶ್ರಮಿಸಿದ್ದೇವೆ. ಈಗ ಪರಿಸ್ಥಿತಿಗಳು ಬದಲಾಗಿವೆ. ಹಿಂದೆ ಏನು ಆಗಿದೆ ಎಂಬುದನ್ನು ಮರೆತು ಬಿಡಿ. ಇನ್ನು ಮುಂದೆ ನಮ್ಮ ವಿರುದ್ಧ ತಂಡಗಳ ಪಕ್ಕಾ ಪ್ಲ್ಯಾನಿಂಗ್ ನಿಂದ ಕಣಕ್ಕೆ ಇಳಿಯುತ್ತವೆ. ಅದಕ್ಕೆ ಕೌಂಟರ್ ನೀಡಲು ನಾವು ಸಿದ್ಧರಾಗಬೇಕು. ನಾವು ಒಂದು ಕ್ಷಣವೂ ವ್ಯರ್ಥ ಮಾಡಲು ಸಾಧ್ಯವಿಲ್ಲ. ನಾವು ಸ್ಪರ್ಧೆಯಲ್ಲಿ ಮುಂದೆ ಇರಬೇಕು. ಇದಕ್ಕಾಗಿ ಸಂಪೂರ್ಣ ಗಮನ ಹರಿಸಿ ಆಟವಾಡಿ ಎಂದು ತಿಳಿಸಿದ್ದಾರೆ.
ನಮ್ಮ ತಂಡ ಹರಾಜಿನ ಬಳಿಕ ಸುಧಾರಿಸಿದೆ. ನಾವು ಯುವ ಆಟಗಾರರಿಗೆ ಮಣೆ ಹಾಕಿದ್ದೇವೆ. ವಿರಾಟ್ ಕೊಹ್ಲಿ ಅವರ ಅನುಭವದ ಲಾಭ ತಂಡಕ್ಕೆ ಆಗಲಿದೆ. ರಜತ್ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವರ್ಷದ ಐಪಿಎಲ್ ಗೆಲ್ಲುವುದು ಈಗ ನಮ್ಮ ಗುರಿಯಾಗಿದೆ ಎಂದು ಆರ್ಸಿಬಿ ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್ ಆಟಗಾರರಿಗೆ ತಿಳಿಸಿದ್ದಾರೆ.

ಹಾಲಿ ಚಾಂಪಿಯನ್ ಪಟ್ಟವನ್ನು ಹೊತ್ತಿರುವ ಆರ್ಸಿಬಿ ಈ ಬಾರಿ ಉದ್ಘಾಟನಾ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಾದಾಟ ನಡೆಸಲಿದೆ. ಈ ಬಿಗ್ ಫೈಟ್ಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಸಾಕ್ಷಿಯಾಗಲಿದೆ. ವರ್ಷದ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಈ ಬಿಗ್ ಈವೆಂಟ್ ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.