ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಕರ್ನಾಟಕದ ಸ್ಟಾರ್ ಆಟಗಾರರು ಐಪಿಎಲ್ ಮಾಲೀಕರ ಚಿತ್ತ ಕದಿಯುವಲ್ಲಿ ವಿಫಲರಾಗಿದ್ದಾರೆ. ಕರ್ನಾಟಕದ ಯಾವೊಬ್ಬ ಆಟಗಾರ ರಿಟೇನ್ ಲಿಸ್ಟ್ನಲ್ಲಿ ಇಲ್ಲದೆ ಇರುವುದು ಅಚ್ಚರಿ ಮೂಡಿಸಿದೆ. ಲಖ್ನೋ ಸೂಪರ್ ಜೈಂಟ್ಸ್ ತಂಡವನ್ನು ಕಳೆದ ಆವೃತ್ತಿಯಲ್ಲಿ ಮುನ್ನಡೆಸಿದ್ದ ರಾಹುಲ್ ಅವರು ಈ ಬಾರಿ ಐಪಿಎಲ್ ಹರಾಜು ಅಂಗಳ ಪ್ರವೇಶಿಸಲಿದ್ದು, ಹಲವು ಮಾಲೀಕರ ಚಿತ್ತ ಕದಿಯಲಿದ್ದಾರೆ.
ಉಳಿದಂತೆ ಕಳೆದ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಿದರೂ, ಸಹ ಈ ಕನ್ನಡಿಗರನ್ನು ಉಳಿಸಿಕೊಳ್ಳುವಲ್ಲಿ ಮಾಲೀಕರು ವಿಫಲರಾಗಿದ್ದಾರೆ. ಆರ್ಸಿಬಿ ತಂಡದ ಪರ ಬಿಗುವಿನ ದಾಳಿ ನಡೆಸಿ ಸೈ ಎನಿಸಿಕೊಂಡಿದ್ದ ವಿಜಯ್ ಕುಮಾರ್ ವೈಶಾಖ್, ಮನೋಜ್ ಭಂಡಾರೆ ಅವರನ್ನು ಬೆಂಗಳೂರು ತಂಡ ಕೈ ಬಿಟ್ಟಿದೆ. ಸದ್ಯ ಉಳಿಸಿಕೊಂಡ ಆರ್ಸಿಬಿ ತಂಡದಲ್ಲಿ ಮೂವರು ಆಟಗಾರರು ಇದ್ದು, ಒಬ್ಬನೇ ಒಬ್ಬ ವಿದೇಶಿ ಆಟಗಾರರಿಗೆ ಅವಕಾಶ ಇಲ್ಲ.

ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ ಅವರನ್ನು ತಂಡ ಕೈ ಬಿಟ್ಟಿದೆ. ಇವರು ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಆಡಿದ 14 ಪಂದ್ಯಗಳಲ್ಲಿ 37.14ರ ಸರಾಸರಿಯಲ್ಲಿ 520 ರನ್ ಸಿಡಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕಗಳು ಸೇರಿವೆ. ಇವರು ವಿಕೆಟ್ ಕೀಪಿಂಗ್ ಹಾಗೂ ಟಾಪ್ ಆರ್ಡರ್ ಬ್ಯಾಟಿಂಗ್ಗೆ ಹೆಸರುವಾಸಿ. ತಂಡವನ್ನು ಮುನ್ನಡೆಸುವ ಕಲೆಯನ್ನು ಇವರು ಕರಗತ ಮಾಡಿಕೊಂಡಿದ್ದಾರೆ. ಕೆ.ಗೌತಮ್ ಅವರನ್ನು ಸಹ ಲಖ್ನೋ ತಂಡ ಕೈ ಬಿಟ್ಟಿದೆ. ಇನ್ನು ಇದೇ ತಂಡದ ಭಾಗವಾಗಿದ್ದ ದೇವದತ್ ಪಡಿಕ್ಕಲ್ ಸಹ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರಿಂದ ಇವರನ್ನು ತಂಡ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ.
ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡಿದ್ದ ಆರ್ಸಿಬಿ ತಂಡದ ವಿಜಯ್ಕುಮಾರ್ ವೈಶಾಖ್ ಅವರನ್ನು ತಂಡ ಕೈ ಬಿಟ್ಟಿದೆ. ಇವರು ಆಡಿದ 4 ಪಂದ್ಯಗಳಲ್ಲಿ 4 ವಿಕೆಟ್ ಕಬಳಿಸಿದ್ದರು.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಮಯಾಂಕ್ ಅಗರ್ವಾಲ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರ ಚಿತ್ತ ಕದಿಯಲು ವಿಫಲರಾಗಿದ್ದರು. ಇವರು ಕಳೆದ ಬಾರಿಯ ಆವೃತ್ತಿಯಲ್ಲಿ ಆಡಿದ 4 ಪಂದ್ಯಗಳಲ್ಲಿ ಮಯಾಂಕ್ ಕೇವಲ 37 ರನ್ಗಳಿಸಿದ್ದರಿಂದ ಇವರನ್ನು ತಂಡ ಹರಾಜು ಅಂಗಳಕ್ಕೆ ಬಿಟ್ಟಿದೆ. ಇನ್ನು ಪಂಜಾಬ್ ಪರ ಒಂದೇ ಒಂದು ಪಂದ್ಯ ಆಡಿದ್ದ ವಿದ್ವತ್ ಕಾವೇರಪ್ಪ ಸಹ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸ್ಟಾರ್ ಆಟಗಾರರಿಂದ ತುಂಬಿ ಕೊಂಡಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಶ್ರೇಯಸ್ ಗೋಪಾಲ್ ಕಳೆದ ಬಾರಿ ಅಮೋಘವಾಗಿ ಪ್ರದರ್ಶನ ನೀಡಿದ್ದರು. ಇವರು ಆಡಿದ ಮೂರು ಪಂದ್ಯಗಳಲ್ಲಿ ಮೂರು ವಿಕೆಟ್ ಕಬಳಿಸಿದ್ದರು. ಆದರೆ ಮುಂಬೈ ತಂಡ ಇವರ ಅನುಭವಕ್ಕೆ ಮಣೆ ಹಾಕಿಲ್ಲ. ಚಾಂಪಿಯನ್ ಕೆಕೆಆರ್ ತಂಡದ ಸದಸ್ಯರಾಗಿದ್ದ ಮನೀಷ್ ಪಾಂಡೆ ಅವರನ್ನು ಸಹ ತಂಡ ಹರಾಜು ಅಂಗಳದ ದಾರಿ ತೋರಿಸಿದೆ.ಗುಜರಾತ್ ಟೈಟನ್ಸ್ ತಂಡದ ಪರ ಭರವಸೆಯ ಅಭಿನವ್ ಮನೋಹರ್ ಅವರನ್ನು ತಂಡ ಕೈ ಬಿಟ್ಟಿದೆ.