ಮುಂಬೈ, ನ.03: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ ಪ್ರಮುಖ ಅಧಿಕಾರಿ ಸಿಒಒ ಸುಂದರ್ ರಾಮನ್ ಅವರು ತಮ್ಮ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ. ಸುಂದರ್ ಅವರ ರಾಜೀನಾಮೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಪ್ಪಿಕೊಂಡಿದೆ.
ಮಾಧ್ಯಮಗಳ ವರದಿ ಪ್ರಕಾರ, ರಾಮನ್ ಅವರು ಬಿಸಿಸಿಐನ ನೂತನ ಅಧ್ಯಕ್ಷ ಶಶಾಂಕ್ ಮನೋಹರ್ ಅವರನ್ನು ನಾಗ್ಪುರದಲ್ಲಿ ಸೋಮವಾರ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ. ನವೆಂಬರ್ 5ರಂದು ಅಧಿಕೃತವಾಗಿ ಬಿಸಿಸಿಐ ನೀಡಿದ ಹುದ್ದೆಯನ್ನು ತೊರೆಯಲಿದ್ದಾರೆ.

2008ರಿಂದ ಇಂಡಿಯನ್ ಪ್ರಿಮಿಯರ್ ಲೀಗ್ ನ ಸಿಒಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುಂದರ್ ರಾಮನ್ ಅವರನ್ನು ಅಂದಿನ ಐಪಿಎಲ್ ಆಯುಕ್ತ ಲಲಿತ್ ಮೋದಿ ಅವರು ನೇಮಕ ಮಾಡಿದ್ದರು. ಐಪಿಎಲ್ ನಲ್ಲಿನ ಭ್ರಷ್ಟಾಚಾರ, ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪವನ್ನು ಸುಂದರ್ ಅವರು ಹೊರಬೇಕಾಯಿತು.
ಮ್ಯಾಚ್ ಫಿಕ್ಸಿಂಗ್ ಗೆ ಸಂಬಂಧಿಸಿದಂತೆ ಜಸ್ಟೀಸ್ ಲೋಧಾ ಅವರಿದ್ದ ನ್ಯಾಯಪೀಠ ನೀಡಿದ ಆದೇಶದಲ್ಲಿ ಆರೋಪ ಹೊತ್ತಿದ್ದ 14 ಜನರ ಹೆಸರಿನಲ್ಲಿ ಸುಂದರ್ ರಾಮನ್ ಹೆಸರು ಕೂಡಾ ಇದೆ. ನವೆಂಬರ್ 2014ರಲ್ಲಿ ಮುದ್ಗಲ್ ಸಮಿತಿ ನೀಡಿದ ಪಟ್ಟಿಯಲ್ಲೂ ಸುಂದರ್ ರಾಮನ್ ಹೆಸರನ್ನು ಆರೋಪಿ ಎಂದು ಉಲ್ಲೇಖಿಸಲಾಗಿತ್ತು. (ಪಿಟಿಐ)