ನವದೆಹಲಿ, ನ.14:ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ನಡೆದಿದೆ ಎನ್ನಲಾದ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಶುಕ್ರವಾರ ತನಿಖಾ ಸಮಿತಿ ನೀಡಿರುವ ವರದಿ ವಿವರಗಳನ್ನು ಬಹಿರಂಗ ಪಡಿಸಿದೆ. ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ನೇತೃತ್ವದ ಸಮಿತಿ ನೀಡಿರುವ ವರದಿಯಲ್ಲಿ ಗುರುನಾಥ್ ಮೇಯಪ್ಪನ್, ಎನ್ ಶ್ರೀನಿವಾಸನ್ ಹಾಗೂ ರಾಜ್ ಕುಂದ್ರಾ ಹೆಸರು ಉಲ್ಲೇಖಿಸಲಾಗಿದೆ.
ಪ್ರಕರಣದ 13 ಆರೋಪಿಗಳ ಪೈಕಿ 7 ಆರೋಪಿಗಳ ಹೆಸರನ್ನು ಸುಪ್ರೀಂಕೋರ್ಟ್ ಬಹಿರಂಗಪಡಿಸಿದ್ದು, ನವೆಂಬರ್ 24ರಂದು ಮುಂದಿನ ವಿಚಾರಣೆ ನಡೆಯಲಿದೆ. ನವೆಂಬರ್ 20ರಂದು ನಡೆಯಬೇಕಿದ್ದ ಬಿಸಿಸಿಐ ಚುನಾವಣೆಗೆ ಕೋರ್ಟ್ ತಡೆ ನೀಡಿದೆ.
2013ರ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಅವರು ಸತತ ನಾಲ್ಕು ತಿಂಗಳ ಕಾಲ ತನಿಖೆ ನಡೆಸಿ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದ್ದರು. ವರದಿಯಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಮತ್ತು ಅವರ ಅಳಿಯ ಗುರುನಾಥನ್ ಮೇಯಪ್ಪನ್ ರನ್ನೊಳಗೊಂಡ 13 ಮಂದಿ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಐಪಿಎಲ್ 6ನೇ ಆವೃತ್ತಿಯಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ.3ರಂದು ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಕೋರ್ಟಿಗೆ ಸಲ್ಲಿಸಲಾಗಿತ್ತು. ನ.10ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ವರದಿಯಲ್ಲಿರುವ ಹೆಸರುಗಳನ್ನು ಬಹಿರಂಗಪಡಿಸುವಂತೆ ಕೋರ್ಟ್ ಸೂಚಿಸಿತ್ತು. ಅದರಂತೆ ನ.14ರಂದು ವರದಿಯಲ್ಲಿರುವ ಕೆಲ ಹೆಸರುಗಳನ್ನು ಬಹಿರಂಗಪಡಿಸಲಾಗಿದೆ.
ಗಾಳಿಸುದ್ದಿ ಹರಡುತ್ತಿದೆ: ಪಟ್ಟಿಯಲ್ಲಿ ಮುಂಚೆ ವಿಶ್ವಕಪ್ ಗೆದ್ದ ತಂಡದ ಆಟಗಾರನಿದ್ದಾನೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಐವರು ಆಟಗಾರರಿದ್ದಾರೆ, ಟೀಂ ಇಂಡಿಯಾದ ಪ್ರಮುಖ ಆಲ್ ರೌಂಡರ್ ಹೆಸರಿದೆ, ಕ್ರಿಕೆಟ್ ಆಟಗಾರರಲ್ಲದೆ ಚಲನಚಿತ್ರ ನಟರು ಇದರಲ್ಲಿ ಭಾಗಿ ಆಗಿದ್ದಾರೆ ಎಂಬ ಸುದ್ದಿಗಳು ಹಬ್ಬುತ್ತದೇ ಇದೆ ಆದರೆ, ಗುರುನಾಥ್ ಮೇಯಪ್ಪನ್, ರಾಜ್ ಕುಂದ್ರಾ ಹಾಗೂ ಎನ್ ಶ್ರೀನಿವಾಸನ್ ಹೊರತು ಪಡಿಸಿ ಇನ್ಯಾವುದೇ ಹೆಸರು ಅಧಿಕೃತವಾಗಿ ಬಹಿರಂಗವಾಗಿಲ್ಲ.