ಚಾಂಪಿಯನ್ಸ್ ಟ್ರೋಫಿ ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನವನ್ನು ನೀಡುತ್ತಿದೆ. ಭಾರತ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಅಜೇಯ ಓಟವನ್ನು ಮುಂದುವರೆಸಿದೆ. ಭಾನುವಾರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ನಡೆಯಲಿದೆ. ಟೀಮ್ ಇಂಡಿಯಾ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು 4 ವಿಕೆಟ್ಗಳಿಂದ ಮಣಿಸಿ ಟೂರ್ನಿಯ ಫೈನಲ್ಗೆ ಅರ್ಹತೆ ಪಡೆದಿದೆ. ಆದರೆ ಅಭಿಮಾನಿಗಳ ಮನಸ್ಸಿನಲ್ಲಿ ಈಗ ಒಂದು ಪ್ರಶ್ನೆ ಓಡ್ತಾ ಇದೆ. ಹಾಗಿದ್ರೆ ಆ ಪ್ರಶ್ನೆ ಏನು? ಎಂಬ ಬಗ್ಗೆ ವರದಿ ಇಲ್ಲಿದೆ.
ಚಾಂಪಿಯನ್ಸ್ ಟ್ರೋಫಿ ತಂಡ ಪ್ರಕಟವಾದಾಗಿನಿಂದಲೂ, ಈ ತಂಡದ ಸಾಧಕ ಬಾಧಕಗಳ ಮೇಲೆ ಚರ್ಚೆಗಳು ನಡೆಯುತ್ತಲೇ ಇವೆ. ಐದು ಸ್ಪಿನ್ ಬೌಲರ್ಗಳು ದುಬೈನ ಪಿಚ್ನಲ್ಲಿ ಬೇಕಾ ಎಂಬ ಪ್ರಶ್ನೆಗಳು ಏಳುತ್ತವೇ ಇದ್ದವು. ಆದರೆ ಈಗ ಅಭಿಮಾನಿಗಳ ಮನಸ್ಸಿನಲ್ಲಿ ಎದ್ದಿರುವ ಪ್ರಶ್ನೆಗೆ ಸ್ವತಃ ಟೀಮ್ ಮ್ಯಾನೇಜ್ಮೆಂಟ್ ಉತ್ತರ ನೀಡಬೇಕಿದೆ. ಆ ಪ್ರಶ್ನೆ ಯಾದ್ರೂ ಯಾವುದು ಎಂಬುದಕ್ಕೆ ಉತ್ತರ ಇಲ್ಲಿದೆ.

ಕಳೆದ ನವೆಂಬರ್ನಲ್ಲಿ ಸೌದಿಯಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಿತು. ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕೈ ಬಿಟ್ಟ ರಿಷಭ್ ಪಂತ್ ಅವರು ಸಹ ಹರಾಜಿನ ಅಂಗಳದಲ್ಲಿ ಇದ್ದರು. ಇವರಿಗೆ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಕೈ ಬಿಟ್ಟ ಲಕ್ನೋ ಸೂಪರ್ ಜೈಂಟ್ಸ್ ಬಿಡ್ ಮಾಡುತ್ತಲೇ ಸಾಗಿತು. 2 ಕೋಟಿ ಮೂಲ ಬೆಲೆಯೊಂದಿಗೆ ಆರಂಭವಾದ ಬಿಡ್ ನೋಡು ನೋಡುತ್ತಿರುವಂತೆ ಮುಗಿಲೆತ್ತರಕ್ಕೆ ಬಂದು ನಿಂತಿತು. ತಮಗೆ ರಿಷಭ್ ಬೇಕೆ ಬೇಕು ಎಂದು ಎಲ್ಎಸ್ಜಿ ಭಾರೀ ಮೊತ್ತವನ್ನು ಹೂಡಲು ಸಿದ್ಧವಾಯಿತು. ಕೊನೆಗೆ ಇವರಿಗೆ ದಾಖಲೆಯ ಮೊತ್ತ ಅಂದರೆ 27 ಕೋಟಿ ರೂ. ನೀಡಿ ತಮ್ಮ ತಂಡಕ್ಕೆ ಬರಮಾಡಿಕೊಂಡಿತು. ಇವರ ಹಣೆಗೆ ಮತ್ತೊಂದು ದಾಖಲೆಯ ಪಟ್ಟಿ ಅಂಟಿಕೊಂಡಿತು. ರಿಷಭ್ ಐಪಿಎಲ್ನ ದುಬಾರಿ ಆಟಗಾರ.
ಐಪಿಎಲ್ನ ದುಬಾರಿ ಆಟಗಾರ ಎಂಬ ಹಣೆ ಪಟ್ಟಿಯೊಂದಿಗೆ ರಿಷಭ್ ಪಂತ್ ಕಾಣಿಸಿಕೊಳ್ಳತೊಡಗಿದರು. ಈ ವೇಳೆ ಇವರು ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಲೇ ಸಾಗಿದರು. ಆದರೆ ಇವರು ಏಕದಿನ ಕ್ರಿಕೆಟ್ನಲ್ಲಿ ತಮ್ಮ ಸ್ಥಾನವನ್ನು ಭಧ್ರ ಪಡಿಸಿಕೊಳ್ಳುವಲ್ಲಿ ತಡಕಾಟ ನಡೆಸಿದರು. ವಿಕೆಟ್ ಕೀಪರ್ ಬ್ಯಾಟರ್ ಸ್ಥಾನಕ್ಕೆ ಚಾಂಪಿಯನ್ಸ್ ಟ್ರೋಫಿ ಪ್ರಕಟಿತ ತಂಡದಲ್ಲಿ ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್ ಅವರಿಗೆ ಅವಕಾಶ ಸಿಕ್ಕಿತು. ಇವರಿಬ್ಬರಿಗೂ ಅವಕಾಶ ಸಿಕ್ಕಾಗಿನಿಂದಲೂ ಯಾರಿಗೆ ಅವಕಾಶ ಎನ್ನುವುದು ಚರ್ಚಾ ವಸ್ತುವೇ ಆಗಿತ್ತು.

ಟೀಮ್ ಇಂಡಿಯಾದ ಕೋಚ್ ಗೌತಮ್ ಗಂಭೀರ್ ಚಾಂಪಿಯನ್ಸ್ ಟ್ರೋಫಿಯ ವೇಳೆ ತಮ್ಮ ಮೊದಲ ಆಯ್ಕೆಯ ವಿಕೆಟ್ ಕೀಪರ್ ಎಂದು ಕೆಎಲ್ ರಾಹುಲ್ ಅವರನ್ನು ಗುರುತಿಸಿದರು. ಆಗ ರಿಷಭ್ ಪಂತ್ ಕೊಂಚ ಅಸಮಾಧಾನಗೊಂಡರು. ಈ ಬಗ್ಗೆ ಹಲವು ಸುದ್ದಿಗಳು ಹರಿದಾಡಲು ಆರಂಭವಾದವು. ಇವರು ಈ ಪಂದ್ಯದಲ್ಲಿ ಆಡಬಹುದು ಮುಂದಿನ ಪಂದ್ಯದಲ್ಲಿ ಆಡಬಹುದು ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಈಗ ಚಾಂಪಿಯನ್ಸ್ ಟ್ರೋಫಿ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈಗಲೂ ರಿಷಭ್ ಅವರಿಗೆ ಒಂದೇ ಒಂದು ಅವಕಾಶ ಸಿಗದೇ ಇರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಐಪಿಎಲ್ನ ದುಬಾರಿ ಆಟಗಾರ ಎಂಬ ಹಣೆ ಪಟ್ಟಿಯನ್ನು ಹೊತ್ತಿರುವ ರಿಷಭ್ ಪಂತ್, ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದ್ರೂ ಸಹ ಒಂದೇ ಒಂದು ಅವಕಾಶ ಪಡೆಯದೇ ಇರುವುದು ಅಭಿಮಾನಿಗಳಿಗೆ ನೋವು ತಂದಿದೆ.