ಇರಾನಿ ಕಪ್ 2024ರ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ಮತ್ತು ಮುಂಬೈ ನಡುವೆ ಕಠಿಣ ಪೈಪೋಟಿ ಕಂಡುಬಂದಿದೆ. ತಂಡವನ್ನು ಗೆಲ್ಲಿಸಲು ಆಟಗಾರರು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ. ಸ್ಟಾರ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಇದಕ್ಕೆ ದೊಡ್ಡ ಉದಾಹರಣೆ.
ರೆಸ್ಟ್ ಆಫ್ ಇಂಡಿಯಾ ವಿರುದ್ಧ ರಣಜಿ ಚಾಂಪಿಯನ್ ಮುಂಬೈ ಮೊದಲ ಇನ್ನಿಂಗ್ಸ್ನಲ್ಲಿ 537 ರನ್ಗಳಿಗೆ ಆಲೌಟ್ ಆಗಿದೆ. ಮುಂಬೈ ಪರ ಸ್ಪೋಟಕ ಬ್ಯಾಟರ್ ಸರ್ಫರಾಜ್ ಖಾನ್ ದ್ವಿಶತಕ ಸಿಡಿಸಿ ಮಿಂಚಿದರೆ, ನಾಯಕ ಅಜಿಂಕ್ಯಾ ರಹಾನೆ (97), ಶ್ರೇಯಸ್ ಅಯ್ಯರ್ (57) ಮತ್ತು ತನುಷ್ ಕೋಟ್ಯಾನ್ (64) ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಎಲ್ಲದರ ಮಧ್ಯೆ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಎಲ್ಲರ ಗಮನ ಸೆಳೆದಿದೆ.

ಶಾರ್ದೂಲ್ ಠಾಕೂರ್ ಅವರನ್ನು ಅನಾರೋಗ್ಯದ ಕಾರಣ ತಡವಾಗಿ ಬ್ಯಾಟಿಂಗ್ಗೆ ಕಳುಹಿಸಲಾಗಿತ್ತು. ಎರಡನೇ ದಿನ, ಮೋಹಿತ್ ಅವಸ್ಥಿ ವಿಕೆಟ್ ಪತನದ ನಂತರ, 10ನೇ ಕ್ರಮಾಂಕದಲ್ಲಿ ಶಾರ್ದೂಲ್ ಕ್ರೀಸ್ಗೆ ಆಗಮಿಸಿದರು.
ಇನ್ನಿಂಗ್ಸ್ ಮುಂದುವರೆದಂತೆ ಅವರ ಆರೋಗ್ಯ ಹದಗೆಟ್ಟಿತು. ಆದರೂ ಛಲ ಬಿಡದೆ ಆಡಿದ ಅವರು ಮುಂಬೈ ತಂಡದ ಪರ ರನ್ ಕಲೆ ಹಾಕಿದರು. ಅವರು 59 ಎಸೆತಗಳಲ್ಲಿ 36 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರು.
ಲಕ್ನೋದ ಬಿಸಿಲಿನ ತಾಪದಲ್ಲಿ ತಲೆಗೆ ಟವೆಲ್ ಸುತ್ತಿಕೊಂಡು ಅವರು ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂತು. ಸರ್ಫರಾಜ್ ಖಾನ್ ಜೊತೆಗಿನ ಅವರ ಜೊತೆಯಾಟವು ಐತಿಹಾಸಿಕ ದ್ವಿಶತಕ ಗಳಿಸಲು ಸಹಾಯ ಮಾಡಿತು. ದಿನದಾಟ ಅಂತ್ಯದ ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಇದೀಗ ಚೇತರಿಸಿಕೊಂಡಿರುವ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಹದಗೆಡುತ್ತಿರುವ ಆರೋಗ್ಯದ ನಡುವೆಯೂ ಮುಂಬೈ ತಂಡಕ್ಕೆ ಮೊದಲ ಇನ್ನಿಂಗ್ಸ್ನಲ್ಲಿ ಶಾರ್ದೂಲ್ ಆಸರೆಯಾದರು. ವೈರಲ್ ಸೋಂಕಿನ ಕಾರಣ ಅವರನ್ನು ಬುಧವಾರ ಲಕ್ನೋದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ತಂಡದ ಶಾರ್ದೂಲ್ ಅವರಿಗೆ ಚಿಕಿತ್ಸೆ ನೀಡಿದ್ದು, ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಆದರೆ, ಎರಡನೇ ಇನ್ನಿಂಗ್ಸ್ನಲ್ಲಿ ಮುಂಬೈ ಪರ ಅವರು ಮೈದಾನಕ್ಕಿಳಿಯುವ ಸಾಧ್ಯತೆ ಕಡಿಮೆ. ಅವರು ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಅವರ ಚೇತರಿಕೆ ಉತ್ತಮವಾಗಿದ್ದರೆ ತಂಡವನ್ನು ಸೇರಿಕೊಳ್ಳಬಹುದು ಎನ್ನಲಾಗುತ್ತಿದೆ.
ಮೊದಲ ಇನ್ನಿಂಗ್ಸ್ ಆರಂಭಿಸಿರುವ ರೆಸ್ಟ್ ಆಫ್ ಇಂಡಿಯಾ ಪರ ಅಭಿಮನ್ಯು ಈಶ್ವರನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಸಂಕಷ್ಟದಲ್ಲಿರುವ ತಂಡಕ್ಕೆ ಆಸರೆಯಾಗಿ ನಿಂತು ಆಡುತ್ತಿರುವ ಅಭಿಮನ್ಯು ಈಶ್ವರನ್ ಶತಕ ಗಳಿಸಿದ್ದಾರೆ. 158ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 121 ರನ್ ಗಳಿಸಿ ಆಟ ಮುಂದುವರೆಸಿದ್ದಾರೆ. ಸದ್ಯ ರೆಸ್ಟ್ ಆಫ್ ಇಂಡಿಯಾ 307 ರನ್ಗಳಿಂದ ಹಿನ್ನಡೆಯಲ್ಲಿದೆ. ಅಭಿಮನ್ಯು ಈಶ್ವರನ್ ಅವರೊಂದಿಗೆ ಧ್ರುಬ್ ಜುರೆಲ್ ಕ್ರೀಸ್ನಲ್ಲಿದ್ದಾರೆ.