
ಮಧ್ಯಪ್ರದೇಶ ವಿರುದ್ಧದ ಇರಾನಿ ಕಪ್ ಪಂದ್ಯದಲ್ಲಿ ಶೇಷ ಭಾರತ (ರೆಸ್ಟ್ ಆಫ್ ಇಂಡಿಯಾ) ತಂಡ ಮೊದಲನೇ ದಿನವೇ ಬೃಹತ್ ಮೊತ್ತ ಕಲೆಹಾಕಿದೆ. ಯಶಸ್ವೀ ಜೈಸ್ವಾಲ್ ದ್ವಿಶತಕ ಗಳಿಸಿ ಮಿಂಚಿದರೆ, ಅಭಿಮನ್ಯು ಈಶ್ವರನ್ ಭರ್ಜರಿ ಶತಕ ಸಿಡಿಸಿದರು.
ಗ್ವಾಲಿಯರ್ ನ ಕ್ಯಾಪ್ಟನ್ ರೂಪ್ ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಶೇಷ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಟಗಾರ, ನಾಯಕ ಮಯಾಂಕ್ ಅಗರ್ವಾಲ್ 2 ರನ್ ಗಳಿಸುವಷ್ಟರಲ್ಲಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಆದರೆ ನಂತರ ಅಭಿಮನ್ಯು ಈಶ್ವರನ್ ಮತ್ತು ಯಶಸ್ವೀ ಜೈಸ್ವಾಲ್ ಭರ್ಜರಿ ಜೊತೆಯಾಟ ಆಡಿದರು. 2ನೇ ವಿಕೆಟ್ಗೆ ಈ ಜೋಡಿ 371 ರನ್ಗಳನ್ನು ಕಲೆಹಾಕುವ ಮೂಲಕ ಶೇಷ ಭಾರತ ತಂಡಕ್ಕೆ ಆಸರೆಯಾದರು. ಯಶಸ್ವೀ ಜೈಸ್ವಾಲ್ ಅಮೋಘ ದ್ವಿಶತಕ ಗಳಿಸಿ ಮಿಂಚಿದರು.
259 ಎಸೆತಗಳನ್ನು ಎದುರಿಸಿದ ಯಶಸ್ವೀ ಜೈಸ್ವಾಲ್ 30 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 213 ರನ್ ಗಳಿಸಿದರು. ಅಭಿಮನ್ಯು ಈಶ್ವರನ್ 240 ಎಸೆತಗಳಲ್ಲಿ 17 ಬೌಂಡರಿ 2 ಭರ್ಜರಿ ಸಿಕ್ಸರ್ ಸಹಾಯದಿಂದ 154 ರನ್ ಗಳಿಸಿದರು. ಮೊದಲನೇ ದಿನದಾಟ ಮುಕ್ತಾಯವಾಗುವ ಕೆಲವೇ ಓವರ್ ಗಳ ಮುನ್ನ ಔಟಾದರು. ಮೊದಲನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 381 ರನ್ ಗಳಿಸಿದೆ.

ವಿಕೆಟ್ ಪಡೆಯಲು ಪರದಾಡಿದ ಮಧ್ಯಪ್ರದೇಶ
ಆರಂಭದಲ್ಲಿ ನಾಯಕ ಮಯಾಂಕ್ ಅಗರ್ವಾಲ್ ವಿಕೆಟ್ ಪಡೆಯುವ ಮೂಲಕ ಮಧ್ಯ ಪ್ರದೇಶ ಮೇಲುಗೈ ಸಾಧಿಸಿದರು. ನಂತರ ಯಶಸ್ವೀ ಜೈಸ್ವಾಲ್ ಮತ್ತು ಅಭಿಮನ್ಯು ಈಶ್ವರನ್ ಮಧ್ಯ ಪ್ರದೇಶದ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದರು.
7 ವಿಕೆಟ್ಗೆ ಮೊದಲ ವಿಕೆಟ್ ಬಿದ್ದ ನಂತರ ಎರಡನೇ ವಿಕೆಟ್ ಪಡೆಯಲು 378 ರನ್ಗಳವರೆಗೆ ಕಾಯಬೇಕಾಯಿತು. 378 ರನ್ ಗಳಿಸಿದ್ದಾಗ ಯಶಸ್ವಿ ಜೈಸ್ವಾಲ್ ಆವೇಶ್ ಖಾನ್ಗೆ ಬೌಲ್ಡ್ ಆದರು. ನಂತರ ಅಭಿಮನ್ಯು ಈಶ್ವರನ್ ಕೂಡ ರನೌಟ್ ಆದರು.
ಮೊದಲ ದಿನದಾಟದ ಅಂತ್ಯಕ್ಕೆ ಮಧ್ಯಪ್ರದೇಶ ಕೇವಲ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಯಿತು. 8 ಎಸೆತಗಳನ್ನು ಎದುರಿಸಿದ ಸೌರಭ್ ಕುಮಾರ್ ರನ್ ಖಾತೆ ತೆರಯದೇ ಎರಡನೇ ದಿನಕ್ಕೆ ವಿಕೆಟ್ ಉಳಿಸಿಕೊಂಡಿದ್ದಾರೆ. ಬಾಬಾ ಇಂದ್ರಜಿತ್ ಕೂಡ 3 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

ಉಭಯ ತಂಡಗಳ ಆಡುವ ಬಳಗ
ಮಧ್ಯಪ್ರದೇಶ: ಹಿಮಾಂಶು ಮಂತ್ರಿ (ನಾಯಕ), ಹರ್ಷ್ ಗಾವ್ಲಿ, ಅಮನ್ ಸೋಲಂಕಿ, ಶುಭಂ ಎಸ್ ಶರ್ಮಾ, ಅರ್ಹಮ್ ಅಕ್ವಿಲ್, ಯಶ್ ದುಬೆ, ಸರನ್ಶ್ ಜೈನ್, ಅಂಕಿತ್ ಕುಶ್ವಾ, ಕುಮಾರ್ ಕಾರ್ತಿಕೇಯ, ಅನುಭವ್ ಅಗರ್ವಾಲ್, ಅವೇಶ್ ಖಾನ್.
ಶೇಷ ಭಾರತ : ಮಯಾಂಕ್ ಅಗರ್ವಾಲ್ (ನಾಯಕ), ಅಭಿಮನ್ಯು ಈಶ್ವರನ್, ಯಶಸ್ವಿ ಜೈಸ್ವಾಲ್, ಯಶ್ ಧುಲ್, ಬಾಬಾ ಇಂದ್ರಜಿತ್, ಮುಖೇಶ್ ಕುಮಾರ್, ಉಪೇಂದ್ರ ಯಾದವ್, ಪುಲ್ಕಿತ್ ನಾರಂಗ್, ಸೌರಭ್ ಕುಮಾರ್, ಅತಿತ್ ಶೇತ್, ನವದೀಪ್ ಸೈನಿ