
ನವದೆಹಲಿ: ದಿನದಿಂದ ದಿನಕ್ಕೆ ಭಾರತದಲ್ಲಿ ಕೋವಿಡ್-19 ಸಮಸ್ಯೆಗಳು ಹೆಚ್ಚುತ್ತಲೇ ಇವೆ. ಭಾರತವನ್ನು ಕಾಡುತ್ತಿರುವ ಕೋವಿಡ್-19 ದ್ವಿತೀಯ ಅಲೆಯಿಂದಾಗಿ ಜನಜೀವನ ತೊಂದರೆಗೆ ಸಿಲುಕಿದೆ. ಕೊರೊನಾದಿಂದ ತೊಂದರೆಗೀಡಾಗಿರುವವರಿಗೆ ಸೆರವಿನ ಹಸ್ತ ಚಾಚಲು ಭಾರತದ ಮಾಜಿ ಕ್ರಿಕೆಟಿಗರಾದ ಪಠಾಣ್ ಸಹೋದರರು ಮುಂದಾಗಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ಗಳಾದ ಯೂಸುಫ್ ಪಠಾಣ್ ಮತ್ತು ಅವರ ತಮ್ಮ ಇರ್ಫಾನ್ ಪಠಾಣ್ ಕೊರೊನಾ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿದ್ದಾರೆ. ಪಿಡುಗಿನ ಸಂದರ್ಭದಲ್ಲಿ ಆಹಾರದ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಉಚಿತ ಆಹಾರ ನೀಡಲು ಪಠಾಣ್ ಸಹೋದದರು ನಿರ್ಧರಿಸಿದ್ದಾರೆ.
ಕ್ರಿಕೆಟ್ ಅಕಾಡೆಮಿ ಆಫ್ ಪಠಾಣ್ಸ್ ಹೆಸರಿನ ಕ್ರಿಕೆಟ್ ಅಕಾಡೆಮಿಯನ್ನು ಪಠಾಣ್ ಸಹೋದರರು ನಡೆಸುತ್ತಿದ್ದಾರೆ. ಈ ಅಕಾಡೆಮಿಯ ಮೂಲಕ ಆಹಾರದ ಸಮಸ್ಯೆ ಎದುರಿಸುತ್ತಿರುವವರಿಗೆ ಉಚಿತ ಆಹಾರ ನೀಡಲು ಪಠಾಣ್ ಸಹೋದರರು ಮುಂದಾಗಿದ್ದಾರೆ. ದಕ್ಷಿಣ ದೆಹಲಿ ಭಾಗದಲ್ಲಿ ಈ ಉಚಿತ ಆಹಾರ ಸೇವೆ ದೊರೆಯಲಿದೆ.
ಮೇ 5ರಂದು ಟ್ವೀಟ್ ಮಾಡಿರುವ ಇರ್ಫಾನ್ ಪಠಾಣ್, 'ಕೋವಿಡ್-19 ದ್ವಿತೀಯ ಅಲೆಯಲ್ಲಿ ದೇಶ ಸಂಕಷ್ಟದಲ್ಲಿರುವಾಗ ಜನರಿಗೆ ಕೈಲಾದ ನೆರವು ನೀಡೋದು ನಮ್ಮ ಜವಾಬ್ದಾರಿ. ಇದನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಕ್ರಿಕೆಟ್ ಅಕಾಡೆಮಿ ಆಫ್ ಪಠಾಣ್ಸ್ ದಕ್ಷಿಣ ದೆಹಲಿ ಭಾಗದಲ್ಲಿ ಕೊರೊನಾ ಸಂಕಷ್ಟದಲ್ಲಿರುವವರಿಗೆ ಉಚಿತ ಊಟ ನೀಡಲಿದೆ' ಎಂದು ಬರೆದುಕೊಂಡಿದ್ದಾರೆ.