ಸದ್ಯ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅರ್ಧ ಹಂತವನ್ನು ಮುಗಿಸಿದ್ದು, ಇದಾದ ಬಳಿಕ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭಗೊಳ್ಳಲಿದೆ. ಇದಕ್ಕಾಗಿ ಭಾರತ ತಂಡದ ಆಯ್ಕೆ ಕುರಿತು ಭಾರೀ ಚರ್ಚೆ ನಡೆದಿದೆ.
ಇದೇ ವೇಳೆ ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರು ಮುಂಬರುವ ಟಿ20 ವಿಶ್ವಕಪ್ 2024ರಲ್ಲಿ ಭಾರತ ತಂಡದ ಟಾಪ್ 3 ಬ್ಯಾಟಿಂಗ್ ಕ್ರಮಾಂಕವನ್ನು ಆಯ್ಕೆ ಮಾಡಿದ್ದಾರೆ.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಅಗ್ರ 3ರಲ್ಲಿ ಇರ್ಫಾನ್ ಪಠಾಣ್ ಆಯ್ಕೆ ಮಾಡಿದರು.
ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಆರಂಭಿಕ ಜೋಡಿಯ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಆದರೆ ಸೋಮವಾರದ ಐಪಿಎಲ್ 2024ರ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅದ್ಭುತ ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್ ಅವರೊಂದಿಗೆ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಬೇಕು ಎಂದು ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ವಿರಾಟ್ ಕೊಹ್ಲಿಯನ್ನು 3ನೇ ಕ್ರಮಾಂಕದಲ್ಲಿ ಇರ್ಫಾನ್ ಪಠಾಣ್ ಆಯ್ಕೆ ಮಾಡಿದರು. ಟಿ20 ಪಂದ್ಯಗಳಲ್ಲಿ ಕೊಹ್ಲಿಯ ಸ್ಟ್ರೈಕ್ ರೇಟ್ ವೆಸ್ಟ್ ಇಂಡೀಸ್ ಮಾಜಿ ದಿಗ್ಗಜ ಕ್ರಿಸ್ ಗೇಲ್ ಅವರಿಗಿಂತ ಉತ್ತಮವಾಗಿದೆ ಮತ್ತು ಅವರ ಪರಾಕ್ರಮದ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ ಎಂದರು.
"ಇದೀಗ ಟಿ20 ವಿಶ್ವಕಪ್ ಸಮೀಪಿಸುತ್ತಿದೆ. ಟೀಮ್ ಇಂಡಿಯಾಗೆ ನನ್ನ ಟಾಪ್ 3 ಆಯ್ಕೆಗಳು ಹೀಗಿವೆ," ಎಂದು ಇರ್ಫಾನ್ ಪಠಾಣ್ ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
1) ರೋಹಿತ್ ಶರ್ಮಾ (ಬ್ಯಾಟಿಂಗ್ ಫಾರ್ಮ್ ಮತ್ತು ನಾಯಕ)
2) ಯಶಸ್ವಿ ಜೈಸ್ವಾಲ್ (ಐಪಿಎಲ್ನಲ್ಲಿ ಇತ್ತೀಚಿನ ಶತಕಕ್ಕೂ ಮುನ್ನ ಟೀಮ್ ಇಂಡಿಯಾಗಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರು)
3) ವಿರಾಟ್ ಕೊಹ್ಲಿ (ಅವರ ಕ್ರಮಾಂಕ ಅಥವಾ ಸ್ಟ್ರೈಕ್ ರೇಟ್ ಬಗ್ಗೆ ಯಾವುದೇ ಪ್ರಶ್ನೆ ಇರಬಾರದು. ಟಿ20 ಪಂದ್ಯಗಳಲ್ಲಿ ಅವರ ಸ್ಟ್ರೈಕ್ ರೇಟ್ 138+ ಇದ್ದು, ಕ್ರಿಸ್ ಗೇಲ್ ಅವರ 51+ ಸರಾಸರಿಗಿಂತ ಉತ್ತಮವಾಗಿದೆ. ಕೊಹ್ಲಿಯ ಐಪಿಎಲ್ ಸ್ಟ್ರೈಕ್ ರೇಟ್ ಈ ಋತುವಿನಲ್ಲಿ 150 ಆಗಿದೆ)
"ಮುಂಬೈ ಇಂಡಿಯನ್ಸ್ ಈಗಲೂ ಕಾಗದದ ಮೇಲೆ ಉತ್ತಮ ತಂಡವಾಗಿದೆ. ಆದರೆ ಅತ್ಯಂತ ಕಳಪೆಯಾಗಿ ನಿರ್ವಹಿಸಲಾಗುತ್ತಿದೆ. ವಿಶೇಷವಾಗಿ, ಹಾರ್ದಿಕ್ ಪಾಂಡ್ಯ ನಾಯಕನಾಗಿ ಫಾರ್ಮ್ ಕೊರತೆಯಿದ್ದರೆ, ಅವರು ತಮ್ಮದೇ ತಂಡಕ್ಕೆ ದುರ್ಬಲ ಕೊಂಡಿಯಾಗಿದ್ದಾರೆ," ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕಿಡಿಕಾರಿದರು.
"ಹಾರ್ದಿಕ್ ಪಾಂಡ್ಯ ಸ್ವತಃ ಶಾಟ್ ಬಾರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತಿರುವುದು ನನಗೆ ದೊಡ್ಡ ಚಿಂತೆಯಾಗಿದೆ. ಇದು ಭಾರತ ತಂಡಕ್ಕೂ ಆತಂಕದ ವಿಚಾರ. ಅವನು ಫಾರ್ಮ್ಗೆ ಮರಳಲು ಸುಲಭವಾದ ಮಾರ್ಗಗಳನ್ನು ಹುಡುಕುತ್ತಿರುವಂತೆ ತೋರುತ್ತದೆ ಮತ್ತು ತನ್ನನ್ನು ತಾನು ಆರಾಮದಾಯಕ ಸ್ಥಿತಿಯಲ್ಲಿ ಇರಿಸಿಕೊಳ್ಳಲು ಬಯಸುತ್ತಿದ್ದಾನೆ. ಹೀಗಾಗಿಯೇ ಪಾಂಡ್ಯ ತಮ್ಮ ತಂಡ ಮತ್ತು ಸಹ ಆಟಗಾರರ ಗೌರವವನ್ನು ಗಳಿಸಲು ಸಾಧ್ಯವಾಗುತ್ತಿಲ್ಲ," ಎಂದು ಇರ್ಫಾನ್ ಪಠಾಣ್ ವಿಡಿಯೋದಲ್ಲಿ ಹೇಳಿದ್ದಾರೆ.