ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು 2022ರ ಟಿ20 ವಿಶ್ವಕಪ್ ಮುಗಿದ 14 ತಿಂಗಳ ನಂತರ, ಮೊದಲ ಟಿ20 ಸರಣಿಗೆ ಆಯ್ಕೆ ಮಾಡುವ ಮೂಲಕ ಬಿಸಿಸಿಐ ಆಯ್ಕೆ ಸಮಿತಿಯು ತಂಡದಲ್ಲಿ ಯಥಾಸ್ಥಿತಿ ಕಾಪಾಡಿದ್ದಾರೆ.
ಇದು ಮತ್ತೊಂದು ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಅವಕಾಶಗಳ ಮೇಲೆ ಪ್ರಭಾವ ಬೀರುತ್ತದೆಯೇ? ಎಂಬುದಕ್ಕೆ ಕಾಲವೇ ಉತ್ತರಿಸಲಿದೆ. ಟಿ20 ವಿಶ್ವಕಪ್ನ ಹಿಂದಿನ ಎರಡು ಆವೃತ್ತಿಗಳಲ್ಲಿ ಆಘಾತ ಅನುಭವಿಸಿದ ನಂತರ, ಇದೀಗ ಕ್ರಿಕೆಟ್ನ ಇಬ್ಬರು ಶ್ರೇಷ್ಠ ಆಟಗಾರರು ಟಿ20 ಸ್ವರೂಪದಲ್ಲಿ ವೈಭವದ ತೆರೆ ಎಳೆಯಲು ಸಜ್ಜಾಗುತ್ತಿದ್ದಾರೆ.

ನವೆಂಬರ್ 2022ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ನ ಸೆಮಿಫೈನಲ್ ಸೋಲಿನ ನಂತರ, ಭಾರತ ತಂಡವನ್ನು ಮುಂದಕ್ಕೆ ಕೊಂಡೊಯ್ಯಲು ಆಯ್ಕೆ ಮಾಡಿದ ಯುವ ಆಟಗಾರರ ಮೇಲೆ ಇನ್ನೂ ಆಯ್ಕೆಗಾರಿಗೆ ನಂಬಿಕೆ ಬಂದಿಲ್ಲ.
ಸದ್ಯ ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿಯನ್ನು ಜನವರಿ 11ರಿಂದ ಪ್ರಾರಂಭವಾಗುವ ಅಫ್ಘಾನಿಸ್ತಾನ ವಿರುದ್ಧದ ತವರಿನ ಸರಣಿಗೆ ಆಯ್ಕೆ ಮಾಡಲಾಗಿದ್ದು, ಜೂನ್ನಲ್ಲಿ ಯುಎಸ್ಎ ಮತ್ತು ಕೆರಿಬಿಯನ್ನಲ್ಲಿ ನಡೆಯುವ ಐಸಿಸಿ ಪಂದ್ಯಾವಳಿಗೆ ಭಾರತದ ತಂಡದ ಭಾಗವಾಗಲಿದ್ದಾರೆ ಎಂಬ ಮುನ್ಸೂಚನೆ ಸಿಕ್ಕಿದಂತಾಗಿದೆ.
ಭಾರತ ತಂಡವನ್ನು ಏಕದಿನ ವಿಶ್ವಕಪ್ನ ಫೈನಲ್ಗೆ ಕೊಂಡೊಯ್ಯುವಲ್ಲಿ ಇಬ್ಬರು ಸ್ಟಾರ್ ಆಟಗಾರರ ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಆದರೆ ಮೊದಲನೇ ಬಾಲ್ನಿಂದ ರನ್ ಗಳಿಸಬೇಕಿರುವ ಚುಟುಕು ಕ್ರಿಕೆಟ್ನ ಬೇಡಿಕೆಗಳಿಗೆ ಇಬ್ಬರು ಹೆಜ್ಜೆ ಹಾಕಬಹುದೇ? ಎಂಬುದು ಪ್ರಶ್ನಾರ್ಹವಾಗಿದೆ.

ನಾಯಕ ರೋಹಿತ್ ಶರ್ಮಾ ತಮ್ಮ ಆಕ್ರಮಣಕಾರಿ ಆಟದ ಮೂಲಕ ಪ್ರಭಾವಶಾಲಿ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊಹಾಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಅದೇ ಧಾಟಿಯಲ್ಲಿ ಆಡುವ ಸಾಧ್ಯತೆಯಿದೆ.
ಮತ್ತೊಂದೆಡೆ, ವಿರಾಟ್ ಕೊಹ್ಲಿಯ ಆಟವು 50-ಓವರ್ಗಳ ಸ್ವರೂಪಕ್ಕೆ ಹೇಳಿ ಮಾಡಿಸಿದಂತಿದೆ. ಅಲ್ಲದೆ, ಅವರು 148 ಟಿ20 ಪಂದ್ಯಗಳಲ್ಲಿ 137.96ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೋಹಿತ್ ಶರ್ಮಾ ಟಿ20 ಪಂದ್ಯಗಳಲ್ಲಿ ಸುಮಾರು 140ರ ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿದರು. ಆಧುನಿಕ ಕ್ರಿಕೆಟ್ನ ವೇಗವಾಗಿ ಬದಲಾಗುತ್ತಿರುವ ಬೇಡಿಕೆಗಳನ್ನು ಮುಂದುವರಿಸಲು ಅವರು ಕೂಡ ಹೆಚ್ಚಿನ ಬ್ಯಾಟಿಂಗ್ ಪ್ರದರ್ಶನ ನೀಡಬೇಕಾಗುತ್ತದೆ.
ಇವರಿಗೆ ವಿರುದ್ಧವಾಗಿ ವಿಶ್ವದ ಅತ್ಯುತ್ತಮ ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು 170ಕ್ಕೂ ಅಧಿಕ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಮಾಡುತ್ತಾರೆ. ಇನ್ನು ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಅವರಂತಹ ಆಟಗಾರರು ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಸಿಕ್ಕ ಅವಕಾಶಗಳಲ್ಲಿ ಭರವಸೆ ತೋರಿಸಿದರು. ಆದರೆ ಐಸಿಸಿ ಪಂದ್ಯಾವಳಿಯಲ್ಲಿ ಅನುಭವಕ್ಕೆ ಪರ್ಯಾಯವಾಗಿ ಯಾವುದೂ ಇಲ್ಲ.
ಟಿ20 ತಂಡಕ್ಕೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರ್ಪಡೆಯನ್ನು ಬೆಂಬಲಿಸಿರುವ ಮಾಜಿ ದಿಗ್ಗಜರಾದ ಸುನಿಲ್ ಗವಾಸ್ಕರ್ ಮತ್ತು ಸೌರವ್ ಗಂಗೂಲಿ ಸೇರಿದಂತೆ ಹಲವು ಮಾಜಿ ಆಟಗಾರರು ಒಮ್ಮತದಿಂದ ಧ್ವನಿ ಎತ್ತಿದ್ದಾರೆ.
ಭಾರತ ತಂಡದ ಮಾಜಿ ಆಯ್ಕೆಗಾರ ಸರಣ್ದೀಪ್ ಸಿಂಗ್ ಕೂಡ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಟಿ20 ಸರಣಿಗೆ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಇದು ಸರಿಯಾದ ನಿರ್ಧಾರ. ಐಸಿಸಿ ಪಂದ್ಯಾವಳಿಗಳಲ್ಲಿ, ನಿಮಗೆ ಒತ್ತಡವನ್ನು ಉತ್ತಮವಾಗಿ ನಿಭಾಯಿಸುವ ಆಟಗಾರರು ಬೇಕಾಗಿದ್ದಾರೆ. ಅವರಿಬ್ಬರೂ ಏಕದಿನ ವಿಶ್ವಕಪ್ನಲ್ಲಿ ಅದ್ಭುತವಾಗಿದ್ದರು ಮತ್ತು ಉನ್ನತ ಫಾರ್ಮ್ನಲ್ಲಿದ್ದರು. ಆದರೆ, ಈ ಬೆಳವಣಿಗೆ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ಗೆ ಅವಕಾಶ ಕಲ್ಪಿಸುವುದು ತುಂಬಾ ಕಷ್ಟ," ಎಂದು ಸರಣ್ದೀಪ್ ಸಿಂಗ್ ತಿಳಿಸಿದರು.
"ನೀವು ಬೆಂಚ್ ಬಲವನ್ನು ಸಹ ಸಿದ್ಧಪಡಿಸಬೇಕು. ಎಲ್ಲಾ ಸಂಭಾವ್ಯಗಳಲ್ಲಿ ಇದು ರೋಹಿತ್ ಮತ್ತು ಕೊಹ್ಲಿಯ ಕೊನೆಯ ಟಿ20 ವಿಶ್ವಕಪ್ ಆಗಿರುತ್ತದೆ. ರೋಹಿತ್ ಮತ್ತು ವಿರಾಟ್ ಅವರಿಗೆ ವಿಶ್ರಾಂತಿ ನೀಡದ ಹೊರತು ನೀವು ಜೈಸ್ವಾಲ್, ರುತುರಾಜ್, ಜಿತೇಶ್ ಶರ್ಮಾ ಮತ್ತು ಇತರರನ್ನು ಪ್ರಯತ್ನಿಸಲು ಸಾಧ್ಯವಿಲ್ಲ," ಎಂದರು.
"ಈ ಇಬ್ಬರು ಶ್ರೇಷ್ಠ ಆಟಗಾರರು ಪುನರಾಗಮನ ಮಾಡಲು ಕಡಿಮೆ ಸ್ವರೂಪವನ್ನು ಆಡುವ ಅಗತ್ಯವಿಲ್ಲ. ಮುಂಬರುವ 2024ರ ಐಪಿಎಲ್ನಲ್ಲಿನ ಪ್ರದರ್ಶನವು ಎಲ್ಲಾ ವಿಶ್ವಕಪ್ ತಂಡದ ಸಂಭಾವ್ಯ ಆಟಗಾರರ ಚಿತ್ರಣವನ್ನು ಸ್ಪಷ್ಟಪಡಿಸುತ್ತದೆ," ಎಂದು ಭಾರತದ ಮಾಜಿ ಸ್ಪಿನ್ನರ್ ಕೂಡ ಆಗಿರುವ ಸರಣ್ದೀಪ್ ಸಿಂಗ್ ಹೇಳಿದರು.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರ್ಪಡೆಗೊಳಿಸುವುದರೊಂದಿಗೆ ಬಿಸಿಸಿಐ ಆಯ್ಕೆಗಾರರು ದೋಣಿಯನ್ನು ಅಲುಗಾಡಿಸಲು ಬಯಸಲಿಲ್ಲ ಎಂಬುದು ಸ್ಪಷ್ಟವಾಗಿದೆ.
ಇನ್ನು ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರು ಒಬ್ಬರನ್ನು ಬಿಟ್ಟು ಮತ್ತೊಬ್ಬರನ್ನು ಸೇರ್ಪಡೆಗೊಳಿಸಲು ಸಾಧ್ಯವಾಗದ ಕಾರಣ, ಆಯ್ಕೆಗಾರರು ಇಬ್ಬರೂ ಅನುಭವಿಗಳನ್ನು ಆಯ್ಕೆ ಮಾಡಬೇಕಾಯಿತು ಎಂದು ಭಾವಿಸಿದ್ದಾರೆ.