ಅಕ್ಸರ್ ಪಟೇಲ್ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಭಾರತ ತಂಡದಲ್ಲಿ ಸ್ಥಾನ ನೀಡಿದ್ದರೂ ಸಹ, ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಸ್ಪಿನ್ ಬೌಲಿಂಗ್ ಆಲ್ ರೌಂಡರ್ ಆಗಿ ಭಾರತದ ವಿಶ್ವಕಪ್ ತಂಡದ ಪ್ಲ್ಯಾನ್ ನಲ್ಲಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದರು. ಅಂದರೆ ಅಶ್ವಿನ್ಗೆ ಇನ್ನೂ ಏಕದಿನ ವಿಶ್ವಕಪ್ ಆಡುವ ಅವಕಾಶವಿದೆ. ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ ಆರಂಭವಾಗಲಿದೆ. ಭಾರತದಲ್ಲಿ 10 ಮೈದಾನಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ.
ಅಶ್ವಿನ್ ಸ್ಪಿನ್ನರ್ ಆಲ್ ರೌಂಡರ್ ಆಗಿ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಷ್ಯಾ ಕಪ್ ವೇಳೆ ಅಕ್ಷರ್ ಗಾಯಗೊಂಡಿದ್ದರು. ಇವರ ಬದಲಿಗೆ ವಾಷಿಂಗ್ಟನ್ ಸುಂದರ್ ತಂಡವನ್ನು ಸೇರಿಕೊಂಡಿದ್ದರು. ಸುಂದರ್ ಅವರು ಏಷ್ಯನ್ ಗೇಮ್ಸ್ ತರಬೇತಿ ಶಿಬಿರದಲ್ಲಿ ಭಾಗವಾಗಿರುವುದರಿಂದ ಪಂದ್ಯವನ್ನು ಆಡಲು ತಕ್ಷಣವೇ ಫಿಟ್ ಆಗಿದ್ದರು. ಹೀಗಾಗಿ ವಾಶಿಂಗ್ಟನ್ ಸುಂದರ್ ಗೆ ಶ್ರೀಲಂಕಾದಲ್ಲಿ ನಡೆದ ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಲಭಿಸಿತು.

ಇನ್ನು ಈಗಾಗಲೇ ವಿಶ್ವಕಪ್ ತಂಡವನ್ನು ಪ್ರಕಟಿಸಲಾಗಿದೆ. ಹೀಗಿರುವಾಗ ಅಶ್ವಿನ್ ಗೆ ತಂಡದಲ್ಲಿ ಹೇಗೆ ಸ್ಥಾನ ಲಭಿಸಬಹುದು ಎಂಬ ಪ್ರಶ್ನೆಗಳು ಮೂಡುವುದು ಸಹಜ. ಇದಕ್ಕೆ ಉತ್ತರ ಇಲ್ಲಿದೆ.
ಅಕ್ಷರ್ ಪಟೇಲ್ ಏಷ್ಯಾ ಕಪ್ ನ ಸೂಪರ್ 4 ಪಂದ್ಯದಲ್ಲಿ ಆಡುವಾಗ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಅವರಿಗೆ ಚೇತರಿಕಗೆ ಸಮಯಾವಕಾಶ ಬೇಕಾಗುತ್ತದೆ. ಅಕ್ಟೋಬರ್ 5ರ ವಳಗೆ ಅಕ್ಷರ್ ಫಿಟ್ ಆಗುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ. ಇದೇ ಅವಕಾಶವನ್ನು ಬಳಿಸಿಕೊಳ್ಳಲು ಅನುಭವಿ ಸ್ಪಿನ್ ಬೌಲರ್ ಆರ್.ಅಶ್ವಿನ್ ಕಾಯುತ್ತಿದ್ದಾರೆ. ಅವರಿಗೆ ಇದಕ್ಕಾಗಿ ಒಂದು ಅವಕಾಶವೂ ಲಭಿಸಿದೆ.
ಹೌದು, ಭಾರತದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಅಶ್ವಿನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತವರಿನಲ್ಲಿ ನಡೆಯುವ ಮೂರು ಪಂದ್ಯಗಳ ಸರಣಿಯಲ್ಲಿ ಅಶ್ವಿನ್ ಅಮೋಘ ಪ್ರದರ್ಶನ ನೀಡಿದ್ದೇ ಆದಲ್ಲಿ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಖುಷಿ ಸುದ್ದಿ ಬರಲಿದೆ.
ಅಶ್ವಿನ್ ಕೊನೆಯ ಬಾರಿಗೆ 2022 ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯವನ್ನು ಆಡಿದ್ದರು. ಪ್ರಶಸ್ತಿ ಗೆದ್ದ ನಂತರ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಸ್ಟಾರ್ ಆಲ್ ರೌಂಡರ್ ಅಕ್ಷರ್ ಪಟೇಲ್ ಮತ್ತು ಬ್ಯಾಟ್ಸ್ ಮನ್ ಶ್ರೇಯಸ್ ಅಯ್ಯರ್ ಅವರ ಆರೋಗ್ಯ ಮತ್ತು ಫಿಟ್ನೆಸ್ ಕುರಿತು ಮಾತನಾಡಿದರು. ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಮುಂದಿನ ವಾರ ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ ಎಂದು ರೋಹಿತ್ ಹೇಳಿದ್ದರು, ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ 99 ಪ್ರತಿಶತದಷ್ಟು ಮ್ಯಾಚ್ ಗೆ ಫಿಟ್ ಆಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ ಬೌಲರ್ ಈಗಾಗಲೇ ಘೋಷಿತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಈ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದರು. ಆದರೆ ಈಗ ಟೀಮ್ ಇಂಡಿಯಾ ಸೇರಲು ಅಶ್ವಿನ್ ತುದಿಗಾಲಿನಲ್ಲಿ ನಿಂತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದರೆ ಅವರು ತಂಡಕ್ಕೆ ವಾಪಸಾಗುವ ಸಾಧ್ಯತೆ ಹೆಚ್ಚಾಗಿದೆ.
ಇನ್ನು ಅಶ್ವಿನ್ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಹೇಗೆ ಸಿಗಲು ಸಾಧ್ಯ ಎಂಬ ಪ್ರಶ್ನೆಗಳು ಏಳುವುದು ಸಹಜ. ಅಂದಹಾಗೆ ಐಸಿಸಿ ನಿಯಮಗಳ ಪ್ರಕಾರ ಯಾವುದೇ ಆಟಗಾರ ಗಾಯದ ಸಮಸ್ಯೆಯಿಂದ ಹೊರಗೆ ಉಳಿದರೆ, ಅವನಿಗೆ ಬದಲಿ ಆಟಗಾರನನ್ನು ಆಯ್ಕೆ ಮಾಡುವ ಅವಕಾಶ ಇದೆ. ಆದರೆ, ಇಬ್ಬರೂ ಆಟಗಾರರ ಒಂದೇ ರೋಲ್ ಅನ್ನು ತಂಡದಲ್ಲಿ ನಿಭಾಯಿಸುತ್ತಿರಬೇಕು ಅಂತವರಿಗೆ ಅವಕಾಶ ಲಭಿಸುತ್ತದೆ.
ಅಕ್ಷರ್ ಪಟೇಲ್ ವಿಶ್ವಕಪ್ ತಂಡದಲ್ಲಿ ಸ್ಪಿನ್ ಆಲ್ ರೌಂಡರ್ ಆಗಿ ಸ್ಥಾನ ಪಡೆದಿದ್ದರು. ಅಶ್ವಿನ್ ಸಹ ಸ್ಪಿನ್ ಆಲ್ ರೌಂಡರ್ ಆಗಿರುವುದರಿಂದ, ಒಂದು ವೇಳೆ ಅಕ್ಷರ್ ಪಟೇಲ್ ಗಾಯದಿಂದ ಚೇತರಿಸಿಕೊಳ್ಳದೇ ಇದ್ದಲ್ಲಿ ಅಶ್ವಿನ್ ತಂಡವನ್ನು ಸೇರಿಕೊಳ್ಳಬಹುದು.