ಐಪಿಎಲ್ 2024ರ ಮಿನಿ ಹರಾಜು ಪ್ರಕ್ರಿಯೆಗೆ ದಿನಗಣನೆ ಆರಂಭವಾಗಿದ್ದು, ಇದೇ ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ ಮತ್ತು ಪಂದ್ಯಾವಳಿಯ 17ನೇ ಆವೃತ್ತಿಯ ಪ್ರಾರಂಭಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಉಸಿರುಗಟ್ಟಿಸುವ ರೋಚಕ ಕ್ರಿಕೆಟ್ ಪಂದ್ಯಾವಳಿಯು ಅಧಿಕ ಜನರ ಗಮನವನ್ನು ಸೆಳೆಯುತ್ತಿದೆ. ಅಲ್ಲದೆ ಈ ಒಂದು ವಿಚಾರವು ಭಾರೀ ಕುತೂಹಲ ಮೂಡಿಸಿದೆ. ಏಕೆಂದರೆ ಅಭಿಮಾನಿಗಳು ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ವೃತ್ತಿಜೀವನದ ಅಂತ್ಯಕ್ಕೆ ಸಾಕ್ಷಿಯಾಗಲಿದ್ದಾರೆ.

42 ವರ್ಷದ ವಿಕೆಟ್ಕೀಪರ್-ಬ್ಯಾಟರ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದು ಐಪಿಎಲ್ ಪ್ರಶಸ್ತಿಗಳಿಗೆ ಯಶಸ್ವಿಯಾಗಿ ಮುನ್ನಡೆಸಿದರು. ಇದೇ ವೇಳೆ ಮುಂಬರುವ ಐಪಿಎಲ್ ಋತುವಿನಲ್ಲಿ ಅವರ ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದಾರೆ. ಆದರೆ, ಈ ಸೀಸನ್ ಎಂಎಸ್ ಧೋನಿಗೆ ವಿದಾಯದ ಋತುವಾಗಬಹುದು ಎಂದು ಹೇಳಿದರೆ ತಪ್ಪಾಗಲಾರದು.
ಚೆನ್ನೈ ಮೂಲದ ಫ್ರಾಂಚೈಸಿ ಸಿಎಸ್ಕೆ ಇದೀಗ ಧೋನಿಯ ಸೂಕ್ತ ಬದಲಿ ಆಟಗಾರನನ್ನು ಹುಡುಕುತ್ತಿರುವ ಕಾರಣ, ಭಾರತದ ಮಾಜಿ ವಿಕೆಟ್ ಕೀಪರ್ ದೀಪ್ ದಾಸ್ಗುಪ್ತ ಅವರು ಡೆಲ್ಲಿ ಕ್ಯಾಪಿಟಲ್ಸ್ ಸ್ಟಾರ್ ರಿಷಭ್ ಪಂತ್ ಸರಿಯಾದ ಅಭ್ಯರ್ಥಿ ಎಂದು ಹೇಳಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ಭೀಕರ ರಸ್ತೆ ಅಪಘಾತದ ನಂತರ ರಿಷಭ್ ಪಂತ್ ಇನ್ನೂ ಸ್ಪರ್ಧಾತ್ಮಕ ಕ್ರಿಕೆಟ್ಗೆ ಹಿಂತಿರುಗಿಲ್ಲ. ಆದಾಗ್ಯೂ, ಅವರು ಚೇತರಿಕೆಯಲ್ಲಿ ಭಾರೀ ಸುಧಾರಣೆಯನ್ನು ತೋರಿಸಿದ್ದಾರೆ ಮತ್ತು ಅವರು 2024ರ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
"2025ರ ಐಪಿಎಲ್ ವೇಳೆಗೆ ಸಿಎಸ್ಕೆ ರಿಷಭ್ ಪಂತ್ ಅವರನ್ನು ಪಡೆದರೆ ಆಶ್ಚರ್ಯಪಡಬೇಡಿ. ಎಂಎಸ್ ಧೋನಿ ಮತ್ತು ರಿಷಬ್ ಪಂತ್ ತುಂಬಾ ಹತ್ತಿರವಾಗಿದ್ದಾರೆ. ನಿಸ್ಸಂಶಯವಾಗಿ, ರಿಷಭ್ ಪಂತ್ ಅವರು ಎಂಎಸ್ ಧೋನಿಯನ್ನು ಆರಾಧಿಸುತ್ತಾನೆ ಮತ್ತು ಧೋನಿ ಕೂಡ ಅವನನ್ನು ತುಂಬಾ ಇಷ್ಟಪಡುತ್ತಾನೆ. ಅವರು ಒಟ್ಟಿಗೆ ಸಾಕಷ್ಟು ಸಮಯವನ್ನು ಕಳೆಯುತ್ತಾರೆ," ಎಂದು ದೀಪ್ ದಾಸ್ಗುಪ್ತ ಹೇಳಿದ್ದಾರೆ.
"ಧೋನಿಯ ಸಂಪರ್ಕ ಮತ್ತು ರಿಷಭ್ ಅವರ ಆಲೋಚನೆಗಳು ತುಂಬಾ ಹೋಲಿಕೆಯಾಗುತ್ತವೆ. ಅವರು ತುಂಬಾ ಆಕ್ರಮಣಕಾರಿ ಮತ್ತು ಧನಾತ್ಮಕ ಎಂದು ಪರಿಗಣಿಸುತ್ತಾರೆ. ಅವರಿಬ್ಬರು ಯಾವಾಗಲೂ ಗೆಲ್ಲುವ ಬಗ್ಗೆ ಮಾತನಾಡುತ್ತಾರೆ," ಎಂದು ಮಾಜಿ ಕ್ರಿಕೆಟಿಗ ದೀಪ್ ದಾಸ್ಗುಪ್ತ ತಮ್ಮ ಎಕ್ಸ್ (ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡವು 2024ರ ಐಪಿಎಲ್ಗಾಗಿ ರಿಷಭ್ ತರಬೇತಿಯನ್ನು ನೋಡುತ್ತಿತ್ತು. ಆದರೆ ಪಂತ್ ತಂಡದೊಂದಿಗೆ ಅಭ್ಯಾಸ ಮಾಡುವುದಿಲ್ಲ ಎಂದು ಸೌರವ್ ಗಂಗೂಲಿ ಮಾಹಿತಿ ನೀಡಿದರು.
"ರಿಷಭ್ ಪಂತ್ ಈಗ ಉತ್ತಮವಾಗಿದ್ದಾರೆ. ಅವರು ಮುಂದಿನ ಐಪಿಎಲ್ನಲ್ಲಿ ಆಡಲಿದ್ದಾರೆ," ಎಂದು ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ನವೆಂಬರ್ 10ರಂದು ಕೋಲ್ಕತ್ತಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
"ಆದರೂ ರಿಷಭ್ ಪಂತ್ ಕೋಲ್ಕತ್ತಾದಲ್ಲಿ ಅಭ್ಯಾಸ ನಡೆಸುವುದಿಲ್ಲ. ಅಭ್ಯಾಸಕ್ಕೆ ಇಳಿಯಲು ಇನ್ನೂ ಸಮಯವಿದೆ. 2024ರ ಜನವರಿ ವೇಳೆಗೆ ಅವರು ಇನ್ನಷ್ಟು ಉತ್ತಮಗೊಳ್ಳುತ್ತಾರೆ," ಎಂದು ಗಂಗೂಲಿ ಹೇಳಿದ್ದಾರೆ.
"ನಾವು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಗ್ಗೆ ಮಾತನಾಡುತ್ತಿದ್ದೆವು, ಪಂತ್ ನಾಯಕನಾಗಿರುತ್ತಾರೆ. ಆದ್ದರಿಂದ ಅವರು ಮುಂಬರುವ ಹರಾಜಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಅದಕ್ಕಾಗಿಯೇ ಅವರು ತಂಡಕ್ಕೆ ಸಂಬಂಧಿಸಿದ ಕೆಲವು ಅಂಶಗಳನ್ನು ಅಂತಿಮಗೊಳಿಸಲು ಇಲ್ಲಿಗೆ (ಅಭ್ಯಾಸದ ಸ್ಥಳವಾದ ಕೋಲ್ಕತ್ತಾ) ಬಂದಿದ್ದಾರೆ," ಎಂದು ಸೌರವ್ ಗಂಗೂಲಿ ತಿಳಿಸಿದ್ದರು.
ಸಿಎಸ್ಕೆ ತಂಡದ ಕುರಿತು ಹೇಳುವುದಾದರೆ, ಹಾಲಿ ಚಾಂಪಿಯನ್ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಸೇರಿದಂತೆ ಹಲವರನ್ನು ಬಿಡುಗಡೆ ಮಾಡಿದ್ದಾರೆ. 32.2 ಕೋಟಿ ರೂಪಾಯಿಗಳ ಪರ್ಸ್ನೊಂದಿಗೆ ಮಿನಿ ಹರಾಜಿಗೆ ಹೋಗಲಿದ್ದಾರೆ.