ಬುಧವಾರ, ಸೆಪ್ಟೆಂಬರ್ 27ರಂದು ರಾಜ್ಕೋಟ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 3ನೇ ಮತ್ತು ಅಂತಿಮ ಏಕದಿನ ಪಂದ್ಯಾಕ್ಕಾಗಿ ಭಾರತ ತಂಡ ತನ್ನ ಆಡುವ 11ರ ಬಳಗದಲ್ಲಿ ಭಾರೀ ಬದಲಾವಣೆಗಳನ್ನು ಮಾಡಿದೆ.
ಭಾರತದಲ್ಲೇ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿ ಸಮೀಪದಲ್ಲೇ ತಂಡದ ಕೆಲವು ಆಟಗಾರರು ಜ್ವರದಿಂದ ಬಳಲುತ್ತಿರುವುದು ದೊಡ್ಡ ಹಿನ್ನಡೆ ಉಂಟಾಗಲಿದೆ ಎನ್ನಬಹುದು.

ವೈರಲ್ ಫೀವರ್ನಿಂದಾಗಿ ವಿಕೆಟ್ಕೀಪರ್-ಬ್ಯಾಟರ್ ಇಶಾನ್ ಕಿಶನ್ ಕೊನೆಯ ಏಕದಿನ ಪಂದ್ಯವನ್ನು ತಪ್ಪಿಸಿಕೊಂಡಿದ್ದಾರೆ. ಇನ್ನು ಆಲ್ರೌಂಡರ್ ವಾಷಿಂಗ್ಟನ್ ಸುಂದರ್ಗೆ ಅವಕಾಶ ನೀಡಲು ಅನುಭವಿ ರವಿಚಂದ್ರನ್ ಅಶ್ವಿನ್ ಅವರಿಗೆ ವಿಶ್ರಾಂತಿ ನೀಡಲಾಯಿತು.
ಆದಾಗ್ಯೂ, ಮೂರನೇ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಭಾರತೀಯ ಶಿಬಿರವು ವೈರಲ್ ಜ್ವರಕ್ಕೆ ತುತ್ತಾಗಿದೆ. ಹೀಗಾಗಿ ಕೆಲವು ಆಟಗಾರರು ತವರಿಗೆ ಮರಳುವ ನಿರ್ಧಾರವನ್ನು ಮಾಡಿದ್ದಾರೆ.

ಪರಿಣಾಮವಾಗಿ, ಕೊನೆಯ ಪಂದ್ಯಕ್ಕೆ ಐವರು ಆಟಗಾರರು ಅಲಭ್ಯರಾಗುತ್ತಾರೆ. ಉಳಿದ 13 ಆಟಗಾರರಿಂದ ತಮ್ಮ ಆಡುವ 11ರ ಬಳಗವನ್ನು ತಂಡದ ಮ್ಯಾನೇಜ್ಮೆಂಟ್ ಆಯ್ಕೆ ಮಾಡಿದೆ.
ಪಂದ್ಯಕ್ಕೂ ಮುನ್ನ ಈ ಕುರಿತು ಮಾತನಾಡಿದ್ದ ನಾಯಕ ರೋಹಿತ್ ಶರ್ಮಾ, "ನಾವು ಅನಾರೋಗ್ಯದಿಂದ ಬಳಲುತ್ತಿರುವ ಮತ್ತು ಲಭ್ಯವಿಲ್ಲದ ಸಾಕಷ್ಟು ಆಟಗಾರರನ್ನು ಹೊಂದಿದ್ದೇವೆ. ಬಹಳಷ್ಟು ಆಟಗಾರರು ವೈಯಕ್ತಿಕ ಸಮಸ್ಯೆಗಳನ್ನು ಹೊಂದಿದ್ದಾರೆ. ಆದ್ದರಿಂದ ಅವರು ಮನೆಗೆ ಹಿಂತಿರುಗಿದ್ದಾರೆ ಮತ್ತು ಕೆಲವು ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ," ಎಂದರು.
"ನಿಸ್ಸಂಶಯವಾಗಿ, ಶುಭ್ಮನ್ ಗಿಲ್ಗೆ ವಿಶ್ರಾಂತಿ ನೀಡಲಾಗಿದೆ, ಮೊಹ್ಮಮದ್ ಶಮಿ, ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ವೈಯಕ್ತಿಕ ಕಾರಣಗಳಿಂದ ಮನೆಗೆ ಹೋಗಿದ್ದಾರೆ. ಗಾಯಾಳು ಅಕ್ಷರ್ ಪಟೇಲ್ ನಿಸ್ಸಂಶಯವಾಗಿ, ಈ ಪಂದ್ಯಕ್ಕೆ ಲಭ್ಯವಿಲ್ಲ," ಎಂದು ರೋಹಿತ್ ಶರ್ಮಾ ಹೇಳಿದ್ದರು.
ಮೊದಲ 2 ಏಕದಿನ ಪಂದ್ಯಗಳಲ್ಲಿ ವಿಶ್ರಾಂತಿ ಪಡೆದ 4 ಆಟಗಾರರಲ್ಲಿ 3 ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕುಲದೀಪ್ ಯಾದವ್ ಆಡುವ 11ರ ಬಳಗಕ್ಕೆ ಮರಳಿದರು ಮತ್ತು ಹಾರ್ದಿಕ್ ಪಾಂಡ್ಯ ಅವರು ರಾಜ್ಕೋಟ್ಗೆ ಪ್ರಯಾಣಿಸದ ಕಾರಣ ವೈಯಕ್ತಿಕ ಕಾರಣಗಳಿಂದ ತಪ್ಪಿಸಿಕೊಂಡಿದ್ದಾರೆ.
ಭಾರತವು ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಅವರಿಗೆ ಅವಕಾಶ ನೀಡುವ ಮೂಲಕ ಮಧ್ಯಮ ಕ್ರಮಾಂಕವನ್ನು ಉಳಿಸಿಕೊಂಡಿದೆ. ಶುಭ್ಮನ್ ಗಿಲ್ 2ನೇ ಏಕದಿನ ಪಂದ್ಯದ ನಂತರ ತವರಿಗೆ ಹಿಂದಿರುಗಿದ್ದಾರೆ.
ಇನ್ನು 2ನೇ ಏಕದಿನ ಪಂದ್ಯಕ್ಕೆ ವಿಶ್ರಾಂತಿ ಪಡೆದ ನಂತರ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಭಾರತ ತಂಡ 3ನೇ ಏಕದಿನ ಪಂದ್ಯಕ್ಕೆ ವಾಪಸ್ ಕರೆತಂದಿದೆ.