ಇನ್ನೇನು ಕೆಲವೇ ದಿನಗಳಲ್ಲಿ ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಟಿ20 ವಿಶ್ವಕಪ್ ಆಯೋಜಿಸುತ್ತಿವೆ. ಈ ವಿಶ್ವಕಪ್ಗಾಗಿ ಎಲ್ಲ ತಂಡಗಳು ಭರದ ತಾಲೀಮು ನಡೆಸಿವೆ. ಒಟ್ಟು 20 ತಂಡಗಳು ಭಾಗವಹಿಸುತ್ತಿರುವ ವಿಶ್ವಕಪ್ನಲ್ಲಿ ಭಾರತ, ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕೆ ಇಳಿಯಲಿದೆ. ಭಾರತ ತಂಡ ಟಿ20 ವಿಶ್ವಕಪ್ಗೂ ಮುನ್ನ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡಿತ್ತು. ಈ ವೇಳೆ ಐದು ಪಂದ್ಯಗಳ ಟಿ20 ಸರಣಿಯನ್ನು 4-1 ರಿಂದ ಗೆದ್ದು ಕೊಂಡಿದ್ದ ಭಾರತ, ಆತ್ಮ ವಿಶ್ವಾಸದಿಂದ ವಿಶ್ವಕಪ್ಗೆ ಕಾಲಿಡಲಿದೆ.
ಈ ವಿಶ್ವಕಪ್ಗೂ ಮುನ್ನ ತಂಡದಲ್ಲಿ ದೊಡ್ಡ ಬದಲಾವಣೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕಳೆದ ಒಂದೂವರೆ ತಿಂಗಳುಗಳ ಹಿಂದೆ ಎರಡನೇ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳುತ್ತಿದ್ದ ಧ್ರುವ್ ಜುರೇಲ್, ಜಿತೇಶ್ ಶರ್ಮಾ ಅವರನ್ನು ಹಿಂದಿಕ್ಕಿದ ಈ ಪ್ಲೇಯರ್ ಆರ್ಭಟಕ್ಕೆ ಬಿಸಿಸಿಐ ಆಯ್ಕೆ ಸಮಿತಿ ತಂಡದಲ್ಲಿ ಸ್ಥಾನವನ್ನು ನೀಡಿದೆ. ಅಲ್ಲದೆ ಬಹು ತಿಂಗಳುಗಳಿಂದ ಬ್ಲ್ಯೂ ಜೆರ್ಸಿ ತೊಡದ ಪ್ಲೇಯರ್ ಈಗ ಹಠಾತನೆ ಸೂಪರ್ ಸ್ಟಾರ್ ರೀತಿ ಕಾಣಿಸಿಕೊಳ್ಳುತ್ತಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಇಶಾನ್ ಕಿಶನ್ ಅಬ್ಬರಿಸಿದ್ದಾರೆ. ತಿಲಕ್ ವರ್ಮಾ ಅನುಪಸ್ಥಿತಿಯಲ್ಲಿ ತಂಡದಲ್ಲಿ ಆಡುವ ಸ್ಥಾನವನ್ನು ಪಡೆದ ಇಶಾನ್ ಕಿಶನ್ ಆರ್ಭಟಕ್ಕೆ ಟೀಮ್ ಮ್ಯಾನೇಜ್ಮೆಂಟ್ ಸಹ ಫುಲ್ ಖುಷ್ ಆಗಿದೆ. ತಿಲಕ್ ವರ್ಮಾ ಆಡುತ್ತಿದ್ದ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಇಶಾನ್ ಕಿಶನ್ ಹೊಸ ಭರವಸೆ ಮೂಡಿಸಿದ್ದಾರೆ.
ಹೊಡಿ ಬಡಿ ಆಟಕ್ಕೆ ಹೊಂದಿಕೊಳ್ಳುವ ಆಟಗಾರ ಇಶಾನ್ ಕಿಶನ್ ಒಂದೂವರೆ ತಿಂಗಳಿನಿಂದ ಹಿಡಿದೆದೆಲ್ಲವೂ ಚಿನ್ನ. ದೇಶೀಯ ಸಯ್ಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ದೇಶೀಯ ಟುರ್ನಿಯಲ್ಲಿ ಜಾರ್ಖಂಡ್ ಅಮೋಘ ಪ್ರದರ್ಶನ ನೀಡಿದ್ದರ ಹಿಂದೆ, ನಾಯಕ ಇಶಾನ್ ಕಿಶನ್ ಪಾತ್ರ ದೊಡ್ಡದು. ಇವರು ಆಡಿದ 10 ಪಂದ್ಯಗಳಲ್ಲಿ 197ರ ಸರಾಸರಿಯಲ್ಲಿ 517 ರನ್ ಕಲೆ ಹಾಕಿದ್ದರು. ಅಲ್ಲದೆ ಈ ವೇಳೆ 2 ಶತಕ ಹಾಗೂ 2 ಅರ್ಧಶತಕ ಸಿಡಿಸಿದ್ದರು. ಈ ಟೂರ್ನಿಯಲ್ಲಿ ಇಶಾನ್ 51 ಬೌಂಡರಿ, 33 ಸಿಕ್ಸರ್ ಸಹ ಬಾರಿಸಿದ್ದರು. ಈ ಅಮೋಘ ಲಯವನ್ನೇ ಇಶಾನ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಮುಂದುವರೆಸಿದರು.
ಮೂರನೇ ಸ್ಥಾನಕ್ಕೆ ನ್ಯಾಯ ತುಂಬುವಂತೆ ಬ್ಯಾಟ್ ಮಾಡಿದ ಇಶಾನ್ ಕಿಶನ್ ತಿರುವನಂತಪುರಂನಲ್ಲೂ ಆರ್ಭಟಿಸಿದರು. ಅಭಿಮಾನಿಗಳು ತವರಿನ ಹುಡುಗನ ಆಟವನ್ನು ಕಣ್ಣು ತುಂಬಿಕೊಳ್ಳುವ ಕನಸು ಹೊಂದಿದ್ದರು. ಆದರೆ ಸಂಜು ಸ್ಯಾಮ್ಸನ್ ಅವರು ನಿರಾಸೆ ಅನುಭವಿಸಿದರು. ಆದರೆ ಇಶಾನ್ ಕಿಶನ್ ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದ ತಂಡಕ್ಕೆ ಆಧಾರವಾದರು. ನೈಜ ಆಟವನ್ನು ಆಡಿದ ಇಶಾನ್ ತಮ್ಮ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಬಾರಿಸಿ ಮಿಂಚಿದರು. ಅಲ್ಲದೆ ಒತ್ತಡದಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟರು.
ಇಶಾನ್ ಕಿಶನ್ ಅವರ ಬ್ಯಾಟಿಂಗ್ ನೋಡಿದ ಅಭಿಮಾನಿಗಳಿಗೆ ಟೀಮ್ ಇಂಡಿಯಾ ಬೌಲಿಂಗ್ಗೆ ಬಂದಾಗ ಅಚ್ಚರಿ ಕಾದಿತ್ತು. ಸರಣಿಯುದ್ದಕ್ಕೂ ಸಂಜು ಸ್ಯಾಮ್ಸನ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಆದರೆ ತಿರುವನಂತಪುರದಲ್ಲಿ ಇಶಾನ್ ಕಿಶನ್ ವಿಕೆಟ್ ಹಿಂದಿನ ಕೆಲಸವನ್ನು ಮಾಡಿದರು. ಈ ಮೂಲಕ ಹಲವು ಚರ್ಚೆಗಳನ್ನು ಹುಟ್ಟುಹಾಕಿದರು. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಇಶಾನ್ ಕಿಶನ್ ಅವರಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಿ, ಸಂಜು ಅವರನ್ನು ಬೆಂಚ್ ಕಾಯಿಸುವ ಯೋಜನೆಯಾ ಎಂಬ ಪ್ರಶ್ನೆಗಳು ಎದ್ದಿವೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಫೆಬ್ರವರಿ 7 ರಿಂದ ಆರಂಭವಾಗಿರುವ ಟಿ20 ವಿಶ್ವಕಪ್ನಲ್ಲಿ ಉತ್ತರ ಸಿಗಲಿದೆ.