ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನ ಹಿನ್ನೆಲೆಯಲ್ಲಿ ವೈಯಕ್ತಿಕ ಅಭ್ಯಾಸ ಮಾಡಲು ರಣಜಿ ಟ್ರೋಫಿ ಪಂದ್ಯಗಳನ್ನು ಕಳೆದುಕೊಳ್ಳಲು ನಿರ್ಧರಿಸಿದ ಕಾರಣ, ಭಾರತದ ವಿಕೆಟ್-ಕೀಪರ್ ಬ್ಯಾಟರ್ ಇಶಾನ್ ಕಿಶನ್ ಸ್ವಲ್ಪ ಸಮಯದಿಂದ ಸುದ್ದಿಯಲ್ಲಿದ್ದಾರೆ.
ಮಾನಸಿಕ ಆಯಾಸದಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂದೆ ಸರಿದ ಬಳಿಕ, ಭಾರತ ತಂಡದಿಂದ ಹೊರಗುಳಿದಿರುವ ಇಶಾನ್ ಕಿಶನ್ ಅವರು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಇತರರು ದೇಶೀಯ ಕ್ರಿಕೆಟ್ ಪುನರಾರಂಭಿಸಲು ಒತ್ತಾಯಿಸಿದರೂ ಎಲ್ಲಾ ರೀತಿಯ ಕ್ರಿಕೆಟ್ ಪಂದ್ಯಗಳಿಂದ ದೂರ ಉಳಿದಿದ್ದಾರೆ.

3-4 ರಣಜಿ ಪಂದ್ಯವಾಡಿದರೆ ಮಾತ್ರ ಐಪಿಎಲ್ ಆಡಲು ಅರ್ಹತೆ ಎನ್ನುವ ಬಿಸಿಸಿಐ ನಿರ್ದೇಶನವನ್ನು ಕಡೆಗಣಿಸಿರುವ ಇಶಾನ್ ಕಿಶನ್, ತಮ್ಮ ಜಾರ್ಖಂಡ್ ತಂಡದ ರಣಜಿ ಟ್ರೋಫಿಯ ಕೊನೆಯ ಲೀಗ್ ಪಂದ್ಯವನ್ನು ಕಳೆದುಕೊಳ್ಳುವ ಮೂಲಕ ಹೊಸ ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ.
ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮತ್ತು ದೀಪಕ್ ಚಹಾರ್ ಮೂವರು ಆಟಗಾರರು 2024ರ ರಣಜಿ ಟ್ರೋಫಿಯಲ್ಲಿ ಲೀಗ್ ಹಂತದ ಕೊನೆಯ ಸುತ್ತಿನಲ್ಲಿ ಆಯಾ ದೇಶೀಯ ತಂಡಗಳಿಗೆ ಆಡಲು ನಿರ್ದಿಷ್ಟವಾಗಿ ಸೂಚಿಸಲಾಗಿತ್ತು.
ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ದೇಶನದ ಹೊರತಾಗಿಯೂ, ಅನಿರ್ದಿಷ್ಟ ಕಾರಣಗಳಿಗಾಗಿ ಪಂದ್ಯಗಳನ್ನು ಆಡದಿರಲು ನಿರ್ಧರಿಸಿದ್ದಾರೆ. ಶ್ರೇಯಸ್ ಅಯ್ಯರ್ ಕೆಳ ಬೆನ್ನು ಮತ್ತು ತೊಡೆಸಂದು ಗಾಯಗಳನ್ನು ಎದುರಿಸುತ್ತಿದ್ದಾರೆ. ಇದು ಅವರ ಅನುಪಸ್ಥಿತಿಯ ಹಿಂದಿನ ಕಾರಣವಾಗಿರಬಹುದು.

ಶ್ರೇಯಸ್ ಅಯ್ಯರ್ ಅವರ ದೇಶೀಯ ತಂಡ ಮುಂಬೈ ಈಗಾಗಲೇ ಕ್ವಾರ್ಟರ್ಫೈನಲ್ಗೆ ಅರ್ಹತೆ ಪಡೆದಿದೆ. ಪ್ರಸ್ತುತ ಲೀಗ್ ಹಂತದಲ್ಲಿ ತಮ್ಮ ಕೊನೆಯ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಆಡುತ್ತಿದೆ.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತದ ತಂಡದ ಭಾಗವಾಗಿದ್ದ ಬಲಗೈ ಬ್ಯಾಟರ್ ಶ್ರೇಯಸ್ ಅಯ್ಯರ್ ಆಡಿದ ನಾಲ್ಕು ಇನ್ನಿಂಗ್ಸ್ಗಳಲ್ಲಿ 35, 13, 27 ಮತ್ತು 29 ರನ್ ಗಳಿಸಿದ್ದಾರೆ. ಶ್ರೇಯಸ್ ಅಯ್ಯರ್ ನಂತರ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ.
ಇಶಾನ್ ಕಿಶನ್ ಪ್ರಸ್ತುತ ಬರೋಡಾದಲ್ಲಿದ್ದಾರೆ. ಈ ವೇಳೆ ಅವರು ತಮ್ಮ ಹೊಸ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಅಭ್ಯಾಸ ಮಾಡುತ್ತಿದ್ದಾರೆ. ಪ್ರತಿಭಾವಂತ ವಿಕೆಟ್ಕೀಪರ್-ಬ್ಯಾಟರ್ ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ಮಧ್ಯದಲ್ಲಿ ವಿಶ್ರಾಂತಿಯನ್ನು ಕೇಳಿದ್ದರು.

ಇನ್ನು ರಣಜಿ ಟ್ರೋಫಿಯಲ್ಲಿ ಎಲೈಟ್ ಗುಂಪಿನ ಅಂಕಪಟ್ಟಿಯಲ್ಲಿ ಜಾರ್ಖಂಡ್ ತಂಡ 7ನೇ ಸ್ಥಾನದಲ್ಲಿ ಸೊರಗುತ್ತಿದೆ ಮತ್ತು ನಾಕೌಟ್ಗೆ ಮುನ್ನಡೆಯುವ ಯಾವುದೇ ಅವಕಾಶವಿಲ್ಲದಂತಾಗಿದೆ.
ಜಾರ್ಖಂಡ್ ತಮ್ಮ ಕೊನೆಯ ಲೀಗ್ ಪಂದ್ಯವನ್ನು ರಾಜಸ್ಥಾನ ವಿರುದ್ಧ ಆಡುತ್ತಿದೆ. ತಂಡಕ್ಕಾಗಿ ಪ್ರತಿಭಾವಂತ ಯುವ ಕ್ರಿಕೆಟಿಗ ಕುಮಾರ್ ಕುಶಾಗ್ರಾ ತಮ್ಮ ವಿಕೆಟ್ ಕೀಪಿಂಗ್ ಕರ್ತವ್ಯವನ್ನು ಮುಂದುವರೆಸುತ್ತಿದ್ದಾರೆ.
ದೀಪಕ್ ಚಹಾರ್ ಅವರ ಅಲಭ್ಯತೆಯ ಬಗ್ಗೆ ಯಾವುದೇ ನಿರ್ದಿಷ್ಟ ನವೀಕರಣವಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವೇಗಿ ತನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಡಿಸೆಂಬರ್ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದರು.

ಇತ್ತೀಚೆಗೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಕೇಂದ್ರೀಯ ಗುತ್ತಿಗೆ ಹೊಂದಿರುವ ಆಟಗಾರರು ದೇಶೀಯ ಪಂದ್ಯಗಳಿಂದ ಹೊರಗುಳಿಯುತ್ತಿರುವ ಬಗ್ಗೆ ಕೇಳಲಾಯಿತು.
ದೇಶೀಯ ಕ್ರಿಕೆಟ್ನಲ್ಲಿ ಆಯ್ಕೆ ಮಾಡಲು ಕೇಂದ್ರೀಯ ಗುತ್ತಿಗೆ ಪಡೆದಿರುವ ಎಲ್ಲ ಆಟಗಾರರು ತಮ್ಮನ್ನು ತಾವು ಲಭ್ಯವಾಗುವಂತೆ ಮಾಡಲು ನಿರ್ದೇಶನವನ್ನು ಕಳುಹಿಸುವುದಾಗಿ ಜಯ್ ಶಾ ಹೇಳಿದ್ದರು.
"ನೀವು ಫಿಟ್ ಆಗಿದ್ದರೆ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ. ಇದು ಎಲ್ಲಾ ಕೇಂದ್ರೀಯ ಒಪ್ಪಂದದ ಆಟಗಾರರಿಗೆ ಅನ್ವಯಿಸುತ್ತದೆ, ಅವರು ಆಡಬೇಕಾಗುತ್ತದೆ. ಆಟಗಾರನು ತಮ್ಮ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ, ಆಯ್ಕೆದಾರರು ಅದನ್ನು ನಿರ್ಧರಿಸಬೇಕು. ಆಟಗಾರನು ರೆಡ್ಬಾಲ್ನಲ್ಲಿ ಆಡಲು ಫಿಟ್ನೆಸ್ನಲ್ಲಿದ್ದರೆ, ಅವನು ಆಡಬೇಕಾಗುತ್ತದೆ," ಎಂದು ಜಯ್ ಶಾ ತಿಳಿಸಿದರು.