ಟೀಮ್ ಇಂಡಿಯಾದ ಯುವ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ಇಶಾನ್ ಕಿಶನ್. ತವರಿನಲ್ಲಿ ನಡೆಯುತ್ತಿರುವ ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಅವರನ್ನು ಭಾರತ ತಂಡದಲ್ಲಿ ಆಯ್ಕೆ ಮಾಡಿಲ್ಲ. ಫಾರ್ಮ್ ಇಲ್ಲದೆ ಪರದಾಡುತ್ತಿದ್ದ ಪ್ಲೇಯರ್ಗೆ ದೇಶೀಯ ಟೂರ್ನಿಗಳಲ್ಲಿ ಆಡುವಂತೆ ಸೂಚಿಸಲಾಗಿತ್ತು. ಆರಂಭದಲ್ಲಿ ಇದಕ್ಕೆ ಸೊಪ್ಪು ಹಾಕದ ಇಶಾನ್, ಪ್ರಸಕ್ತ ವರ್ಷದಿಂದ ದೇಶೀಯ ಟೂರ್ನಿಯಲ್ಲಿ ಆಡುತ್ತಿದ್ದಾರೆ.
ದೇಶೀಯ ಟೂರ್ನಿಗಳಾದ ಬುಚ್ಚಿ ಬಾಬು, ದುಲೀಪ್ ಟ್ರೋಫಿಯಲ್ಲಿ ಆಡಿ ಗಮನ ಸೆಳೆದಿದ್ದ ಪ್ಲೇಯರ್ ಈಗ ಮತ್ತೊಮ್ಮೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಈ ಬಾರಿ ಅವರು ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಜಾರ್ಖಂಡ ತಂಡವನ್ನು ಪ್ರಕಟಿಸಲಾಗಿದ್ದು, ಭರವಸೆಯ ಆಟಗಾರ ಇಶಾನ್ ಕಿಶನ್ಗೆ ಪಟ್ಟ ಕಟ್ಟಲಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಬಳಿಕ ಟೀಮ್ ಇಂಡಿಯಾದಿಂದ ಹೊರ ನಡೆದಿದ್ದ ಇಶಾನ್ ಕಿಶನ್, ತಂಡಕ್ಕೆ ಮರಳಲು ಹರಸಾಹಸ ಪಡುತ್ತಿದ್ದಾರೆ. ರಿಷಭ್ ಪಂತ್ ರಸ್ತೆ ಅಪಘಾತದಲ್ಲಿ ಗಾಯಕ್ಕೆ ತುತ್ತಾದಾಗ ಇವರು ಸೀಮಿತ ಓವರ್ಗಳ ತಂಡದಲ್ಲಿ ಖಾಯಂ ಸ್ಥಾನ ಪಡೆದಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಕಳೆದ ವರ್ಷ ನಡೆದ ಸರಣಿಯ ವೇಳೆ ಇವರು ವಿಶ್ರಾಂತಿ ತೆಗೆದುಕೊಂಡಿದ್ದರು.
ಇಶಾನ್ ಕಿಶನ್ ವಿರಾಮದ ಬಳಿಕ ದೇಶೀಯ ಟೂರ್ನಿಗಳಲ್ಲೂ ಆಡಿರಲಿಲ್ಲ. ರಾಷ್ಟ್ರೀಯ ತಂಡದಲ್ಲಿ ಮರಳಬೇಕಾದಲ್ಲಿ, ದೇಶೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡುವ ಅವಶ್ಯಕತೆ ಇದೆ ಎಂದು ಸೂಚಿಸಲಾಗಿತ್ತು. ಆದರೆ ಇಶಾನ್ ಕಿಶನ್ ಕಳೆದ ವರ್ಷ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಪರಿಣಾಮ ಇವರನ್ನು ಬಿಸಿಸಿಐ ಕೇಂದ್ರ ಗುತ್ತಿಗೆ ಒಪ್ಪಂದದಿಂದ ಕೈ ಬಿಡಲಾಗಿತ್ತು.

ಕಳೆದ ವರ್ಷ ದೇಶೀಯ ಟೂರ್ನಿಗಳಲ್ಲಿ ಆಡದ ಇಶಾನ್ ಅಹಮದಾಬಾದ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಮೈದಾನದಲ್ಲಿ ಬೆವರು ಹರಿಸಿದ್ದ ಫೋಟೋಗಳು ವೈರಲ್ ಆಗಿದ್ದವು. ಇವರು ಐಪಿಎಲ್ಗೂ ಮುನ್ನ ಖಾಸಗಿಯಾಗಿ ಆಯೋಜಿಸಿದ್ದ ಡಿವೈ ಪಾಟೀಲ್ ಟಿ20 ಕಪ್ನಲ್ಲಿ ಆಡಿದ್ದರು.
ಇಶಾನ್ ಐಪಿಎಲ್ನಲ್ಲೂ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ಅಲ್ಲದೆ ದುಲೀಪ್ ಟ್ರೋಫಿಯಲ್ಲಿ ಭಾರತ ಸಿ ಪರ ಶತಕ ಬಾರಿಸಿ ಆಯ್ಕೆದಾರರ ಕದ ತಟ್ಟಿದರು. ಬ್ಲ್ಯೂ ಜೆರ್ಸಿ ಮತ್ತೆ ತೊಡುವ ಕನಸಿನಲ್ಲಿರುವ ಇಶಾನ್ ಈಗ ಮತ್ತೆ ದೇಶೀಯ ಕ್ರಿಕೆಟ್ನಲ್ಲಿ ಆಡುತ್ತಿದ್ದಾರೆ.
ಇಶಾನ್ ಕಿಶನ್ (ನಾಯಕ), ವಿರಾಟ್ ಸಿಂಗ್ (ಉಪನಾಯಕ), ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್), ನಾಜಿಮ್ ಸಿದ್ದಿಕಿ, ಉತ್ಕರ್ಷ್ ಸಿಂಗ್, ಸುಪ್ರಿಯೊ ಚಕ್ರವರ್ತಿ, ಆರ್ಯಮನ್ ಸೇನ್, ಶರಣದೀಪ್ ಸಿಂಗ್, ಮನೀಷಿ, ರವಿ ಕುಮಾರ್ ಯಾದವ್, ಕುಮಾರ್ ಸೂರಜ್, ಅನುಕುಲ್ ರಾಯ್, ಸೌರಭ್ ಶೇಖರ್, ವಿಕಾಸ್ ಕುಮಾರ್, ವಿವೇಕಾನಂದ ತಿವಾರಿ ಮತ್ತು ರೌನಕ್ ಕುಮಾರ್.