ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ ಅವರು ಬಹು ದಿನಗಳಿಂದ ತಂಡದಿಂದ ದೂರ ಉಳಿದಿದ್ದಾರೆ. ದಕ್ಷಿಣ ಆಫ್ರಿಕಾ ಸರಣಿಯ ನಂತರ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಆ ವೇಳೆ ಆಗಿನ ಕೋಚ್ ರಾಹುಲ್ ದ್ರಾವಿಡ್, ದೇಶೀಯ ಟೂರ್ನಿಗಳಲ್ಲಿ ಆಡುವಂತೆ ಇಶಾನ್ಗೆ ಸೂಚಿಸಿದ್ದರು. ಆದರೆ ಅದಕ್ಕೆ ಅವರು ಸೊಪ್ಪು ಹಾಕಿರಲಿಲ್ಲ. ಆದರೆ ಈಗ ಕೆಟ್ಟ ಮೇಲೆ ಬುದ್ಧಿ ಬಂದವರಂತೆ ಕಾಣುತ್ತಿದೆ.
ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ದ್ವಾರ ಬಾಗಿಲು ದೇಶೀಯ ಟೂರ್ನಿ. ಇದಕ್ಕೆ ಬೇರೆ ಯಾವ ಶಾರ್ಟ್ ಕಟ್ಸ್ ಇಲ್ಲವೇ ಇಲ್ಲ ಎಂದು ಅರಿತು, ಜಾರ್ಖಂಡ್ ತಂಡದ ಪರ ಬ್ಯಾಟ್ ಬೀಸಲು ಯಂಗ್ ಸ್ಟರ್ಸ್ ರೆಡಿ ಆಗಿದ್ದಾರೆ. ಬುಚ್ಚಿ ಬಾಬು ಟ್ರೋಫಿಯಲ್ಲಿ ಜಾರ್ಖಂಡ್ ತಂಡದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಟೂರ್ನಿ ಆಗಸ್ಟ್ 15 ರಿಂದ ಆರಂಭವಾಗಲಿದೆ.

ಅಂಡರ್ 19 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಇಶಾನ್ ಕಿಶನ್, ದೇಶೀಯ ಟೂರ್ನಿಯಲ್ಲಿ ತವರು ತಂಡವನ್ನು ಮುನ್ನಡೆಸಲಿದ್ದಾರೆ. ಚೆನ್ನೈನಲ್ಲಿ ಇಶಾನ್, ಜಾರ್ಖಂಡ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇಎಸ್ಪಿಎನ್ ಕ್ರಿಕ್ಇನ್ಫೋ ವರದಿಯ ಪ್ರಕಾರ ಇಶಾನ್ ಕಿಶನ್ ತಾವು ದೇಶೀಯ ಟೂರ್ನಿಗಳಿಗೆ ಲಭ್ಯ ಇರುವುದಾಗಿ ಜಾರ್ಖಾಂಡ್ ಕ್ರಿಕೆಟ್ ಸಂಸ್ಥೆಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಇವರು ಈ ಬಾರಿ ರಣಜಿ ಟೂರ್ನಿಯಲ್ಲೂ ಜಾರ್ಖಂಡ್ ಪರ ಆಡುವ ಸಾಧ್ಯತೆ ಇದೆ. ಇಶಾನ್ ಎರಡು ವರ್ಷಗಳ ಬಳಿಕ ದೇಶೀಯ ಟೂರ್ನಿಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದೇಶೀಯ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡುವ ಮೂಲಕ ಮುಂದಿನ ಸರಣಿಗೆ ಭಾರತ ತಂಡವನ್ನು ಸೇರಿಕೊಳ್ಳುವ ಕನಸು ಇಶಾನ್ ಕಿಶನ್ ಅವರದ್ದಾಗಿದೆ. ಮುಂದಿನ ತಿಂಗಳಲ್ಲಿ ಬಾಂಗ್ಲಾ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಒಟ್ಟು 10 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಇಶಾನ್ ಕಿಶನ್ ಈಗ ರೆಡ್ ಬಾಲ್ ಕ್ರಿಕೆಟ್ ಆಡಲು ಮನಸ್ಸು ಮಾಡಿದ್ದಾರೆ. ಕಳೆದ ವರ್ಷ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಅವರು ಟೀಂ ಇಂಡಿಯಾ ಪರ ಟೆಸ್ಟ್ಗೆ ಪದಾರ್ಪಣೆ ಮಾಡಿದ್ದರು. ಅಲ್ಲದೆ ಈವರೆಗೆ ಭಾರತದ ಪರ ಕೇವಲ ಎರಡು ಟೆಸ್ಟ್ ಆಡಿದ್ದಾರೆ.
ಇಶಾನ್ ಕಿಶನ್ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವುದು ಡೌಟ್ ಎಂದೇ ಹೇಳಲಾಗುತ್ತಿದೆ. ಇಶಾನ್ ಅವರು ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಸೇರಿಕೊಂಡಿದ್ದರು. ಆದರೆ ರಿಷಭ್ ಪಂತ್ ಗಾಯದಿಂದ ಚೇತರಿಸಿಕೊಂಡಿದ್ದು, ಭಾರತಕ್ಕೂ ಕಮ್ಬ್ಯಾಕ್ ಮಾಡಿದ್ದಾರೆ. ಅಲ್ಲದೆ ಎರಡನೇ ವಿಕೆಟ್ ಕೀಪರ್ ಆಗಿ ಧ್ರುವ್ ಜುರೇಲ್ ಆಯ್ಕೆ ಆಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಇಶಾನ್ ಹೇಗೆ ತಮ್ಮ ಆಯ್ಕೆದಾರರ ಮನ ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇಶಾನ್ ಕಿಶನ್ ಒಬ್ಬ ಉತ್ತಮ ವಿಕೆಟ್ ಕೀಪರ್ ಬ್ಯಾಟ್ಸ್ಮನ್. ಇವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ತಮ್ಮ ಹೆಸರನ್ನು ಹಿಂಪಡೆದರು. ಆಗ ಬಿಸಿಸಿಐ ಬಳಿ ವಿಶ್ರಾಂತಿಗೆ ಮನವಿ ಮಾಡಿದ್ದರು. ಆ ಬಳಿಕ ಆಗಿನ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಆಡುವಂತೆ ಸೂಚನೆ ನೀಡಿದ್ದರು. ಆದರೆ ಇದಕ್ಕೆ ಇಶಾನ್ ಒಪ್ಪಿರಲಿಲ್ಲ.
ಟೀಮ್ ಇಂಡಿಯಾದಿಂದ ಹೊರ ಬಂದು ಕೆಲ ಕಾಲ ರೆಸ್ಟ್ ಮಾಡಿ, ನಂತರ ಬರೋಡಾದಲ್ಲಿ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಅಭ್ಯಾಸ ಆರಂಭಿಸಿದರು. ಈ ಎಲ್ಲ ಬೆಳವಣಿಗೆಗಳು ಬಿಸಿಸಿಐ ಕಣ್ಣು ನೆಟ್ಟಗಾಗಿಸಿದವು. ಬಿಸಿಸಿಐ ತನ್ನ ಕೇಂದ್ರ ಒಪ್ಪಂದದಿಂದ ಅವರನ್ನು ಕೈ ಬಿಟ್ಟಿತು. ಈಗ ಮತ್ತೆ ಕೇಂದ್ರ ಒಪ್ಪಂದವನ್ನು ಪಡೆಯಲು ಸರ್ಕಸ್ ಆರಂಭಿಸಿದ್ದಾರೆ.