ಆಗಸ್ಟ್ 13 ಮಂಗಳವಾರ, ಶ್ರೀಲಂಕಾ ಪ್ರವಾಸ ನಂತರ ವಿರಾಯದಲ್ಲಿರುವ ಭಾರತ ತಂಡವು ಬಾಂಗ್ಲಾದೇಶ ವಿರುದ್ಧದ ತವರಿನ ಸರಣಿ ಮೇಲೆ ಕಣ್ಣಿಟ್ಟಿದೆ. ಸೆಪ್ಟೆಂಬರ್ 19 ರಂದು ಟೀಮ್ ಇಂಡಿಯಾ ಮೈದಾನದಲ್ಲಿ ಕಾಣಿಸಿಕೊಳ್ಳಲಿದೆ.
ಬಾಂಗ್ಲಾದೇಶ ತಂಡ ಎರಡು ಟೆಸ್ಟ್ಗಳ ಸರಣಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿದೆ. ಆ ಬಳಿಕ 3 ಟಿ20 ಪಂದ್ಯಗಳ ಸರಣಿಯೂ ನಡೆಯಲಿದೆ. ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಮೊದಲ ಬಾರಿಗೆ ಟೀಮ್ ಇಂಡಿಯಾದೊಂದಿಗೆ ಟೆಸ್ಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಬಲಿಷ್ಠ ತಂಡ ಕಟ್ಟುವ ಸಲುವಾಗಿ ಆಯ್ಕೆಗಾರರ ಜತೆಗೂಡಿ ವಿಶೇಷ ಯೋಜನೆ ರೂಪಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಎಲ್ಲಾ ಹಿರಿಯ ಆಟಗಾರರು ಮತ್ತು ತಂಡಕ್ಕೆ ಮರಳುವುದಕ್ಕೆ ಪ್ರಯತ್ನಿಸುತ್ತಿರುವ ಸ್ಪರ್ಧಿಗಳು ದೇಶೀಯ ಟೂನಿಯಾದ ದಲೀಪ್ ಟ್ರೋಫಿಯಲ್ಲಿ ಆಡಬೇಕಾಗಿದೆ. ದುಲೀಪ್ ಟ್ರೋಫಿಯಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಇತರ ಸ್ಟಾರ್ ಆಟಗಾರರನ್ನು ನೋಡಬಹುದು.
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ 15 ಸದಸ್ಯರ ತಂಡವನ್ನು ಆಯ್ಕೆ ಮಾಡಲು ಇದು ಸಾಕಷ್ಟು ಸಹಾಯ ಮಾಡಲಿದೆ. ಇದರ ಮಧ್ಯೆ
ಎಲ್ಲಾ ಮಾದರಿ ಕ್ರಿಕೆಟ್ನಿಂದ ಹೊರಗುಳಿದಿರುವ ಇಶಾನ್ ಕಿಶನ್, ದೇಶೀಯ ಟೂರ್ನಿಯ ಮೂಲಕ ಟೀಮ್ ಇಂಡಿಯಾ ಸೇರಿಕೊಳ್ಳಲು ರೆಡಿಯಾಗಿದ್ದಾರೆ. ಆಯ್ಕೆದಾರರು ಕೂಡ ಅವರನ್ನು ದುಲೀಪ್ ಟ್ರೋಫಿಗೆ ಆಯ್ಕೆ ಮಾಡುವ ಸಾಧ್ಯತೆಯಿದೆ.
ಇಶಾನ್ ಕಿಶನ್ ರಾಷ್ಟ್ರೀಯ ತಂಡಕ್ಕೆ ಮರಳಲು ಬಯಸಿದರೆ ಅವರು ಮೊದಲು ರೆಡ್ ಬಾಲ್ ಕ್ರಿಕೆಟ್ ಆಡಲು ಪ್ರಾರಂಭಿಸಬೇಕು. ಏಕೆಂದರೆ ಇದು ಬಿಸಿಸಿಐ ಆಯ್ಕೆ ಸಮಿತಿಯ ಆದೇಶವಾಗಿದೆ. ಹೀಗಾಗಿ ಕಿಶನ್ ಅವರನ್ನು ಆಗಸ್ಟ್ 15 ರಂದು ಪ್ರಾರಂಭವಾಗುವ ಬುಚ್ಚಿ ಬಾಬು ಪಂದ್ಯಾವಳಿಯಲ್ಲಿ ಲಭ್ಯವಾಗುವಂತೆ ಮಾಡಿದ್ದಾರೆ. 2023ರ ವಿಶ್ವಕಪ್ ನಂತರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯಲ್ಲಿ ಕಿಶನ್ ಭಾಗವಹಿಸಿದ್ದರು.
ಕಳೆದ ವರ್ಷ ಇಶಾನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಬಿಸಿಸಿಐ ಕೇಂದ್ರ ಒಪ್ಪಂದದಿಂದ ಕೈಬಿಡಲಾಗಿತ್ತು. ಇವರಿಬ್ಬರೂ ಮಂಡಳಿ ಹಾಗೂ ಆಯ್ಕೆ ಸಮಿತಿಯ ಆದೇಶವನ್ನು ಪಾಲಿಸಿರಲಿಲ್ಲ. ಎರಡು ರಣಜಿ ಟ್ರೋಫಿ ಪಂದ್ಯಗಳನ್ನು ಆಡಿದ್ದರೂ, ಅಯ್ಯರ್ ಅವರನ್ನು ಗುತ್ತಿಗೆ ಪಟ್ಟಿಯಿಂದ ತೆಗೆದುಹಾಕಲಾಯಿತು.
ಮತ್ತೊಂದೆಡೆ, ರಣಜಿ ಪಂದ್ಯಗಳಲ್ಲಿ ಭಾಗವಹಿಸದ ಕಾರಣ ಮತ್ತು ಬರೋಡದಲ್ಲಿ ಪ್ರತ್ಯೇಕ ತರಬೇತಿ ಪಡೆದಿದ್ದರಿಂದ ಕಿಶನ್ ಅವರನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈ ಬಿಡಲಾಗಿತ್ತು. ಆದರೆ ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಏಕದಿನ ಪಂದ್ಯಗಳ ವೇಳೆ ಅಯ್ಯರ್ ಅವರನ್ನು ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಇಶಾನ್ ಕೊನೆಯದಾಗಿ 2019-20ರಲ್ಲಿ ದುಲೀಪ್ ಟ್ರೋಫಿಯಲ್ಲಿ ಭಾಗವಹಿಸಿದ್ದರು.
ಬಲಿಷ್ಠ ತಂಡವನ್ನು ಕಟ್ಟಲು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲವು ಆಟಗಾರರನ್ನು ತಂಡದಿಂದ ಕೈಬಿಡಲು ಬಿಸಿಸಿಐ ಆಯ್ಕೆಗಾರರು ನಿರ್ಧರಿಸಿದ್ದಾರೆ. ವರದಿಗಳ ಪ್ರಕಾರ ದುಲೀಪ್ ಟ್ರೋಫಿ ತಂಡದಿಂದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಹೊರಗುಳಿಯಲಿದ್ದಾರೆ.
ಈ ಟೆಸ್ಟ್ ಸ್ಪೆಷಲಿಸ್ಟ್ ಆಟಗಾರರನ್ನು ತೆಗೆದುಹಾಕಲು ಆಯ್ಕೆದಾರರು ಮನಸ್ಸು ಮಾಡಿದ್ದಾರೆ. ಹೀಗಿರುವಾಗ ಇಶಾನ್ ಕಿಶನ್ ಅವರಂಥ ಆಟಗಾರರ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಇಶಾನ್ ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಅವರನ್ನು ಟೆಸ್ಟ್ ತಂಡದಲ್ಲಿ ರಿಷಬ್ ಪಂತ್ಗೆ ಬ್ಯಾಕಪ್ ಆಗಿ ಆಯ್ಕೆ ಮಾಡಬಹುದು.
ಒಂದು ವೇಳೆ ಟೀಮ್ ಇಂಡಿಯಾಗೆ ಇಶಾನ್ ಮರಳಿದರೆ, ರಿಷಭ್ ಪಂತ್ ಜೊತೆಗೆ ನೇರ ಪೈಪೋಟಿ ನಡೆಯಲಿದೆ. ಪಂತ್ ಹಾಗು ಕಿಶನ್ ಇಬ್ಬರು ಎಡಗೈ ಬ್ಯಾಟರ್ ಆಗಿದ್ದು, ಸ್ಪೋಟಕ ಇನ್ನಿಂಗ್ಸ್ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ ವಿಕೆಟ್ ಕೀಪಿಂಗ್ನಲ್ಲಿಯೂ ಇಬ್ಬರು ತಮ್ಮ ಕೈ ಚಳಕ ತೋರಿದ್ದಾರೆ. ಹೀಗಾಗಿ ಕಿಶನ್ ಟೀಮ್ ಇಂಡಿಯಾ ಸೇರಿಕೊಂಡರೆ ಪ್ಲೇಯಿಂಗ್-11 ರ ಮೇಲೆ ಪರಿಣಾಮ ಬೀರಲಿದೆ.