ಇತ್ತೀಚಿಗೆ ಬಿಸಿಸಿಐ ತನ್ನ ವಾರ್ಷಿಕ ಗುತ್ತಿಗೆ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ, ಗಮನ ಸೆಳೆದ ಎರಡು ಹೆಸರುಗಳೆಂದರೆ, ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್.
ಇಬ್ಬರು ಸ್ಟಾರ್ ಆಟಗಾರರು ಇತ್ತೀಚಿನ ದಿನಗಳಲ್ಲಿ ಭಾರತ ತಂಡದ ಯೋಜನೆಯ ಭಾಗವಾಗಿದ್ದರು. ಆದರೆ ಇದೀಗ ಅವರನ್ನು ಬಿಸಿಸಿಐ ಒಪ್ಪಂದಗಳಿಂದ ಹೊರಗಿಡಲಾಗಿದೆ.
ವರದಿಗಳು ಮತ್ತು ಬಿಸಿಸಿಐ ಪತ್ರಿಕಾ ಪ್ರಕಟಣೆಯ ಸುಳಿವುಗಳ ಪ್ರಕಾರ, ಇವರಿಬ್ಬರು ದೇಶೀಯ ಕ್ರಿಕೆಟ್ನಲ್ಲಿ ಆಡಲು ಇಷ್ಟವಿಲ್ಲದಿರುವುದು, ಇಬ್ಬರೂ ಬಿಸಿಸಿಐ ಕೇಂದ್ರ ಒಪ್ಪಂದಗಳನ್ನು ಕಳೆದುಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.

ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಏಕೆ ಕೈಬಿಡಲಾಗಿದೆ ಎಂಬುದರ ಕುರಿತು ಯಾವುದೇ ಅಧಿಕೃತ ಕಾರಣವನ್ನು ನೀಡಿಲ್ಲವಾದರೂ, ಬಿಸಿಸಿಐ ಹೇಳಿಕೆ ಬಿಡುಗಡೆಯಲ್ಲಿನ ಒಂದು ಸಾಲು ಬಲವಾದ ಸುಳಿವು ನೀಡುತ್ತದೆ.
"ಎಲ್ಲ ಕ್ರೀಡಾಪಟುಗಳು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಅವಧಿಯಲ್ಲಿ ದೇಶೀಯ ಕ್ರಿಕೆಟ್ನಲ್ಲಿ ಭಾಗವಹಿಸಲು ಆದ್ಯತೆ ನೀಡುವಂತೆ ಬಿಸಿಸಿಐ ಶಿಫಾರಸು ಮಾಡಿದೆ," ಎಂದು ಹೇಳಿದೆ.
ಇನ್ನು ಇಶಾನ್ ಕಿಶನ್ ಭಾರತ ತಂಡದಿಂದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ತೊರೆದಾಗ, ಬಿಸಿಸಿಐ ಡಿಸೆಂಬರ್ 17ರಂದು, ""ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಬಿಡುಗಡೆ ಮಾಡುವಂತೆ ಇಶಾನ್ ಕಿಶನ್ ಬಿಸಿಸಿಐಗೆ ವಿನಂತಿಸಿದ್ದಾರೆ. ವಿಕೆಟ್ ಕೀಪರ್ನನ್ನು ನಂತರ ಟೆಸ್ಟ್ ತಂಡದಿಂದ ಹೊರಗಿಡಲಾಗಿದೆ,'' ಎಂದು ತಿಳಿಸಿತ್ತು.
ಇಶಾನ್ ಕಿಶನ್ ಅವರು ರಾಷ್ಟ್ರೀಯ ತಂಡದಿಂದ ದೂರವಿರುವ ಸಮಯದಲ್ಲಿ ದೇಶೀಯ ಕ್ರಿಕೆಟ್ ಆಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ವಿಕೆಟ್ ಕೀಪರ್-ಬ್ಯಾಟರ್ ತಮ್ಮ ರಾಜ್ಯ ತಂಡ ಜಾರ್ಖಂಡ್ನ ರಣಜಿ ಟ್ರೋಫಿ ಪಂದ್ಯಗಳನ್ನು ತಪ್ಪಿಸಿಕೊಳ್ಳಲು ನಿರ್ಧರಿಸಿದರು.

ಅಲ್ಲದೆ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಭಾರತ ತಂಡದಲ್ಲಿ ಇಶಾನ್ ಕಿಶನ್ ಸ್ಥಾನವನ್ನು ಮರಳಿ ಪಡೆಯಲು ಕೆಲವು ರೀತಿಯ ಕ್ರಿಕೆಟ್ ಆಡುವ ಅಗತ್ಯವಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ, ಇಶಾನ್ ಕಿಶನ್ ಆ ಸೂಚನೆಯನ್ನು ನಿರ್ಲಕ್ಷಿಸಿದರು.
ಇನ್ನು ಶ್ರೇಯಸ್ ಅಯ್ಯರ್ ಗಾಯದ ಕಾರಣವೊಡ್ಡಿ ಮುಂಬೈ ತಂಡದ ರಣಜಿ ಟ್ರೋಫಿ ಪಂದ್ಯವೊಂದರಿಂದ ಹೊರಗುಳಿದರು. ಆದಾಗ್ಯೂ, ಕೆಲವು ವರದಿಯ ಪ್ರಕಾರ, ಶ್ರೇಯಸ್ ಅಯ್ಯರ್ ಗಾಯದ ಕುರಿತು ಎನ್ಸಿಎ ವರದಿಯು ವಿರುದ್ಧವಾಗಿತ್ತು.
ಇದೀಗ ಇಎಸ್ಪಿಎನ್ ಕ್ರಿಕ್ಇನ್ಫೋ ವರದಿಯಲ್ಲಿ, ಸದ್ಯ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳೆ ಇಶಾನ್ ಕಿಶನ್ ಅವರನ್ನು ಭಾರತ ಕ್ರಿಕೆಟ್ ತಂಡದ ಮ್ಯಾನೇಜ್ಮೆಂಟ್ ಸಂಪರ್ಕಿಸಿದೆ ಎಂದು ಹೇಳಲಾಗಿದೆ.
ಆದರೆ, ಇಶಾನ್ ಕಿಶನ್ ತಾವು ಇನ್ನೂ ಸಿದ್ಧವಾಗಿಲ್ಲ ಎಂದು ಉತ್ತರಿಸಿದರು ಎಂದು ವರದಿಗಳು ತಿಳಿಸಿವೆ. ಅವರ ಅನುಪಸ್ಥಿತಿಯಲ್ಲಿ ಯುವ ಆಟಗಾರ ಧ್ರುವ್ ಜುರೆಲ್ ಅವರಿಗೆ ಅವಕಾಶ ಸಿಕ್ಕಿತು ಮತ್ತು ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.