ಕಳೆದ ಕೆಲವು ದಿನಗಳಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್, ದೇಶೀಯ ಕ್ರಿಕೆಟ್ನಲ್ಲಿ ಅಬ್ಬರಿಸಿದ್ದಾರೆ. ಜೈಪುರ್ದಲ್ಲಿ ನಡೆಯುತ್ತಿರುವ ವಿಜಯ್ ಹಾಜರೆ ಏಕದಿನ ಟೂರ್ನಿಯಲ್ಲಿ ಜಾರ್ಖಂಡ್ ಪರ ಬ್ಯಾಟ್ ಮಾಡಿದ ಇಶಾನ್ ಕಿಶನ್, ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಈ ಮೂಲಕ ಚಾಂಪಿಯನ್ಸ್ ಟ್ರೋಫಿಗೆ ತಮ್ಮನ್ನು ಪರಿಗಣಿಸುವಂತೆ ಬಿಸಿಸಿಐ ಆಯ್ಕೆ ಸಮಿತಿ ಕದ ತಟ್ಟಿದರು.
ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಣಿಪುರ 50 ಓವರ್ಗಳಲ್ಲಿ 7 ವಿಕೆಟ್ಗೆ 253 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಜಾರ್ಖಂಡ್ 28.3 ಓವರ್ಗಳಲ್ಲಿ 2 ವಿಕೆಟ್ಗೆ 255 ರನ್ ಸಿಡಿಸಿ ಜಯ ಸಾಧಿಸಿತು. ಈ ಮೂಲಕ ಆಡಿದ ಎರಡೂ ಪಂದ್ಯಗಳಲ್ಲಿ ಜಾರ್ಖಂಡ್ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮಣಿಪುರ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ.

ಗುರಿಯನ್ನು ಹಿಂಬಾಲಿಸಿದ ಇಶಾನ್ ಕಿಶನ್ ಹಾಗೂ ಉತ್ಕರ್ಷ್ ಸಿಂಗ್ ಜೋಡಿ ಮೊದಲು ವಿಕೆಟ್ಗೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು 22.5 ಓವರ್ಗಳಲ್ಲಿ 196 ರನ್ ಸಿಡಿಸಿತು. ಆರಂಭಿಕ ಆಟಗಾರ ಇಶಾನ್ ಕಿಶನ್ ಸ್ಪೋಟಕ ಇನಿಂಗ್ಸ್ ಕಟ್ಟಿ ತಂಡದ ಗೆಲುವಿನಲ್ಲಿ ಮಿಂಚಿದರು. ಈ ಮೂಲಕ ಬಿಸಿಸಿಐ ಆಯ್ಕೆ ಸಮಿತಿಗೆ ತಮ್ಮನ್ನು ಚಾಂಪಿಯನ್ಸ್ ಟ್ರೋಫಿಗೆ ಪರಿಗಣಿಸುವಂತೆ ಒತ್ತಾಯಿಸಿದರು.
ಇಶಾನ್ ಕಿಶನ್ 78 ಎಸೆತಗಳಲ್ಲಿ 16 ಬೌಡರಿ, 6 ಸಿಕ್ಸರ್ ಸಹಾಯದಿಂದ 134 ರನ್ ಬಾರಿಸಿ ಅಬ್ಬರಿಸಿತು. ಇನ್ನೋರ್ವ ಆರಂಭಿಕ ಆಟಗಾರ ಉತ್ಕರ್ಷ್ ಸಿಂಗ್ 9 ಬೌಂಡರಿ, 1 ಸಿಕ್ಸರ್ ಸಹಾಯದಿಂದ 68 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಯುವ ಆಟಗಾರ ಕುಮಾರ್ ಕುಶಾಗ್ರ ಅಜೇಯ 27, ಅನುಕುಲ್ ರಾಯ್ ಅಜೇಯ 17 ರನ್ ಸಿಡಿಸಿದರು.

ಮೊದಲು ಬ್ಯಾಟ್ ಮಾಡಿದ ಮಣಿಪುರ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಕರ್ಣಜಿತ್ ಯುಮ್ನಮ್ (24) ಹಾಗೂ ಬಸೀರ್ ರೆಹಮಾನ್ (26) ಜೋಡಿ ಮೊದಲ ವಿಕೆಟ್ಗೆ 55 ರನ್ ಸಿಡಿಸಿತು. ಮೂರನೇ ವಿಕೆಟ್ಗೆ ಕಂಗಾಬಮ್ ಪ್ರಿಯೋಜಿತ್ (43) ಹಾಗೂ ಜಾನ್ಸನ್ ಸಿಂಗ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 84 ರನ್ಗಳನ್ನು ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿತು. ಭರವಸೆಯ ಆಟಗಾರ ಜಾನ್ಸನ್ ಸಿಂಗ್ 7 ಬೌಂಡರಿ ನೆರವಿನಿಂದ 69 ರನ್ ಸಿಡಿಸಿ ತಂಡಕ್ಕೆ ಆಧಾರವದರು. ಫೀರೋಯಿಜಮ್ ಜೋಟಿನ್ 35, ಅಹ್ಮದ್ ಶಾ 16, ಎಲ್ ಕಿಶನ್ ಸಿಂಗ್ 14 ರನ್ ಸಿಡಿಸಿದರು.
ಉತ್ಕರ್ಷ್ ಸಿಂಗ್ ಹಾಗೂ ಅನಕೂಲ್ ರಾಯ್ ತಲಾ 2, ವಿಕಾಶ್ ಸಿಂಗ್, ಸುಪ್ರಿಯೋ, ಅತುಲ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.