
ಐಪಿಎಲ್ ಹರಾಜಿನ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶುಕ್ರವಾರ ಸಂಜೆ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಸಾಮಾನ್ಯ ಪರೀಕ್ಷೆಗಾಗಿ ಗಂಗೂಲಿ ಆಸ್ಪತ್ರೆಗೆ ದಾಖಲಾಗಿರಬಹುದು ಎಂದು ವರದಿಯಾಗಿತ್ತು. ಆದರೆ ಈ ಬಗ್ಗೆ ಸ್ವತಃ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆ ಸ್ಪಷ್ಟನೆ ನೀಡಿದೆ. ಸೌರವ್ ಗಂಗೂಲಿ ಪರೀಕ್ಷೆಯ ಸಲುವಾಗಿ ಆಸ್ಪತ್ರೆಗೆ ಆಗಮಸಿಲ್ಲ. ಬದಲಾಗಿ ವೈದ್ಯ ಡಾ. ದೇವಿ ಪ್ರಸಾದ್ ಶೆಟ್ಟಿ ಅವರನ್ನು ಸೌಜನ್ಯಯುತವಾಗಿ ಭೇಟಿಯಾಗಲು ಆಗಮಿಸಿದ್ದರು ಎಂದು ಸ್ಪಷ್ಟಪಡಿಸಿದೆ.
ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆ ತನ್ನ ಸ್ಪಷ್ಟನೆಯಲ್ಲಿ "ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ದಾಖಲಾಗಿರುವ ಸುದ್ದಿಯನ್ನು ಉಲ್ಲೇಖಿಸಿ, ಅವರನ್ನು ಆಸ್ಪತ್ರೆಗೆ ಅಡ್ಮೀಟ್ ಮಾಡಲಾಗಿದೆ ಎಂಬ ಸುದ್ದಿ ಸರಿಯಲ್ಲ ಎಂದು ಸ್ಪಷ್ಟಪಡಿಸಲು ನಾವು ಬಯಸುತ್ತೇವೆ. ಸೌರವ್ ಗಂಗೂಲಿ ಅವರು ಬೆಂಗಳೂರಿನಲ್ಲಿದ್ದ ಕಾರಣ ಸೌಜನ್ಯದ ಭೇಟಿಗಾಗಿ ನಾರಾಯಣ ಹೆಲ್ತ್ನ ಅಧ್ಯಕ್ಷ ಮತ್ತು ಸಂಸ್ಥಾಪಕರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರನ್ನು ಭೇಟಿ ಮಾಡಲು ಆಸ್ಪತ್ರೆಗೆ ಬಂದಿದ್ದರು" ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಸೌರವ್ ಗಂಗೂಲಿ ಕಳೆದ ವರ್ಷ ಎರಡು ಬಾರಿ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಗಂಗೂಲಿ ನಂತರ ಎರಡು ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದರು. ಕೋವಿಡ್-19 ವಿರುದ್ಧ ಸಂಪೂರ್ಣ ಲಸಿಕೆಯನ್ನು ಪಡೆದಿರುವ ಗಂಗೂಲಿ, ಜನವರಿ 2022 ರಲ್ಲಿ ಓಮಿಕ್ರಾನ್ ರೂಪಾಂತರದ ಪಾಸಿಟಿವ್ ಪರೀಕ್ಷೆಯ ನಂತರ ಆಸ್ಪತ್ರೆಗೆ ದಾಖಲಾಗಿದ್ದರು.
ಅವರ ಸಹೋದರ ಸ್ನೇಹಶಿಶ್ ಗಂಗೂಲಿ ಅವರು ಕಳೆದ ವರ್ಷದ ಆರಂಭದಲ್ಲಿ ಕೋವಿಡ್ -19 ಪಾಸಿಟಿವ್ ಆಗಿದ್ದರು. ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಅತ್ಯಂತ ಅಚ್ಚುಕಟ್ಟಾಗಿ ನಡೆಯಲು ಸೌರವ್ ಗಂಗೂಲಿ ಪಣತೊಟ್ಟಿದ್ದಾರೆ. ಮುಂಜಾಗ್ರತ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿತ್ತು. ಆದರೆ ಈ ವರದಿಗಳನ್ನು ಆಸ್ಪತ್ರೆ ನೇರವಾಗಿ ತಳ್ಳಿ ಹಾಕಿದೆ.