ನವದೆಹಲಿ, ಡಿ. 18: ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ರವೀಂದ್ರ ಜಡೇಜ ಅವರು ಮುಂಬರುವ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗುವ ನಿರೀಕ್ಷೆ ಹೊತ್ತುಕೊಂಡಿದ್ದಾರೆ.
ಜಡೇಜ ಅಲ್ಲದೆ ವೇಗಿಗಳಾದ ಮೊಹಮ್ಮದ್ ಶಮಿ, ಇಶಾಂತ್ ಶರ್ಮ, ಆರಂಭಿಕ ಬ್ಯಾಟ್ಸ್ ಮನ್ ಮುರಳಿ ವಿಜಯ್ ಗೆ ಬಿಸಿಸಿಐ ಆಯ್ಕೆದಾರರ ಕೃಪೆ ಸಿಗುವುದೆ ಎಂಬ ಪ್ರಶ್ನೆಗೆ ಶನಿವಾರ (ಡಿಸೆಂಬರ್ 19)ದಂದು ಉತ್ತರ ಸಿಗಲಿದೆ.
ಆಟಗಾರರ ಜೊತೆಗೆ ಎಂಎಸ್ ಧೋನಿ ಅವರಿಗೂ ಈ ಏಕದಿನ ಕ್ರಿಕೆಟ್ ಸರಣಿ ಸತ್ವ ಪರೀಕ್ಷೆಯಾಗಲಿದೆ. ಮುಂದಿನ ವರ್ಷ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ 5 ಏಕದಿನ ಕ್ರಿಕೆಟ್ ಪಂದ್ಯ ಹಾಗೂ 3 ಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ. ಜನವರಿ 12 ರಿಂದ ಪಂದ್ಯವಾಳಿ ಆರಂಭಗೊಳ್ಳಲಿದೆ.

ಮುಂಬರುವ ವಿಶ್ವ ಟಿ20 ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಆಟಗಾರರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಮಾಡಲಿದೆ. ಸೌರಾಷ್ಟ್ರದ 27 ವರ್ಷ ವಯಸ್ಸಿನ ಆಲ್ ರೌಂಡರ್ ರವೀಂದ್ರ ಜಡೇಜ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 23 ವಿಕೆಟ್ ಹಾಗೂ 109ರನ್ ಗಳಿಸಿ ಗಮನ ಸೆಳೆದಿದ್ದಾರೆ.
ಹೀಗಾಗಿ, ಅಕ್ಷರ್ ಪಟೇಲ್ ಬದಲಿಗೆ ಜಡೇಜ ಅವರ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಹರ್ಭಜನ್ ಸಿಂಗ್, ಅಕ್ಷರ್ ಪಟೇಲ್ ಹಾಗೂ ಅಮಿತ್ ಮಿಶ್ರಾ ನಡುವೆ ಪೈಪೋಟಿ ಇದೆ. ಹೆಚ್ಚಿನ ಅವಕಾಶ ಸಿಗದಿದ್ದರೂ ಕರ್ನಾಟಕದ ಆಟಗಾರ ಸ್ಟುವರ್ಟ್ ಬಿನ್ನಿ ಅವರು ಆಲ್ ರೌಂಡರ್ ಆಗಿ ಆಯ್ಕೆಯಾಗುವುದು ಖಚಿತ ಎನ್ನಬಹುದು.
ಮೊಹಮ್ಮದ್ ಶಮಿ ಅವರಿಗೆ ಉಮೇಶ್ ಯಾದವ್, ಭುವನೇಶ್ವರ್ ಕುಮಾರ್ ಹಾಗೂ ಮೋಹಿತ್ ಶರ್ಮ ಪೈಪೋಟಿ ನೀಡುತ್ತಿದ್ದಾರೆ.ಇನ್ನು ಬ್ಯಾಟ್ಸ್ ಮನ್ ಗಳ ಪೈಕಿ ಅಂಬಟಿ ರಾಯುಡು ಹಾಗೂ ಮುರಳಿ ವಿಜಯ್ ನಡುವೆ ಸ್ಪರ್ಧೆ ಇದೆ.
ನಾಯಕ ಧೋನಿ ಜೊತೆಗೆ ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಸುರೇಶ್ ರೈನಾ ಆಯ್ಕೆ ಖಚಿತವಾಗಿದೆ. 16 ಮಂದಿ ತಂಡದಲ್ಲಿ ಗುರುಕೀರತ್ ಸಿಂಗ್ ಮಾನ್ ಅವರು ಆಯ್ಕೆಯಾಗುವ ಸಾಧ್ಯತೆಯೂ ಕಂಡು ಬಂದಿದೆ. ಯಾವುದಕ್ಕೂ ಶನಿವಾರ ಸಂಜೆ ವೇಳೆಗೆ ಎಲ್ಲದ್ದಕ್ಕೂ ಉತ್ತರ ಸಿಗಲಿದೆ. (ಪಿಟಿಐ)