ಆಗಸ್ಟ್ 17 ಶನಿವಾರ, ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಟೀಮ್ ಇಂಡಿಯಾದ ಉದಯೋನ್ಮುಖ ಆಟಗಾರರು ಎಂದು ಕರೆದರೆ ತಪ್ಪಾಗಲಾರದು. ಆದರೆ ಫೆಬ್ರವರಿ 2024 ರಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಬ್ಬರೂ ಆಟಗಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದೆ.
ಬಿಸಿಸಿಐ ಕಠಿಣ ಕ್ರಮದಿಂದಾಗಿ ಇಶಾನ್ ಮತ್ತು ಶ್ರೇಯಸ್ ವೃತ್ತಿಜೀವನದ ಮೇಲೆ ಪರಿಣಾಮ ಬೀರಿದೆ. ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತೊಮ್ಮೆ ಈ ಇಬ್ಬರೂ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಶ್ರೇಯಸ್ ಮತ್ತು ಇಶಾನ್ ದೇಶೀಯ ಕ್ರಿಕೆಟ್ ಆಡಲು ಬಿಸಿಸಿಐ ಆದೇಶವನ್ನು ನಿರಾಕರಿಸಿದ್ದರು. ಇದರಿಂದಾಗಿ ಬಿಸಿಸಿಐ ಇಬ್ಬರನ್ನು ಕೇಂದ್ರ ಒಪ್ಪಂದ ಪಟ್ಟಿಯಿಂದ ಕೈ ಬಿಡಲಾಗಿತ್ತು.

ಇತ್ತೀಚೆಗೆ ಬಿಸಿಸಿಐ ದುಲೀಪ್ ಟ್ರೋಫಿ ಟೂರ್ನಿಗೆ ನಾಲ್ಕು ತಂಡಗಳನ್ನು ಪ್ರಕಟಿಸಿತ್ತು. ಇದರಲ್ಲಿ ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್ ಅವರಂತಹ ಸ್ಟಾರ್ ಆಟಗಾರರು ಕಾಣಿಸಿಕೊಂಡಿದ್ದಾರೆ. ಭಾರತ ಡಿ ತಂಡದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಇದ್ದಾರೆ. ಕೇಂದ್ರ ಒಪ್ಪಂದದಿಂದ ಹೊರಗುಳಿದ ನಂತರ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾಕ್ಕೆ ಮರಳಿದ್ದಾರೆ. ಆದರೆ ಇಶಾನ್ ಕಿಶನ್ಗೆ ಪ್ರಯಾಣ ಇನ್ನೂ ಕಷ್ಟಕರವಾಗಿದೆ.
ಗಾಯದ ಸಮಸ್ಯೆಯಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಯಾವುದೇ ಆಟಗಾರ ದೇಶೀಯ ಕ್ರಿಕೆಟ್ನಲ್ಲಿ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಬೇಕಿದೆ. ಇದಾದ ನಂತರವೇ ಅವರು ಟೀಮ್ ಇಂಡಿಯಾಕ್ಕೆ ಮರಳಲು ಸಾಧ್ಯ ಎಂದು ಜಯ್ ಶಾ ಸ್ಪಷ್ಟಪಡಿಸಿದ್ದಾರೆ.
ದುಲೀಪ್ ಟ್ರೋಫಿಗೆ ಸಂಬಂಧಿಸಿದಂತೆ ಪ್ರತಿಕೆಯೊಂದಕ್ಕೆ ಜಯ್ ಶಾ ನೀಡಿರುವ ಹೇಳಿಕೆ ಪ್ರಕಾರ, 'ನೀವು ದುಲೀಪ್ ಟ್ರೋಫಿ ತಂಡವನ್ನು ನೋಡಿದರೆ, ಸದ್ಯ ರೋಹಿತ್ ಮತ್ತು ವಿರಾಟ್ ವಿರಾಮದಲ್ಲಿದ್ದಾರೆ. ಇದಲ್ಲದೇ ಇತರೆ ಆಟಗಾರರು ದುಲೀಪ್ ಟ್ರೋಫಿ ಆಡಲಿದ್ದಾರೆ. ನಾನು ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ದುಲೀಪ್ ಟ್ರೋಫಿ ಆಡುತ್ತಿದ್ದಾರೆ.
ಈ ವಿಚಾರವಾಗಿ ನಾವು ಸ್ವಲ್ಪ ಕಟ್ಟುನಿಟ್ಟಾಗಿದ್ದೇವೆ. ರವೀಂದ್ರ ಜಡೇಜಾ ಗಾಯಗೊಂಡಾಗ ಅವರಿಗೆ ಕರೆ ಮಾಡಿ ದೇಶೀಯ ಪಂದ್ಯ ಆಡುವಂತೆ ಹೇಳಿದ್ದು ನಾನೇ. ಇದೀಗ ಗಾಯದ ಸಮಸ್ಯೆಯಿಂದ ಹೊರಗುಳಿದಿರುವವರು ದೇಶಿಯ ಕ್ರಿಕೆಟ್ನಲ್ಲಿ ಫಿಟ್ನೆಸ್ ಸಾಬೀತುಪಡಿಸಿದ ನಂತರವೇ ಭಾರತ ತಂಡವನ್ನು ಸೇರಿಕೊಳ್ಳಲು ಸಾಧ್ಯ ಎನ್ನುವ ಮೂಲಕ ಜಯ್ ಶಾ ಇಶಾನ್ ಮತ್ತು ಶ್ರೇಯಸ್ಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಈ ಟೂರ್ನಿಯಿಂದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಜಯ ಶಾ ಬ್ರೇಕ್ ನೀಡಿದ್ದು, ಈ ಕಾರಣಕ್ಕೆ ಯುವ ಮತ್ತು ಅನುಭವಿ ಆಟಗಾರರಿಗೆ ಅದ್ಭುತ ಅವಕಾಶ ಸಿಕ್ಕಂತಾಗಿದೆ.