ಇದೇ ಜೂನ್ 28ರಿಂದ ಬೆಂಗಳೂರಿನಲ್ಲಿ ಆರಂಭಗೊಳ್ಳುವ 2023ರ ದುಲೀಪ್ ಟ್ರೋಫಿ ಪಂದ್ಯಾವಳಿಗಾಗಿ ಈಗಾಗಲೇ ದಕ್ಷಿಣ ಮತ್ತು ಪೂರ್ವ ವಲಯಗಳು ತಮ್ಮ ತಂಡಗಳನ್ನು ಪ್ರಕಟಿಸಿವೆ.
ಇನ್ನು ರಣಜಿ ಟ್ರೋಫಿ 2022-23ರ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಟೇಕರ್ ಆಗಿದ್ದರೂ ಮಧ್ಯಪ್ರದೇಶದ ಸ್ಪಿನ್ನರ್ ಜಲಜ್ ಸಕ್ಸೇನಾ ಅವರನ್ನು ದುಲೀಪ್ ಟ್ರೋಫಿ ಪಂದ್ಯಾವಳಿಗೆ ಕಡೆಗಣಿಸಲಾಗಿದೆ.

ರಣಜಿ ಟ್ರೋಫಿಯಲ್ಲಿ ಆಲ್ರೌಂಡರ್ ಜಲಜ್ ಸಕ್ಸೇನಾ ಕೇರಳ ಪರ 7 ಪಂದ್ಯಗಳನ್ನು ಆಡಿದ್ದಾರೆ ಮತ್ತು 19.26 ಸರಾಸರಿಯಲ್ಲಿ ಮತ್ತು 41.92 ಸ್ಟ್ರೈಕ್ ರೇಟ್ನಲ್ಲಿ 50 ವಿಕೆಟ್ಗಳನ್ನು ಪಡೆದರು. ಅವರ ಎಕಾನಮಿ ದರ 2.75 ಆಗಿತ್ತು.
ಜಲಜ್ ಸಕ್ಸೇನಾ ಇನ್ನಿಂಗ್ಸ್ನಲ್ಲಿ ಅತ್ಯುತ್ತಮ ಬೌಲಿಂಗ್ ದಾಖಲೆ ನಿರ್ಮಿಸಿದರು. 36 ರನ್ಗೆ 8 ವಿಕೆಟ್ ಮತ್ತು ಪಂದ್ಯದಲ್ಲಿ 102 ರನ್ಗಳಿಗೆ 11 ವಿಕೆಟ್ ಗಳಿಕೆ ಆಗಿತ್ತು. ಆದಾಗ್ಯೂ, ದುಲೀಪ್ ಟ್ರೋಫಿಗಾಗಿ ದಕ್ಷಿಣ ವಲಯ ತಂಡವನ್ನು ಆಯ್ಕೆ ಮಾಡಿದಾಗ ಅವರನ್ನು ಕಡೆಗಣಿಸಲಾಗಿದೆ.
ತಮ್ಮನ್ನು ದುಲೀಪ್ ಟ್ರೋಫಿಗಾಗಿ ಆಯ್ಕೆ ಮಾಡದಿರುವುದಕ್ಕೆ ಆಯ್ಕೆ ಪ್ರಕ್ರಿಯೆಯನ್ನು ಜಲಜ್ ಸಕ್ಸೇನಾ ವ್ಯಂಗ್ಯವಾಗಿ ಕುಟುಕಿದ್ದಾರೆ. ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.
"ಭಾರತದ ದೇಶೀಯ ಟೂರ್ನಿ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದರೂ ದುಲೀಪ್ ಟ್ರೋಫಿಯಲ್ಲಿ ಆಯ್ಕೆಯಾಗಲಿಲ್ಲ. ಭಾರತದ ದೇಶೀಯ ಕ್ರಿಕೆಟ್ ಇತಿಹಾಸದಲ್ಲಿ ಇದು ಎಂದಾದರೂ ಸಂಭವಿಸಿದೆಯೇ ಎಂದು ನೀವು ಪರಿಶೀಲಿಸಬಹುದೇ? ಸುಮ್ಮನೇ ತಿಳಿದುಕೊಳ್ಳಲು ಬಯಸುತ್ತೇನೆ. ಯಾರನ್ನೂ ದೂಷಿಸುವುದಿಲ್ಲ," ಎಂದು ಆಫ್ಬ್ರೇಕ್ ಬೌಲರ್ ಜಲಜ್ ಸಕ್ಸೇನಾ ಟ್ವಿಟ್ಟರ್ನಲ್ಲಿ ಬರೆದಿದ್ದಾರೆ.
ಭಾರತದಲ್ಲಿ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದರೂ ದುಲೀಪ್ ಟ್ರೋಫಿಗಾಗಿ ಪರಿಗಣಿಸಲಿಲ್ಲ. ಭಾರತದ ದೇಶೀಯ ಕ್ರಿಕೆಟ್ ಇತಿಹಾಸದಲ್ಲಿ ಎಂದಿಗೂ ಸಂಭವಿಸಿಲ್ಲ, ಸುಮ್ಮನೆ ತಿಳಿದುಕೊಳ್ಳಲು ಬಯಸುತ್ತೇನೆ ಎನ್ನುವ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ಜಲಜ್ ಸಕ್ಸೇನಾ ಪರೋಕ್ಷವಾಗಿ ಟೀಕಿಸಿದ್ದಾರೆ.
ಬಲಗೈ ಬ್ಯಾಟರ್ ಕೂಡ ಆಗಿರುವ ಜಲಜ್ ಸಕ್ಸೇನಾ 133 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 34.74ರ ಸರಾಸರಿಯಲ್ಲಿ 6567 ರನ್ ಗಳಿಸಿದ್ದಾರೆ. ಅಲ್ಲದೇ, ಈ ಮಾದರಿಯಲ್ಲಿ 14 ಶತಕ ಮತ್ತು 32 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಜಲಜ್ ಸಕ್ಸೇನಾ ಅವರ ಅತ್ಯಧಿಕ ಸ್ಕೋರ್ 194 ರನ್ ಆಗಿದೆ. ಬೌಲಿಂಗ್ನಲ್ಲಿ ಆಫ್ ಸ್ಪಿನ್ನರ್ ಜಲಜ್ ಸಕ್ಸೇನಾ ಅವರು ತಮ್ಮ ಹೆಸರಿಗೆ 410 ವಿಕೆಟ್ಗಳನ್ನು ಪಡೆದಿದ್ದಾರೆ. ಅವರು 28 ಬಾರಿ ಐದು ವಿಕೆಟ್ಗಳ ಸಾಧನೆ ಮಾಡಿದ್ದಾರೆ.
2023ರ ದುಲೀಪ್ ಟ್ರೋಫಿ ಪಂದ್ಯಾವಳಿ ಜೂನ್ 28ರಂದು ಆರಂಭಗೊಳ್ಳುತ್ತದೆ. ಟೂರ್ನಿಯ ಫೈನಲ್ ಪಂದ್ಯವು ಜುಲೈ 12ರಂದು ಪ್ರಾರಂಭವಾಗಲಿದೆ. ಎಲ್ಲಾ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ ಎಂಬುದು ವಿಶೇಷ.