ಹುಬ್ಬಳ್ಳಿ: ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ಇನಿಂಗ್ಸ್ ಮುನ್ನಡೆ ಸಾಧಿಸಿದ್ದು, ಇತಿಹಾಸ ರಚಿಸುವ ಹೊಸ್ತಿಲಲ್ಲಿ ನಿಂತಿದೆ. ಇನ್ನು 9ನೇ ಬಾರಿಗೆ ರಣಜಿ ಟ್ರೋಫಿ ಗೆಲ್ಲುವ ಕನಸಿನಲ್ಲಿದ್ದ ಕರ್ನಾಟಕ ಚಮತ್ಕಾರ ಕನಸಿನಲ್ಲಿದೆ.
ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 220 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ನಾಲ್ಕನೇ ದಿನದ ಆಟವನ್ನು ಆರಂಭಿಸಿತು. ಆದರೆ ಯಾವೊಬ್ಬ ಬ್ಯಾಟರ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಲಿಲ್ಲ. ವಿಕೆಟ್ ಕೀಪರ್ ಬ್ಯಾಟರ್ ಕೃತಿಕ್ ಕೃಷ್ಣ 36, ವಿದ್ಯಾಧರ್ ಪಾಟೀಲ್ 11, ವಿಜಯ್ಕುಮಾರ್ ವೈಶಾಖ್ 17 ರನ್ ಬಾರಿಸಿದರು. ಆರಂಭಿಕರಾದ ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ನೀಡಿದರು. ಇವರು 266 ಎಸೆತಗಳನ್ನು ಎದುರಿಸಿ 21 ಬೌಂಡರಿ ಸೇರಿದಂತೆ 160 ರನ್ ಬಾರಿಸಿ 8ನೇ ವಿಕೆಟ್ ರೂಪದಲ್ಲಿ ಔಟ್ ಆದರು. ಅಂತಿಮವಾಗಿ ಕರ್ನಾಟಕ 293 ರನ್ಗಳಿಗೆ ಆಲೌಟ್ ಆಯಿತು.

ಟೂರ್ನಿಯುದ್ದಕ್ಕೂ ಆಕರ್ಷಕ ಬೌಲಿಂಗ್ ಪ್ರದರ್ಶನ ನೀಡಿರುವ ಆಕಿಬ್ ನಬಿ 54 ರನ್ ನೀಡಿ 5 ವಿಕೆಟ್ ಕಬಳಿಸಿದರು. ಸುನಿಲ್ ಕುಮಾರ್, ಯಧುವೀರ್ ಸಿಂಗ್ ತಲಾ 2 ವಿಕೆಟ್ ಕಬಳಿಸಿದರು.
ಕರ್ನಾಟಕಕ್ಕೆ ಫಾಲೋ ಆನ್ ನೀಡುವ ಅವಕಾಶ ಇದ್ದರೂ ಸಹ ಅದನ್ನು ಮಾಡದ ಜಮ್ಮು ಕಾಶ್ಮೀರ ತಂಡ ಎರಡನೇ ಇನಿಂಗ್ಸ್ ಆರಂಭಿಸಿತು. ಜಮ್ಮು ಮತ್ತು ಕಾಶ್ಮೀರ ತಂಡದ ಆರಂಭ ಕಳಪೆಯಾಗಿತ್ತು. ಯಾವರ್ ಹಸನ್ (1), ಶುಭಮ್ ಪುಂಡಿರ್ (4) ಕರ್ನಾಟಕದ ವೇಗದ ಬೌಲಿಂಗ್ ಎದುರಿಸುವಲ್ಲಿ ವಿಫಲರಾದರು. ನಾಯಕ ಪರಾಸ್ ಡೋಗ್ರಾ 16 ರನ್ಗಳಿಗೆ ಆಟ ಮುಗಿಸಿದರು. ಜಮ್ಮು ಕಾಶ್ಮೀರ ತಂಡದ ಭರವಸೆಯ ಬ್ಯಾಟರ್ ಅಬ್ದುಲ್ ಸಮದ್ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 32 ರನ್ ಬಾರಿಸಿ ಔಟ್ ಆದರು.

ಕಮ್ರಾನ್ ಇಕ್ಬಾಲ್ ಮತ್ತು ಸಾಹಿಲ್ ಲೋತ್ರಾ ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆರಂಭಿಕ ಆಟಗಾರ ಕಮ್ರಾನ್ ಇಕ್ಬಾಲ್ 11 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 94 ರನ್ ಸಿಡಿಸಿದರೆ, ಸಾಹಿಲ್ ಲೋತ್ರಾ ಅಜೇಯ 16 ರನ್ ಬಾರಿಸಿದ್ದು, ಶನಿವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ದಿನದಾಟದ ಮುಕ್ತಾಯಕ್ಕೆ ಜಮ್ಮು 4 ವಿಕೆಟ್ ನಷ್ಟಕ್ಕೆ 186 ರನ್ ಕಲೆ ಹಾಕಿದ್ದು, 477 ರನ್ಗಳ ಇನಿಂಗ್ಸ್ ಮುನ್ನಡೆ ಸಾಧಿಸಿದೆ.