ಜಮ್ಮು ಕಾಶ್ಮೀರ ತನ್ನ ಸ್ಥಿರ ಪ್ರದರ್ಶನದ ಮೂಲಕ ಕ್ರಿಕೆಟ್ ಆಟದಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದೆ. ಇದೇ ಮೊದಲ ಬಾರಿಗೆ ರಣಜಿ ಟ್ರೋಫಿಯ ಸೆಮಿಫೈನಲ್ ಪ್ರವೇಶಿಸಿದ್ದ ಜಮ್ಮು-ಕಾಶ್ಮೀರ ಇತಿಹಾಸ ಬರೆದಿತ್ತು. ಬುಧವಾರ ಬಂಗಾಳ ತಂಡವನ್ನು ಎರಡನೇ ಉಪಾಂತ್ಯ ಪಂದ್ಯದಲ್ಲಿ 6 ವಿಕೆಟ್ಗಳಿಂದ ಮಣಿಸಿದ ಜಮ್ಮು ಕಾಶ್ಮಿರ ಚೊಚ್ಚಲ ಬಾರಿಗೆ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದು ಐತಿಹಾಸಿಕ ಸಾಧನೆ ಮಾಡಿದೆ.
ಸೆಮಿಫೈನಲ್ ಪಂದ್ಯದಲ್ಲಿ ಮನಮೋಹಕ ಆಟದ ಪ್ರದರ್ಶನ ನೀಡಿದ ಜಮ್ಮು ತಂಡ ಅರ್ಹ ಜಯ ದಾಖಲಿಸಿದೆ. ಎರಡನೇ ಇನಿಂಗ್ಸ್ನಲ್ಲಿ ಜಮ್ಮು ತಂಡ ಬಿಗುವಿನ ದಾಳಿ ನಡೆಸಿ ಬಂಗಾಳ ತಂಡವನ್ನು ಬಹುವಾಗಿ ಕಾಡಿತ್ತು. ಅಲ್ಲದೆ 99 ರನ್ಗಳಿಗೆ ಆಲೌಟ್ ಮಾಡಿತ್ತು. ಮೊದಲ ಇನಿಂಗ್ಸ್ನಲ್ಲಿ 26 ಹಾಗೂ ಎರಡನೇ ಇನಿಂಗ್ಸ್ನಲ್ಲಿ 99 ರನ್ ಮುನ್ನಡೆ ಸಾಧಿಸಿದ ಬಂಗಾಳ ಒಟ್ಟು 125 ರನ್ ಸೇರಿಸಿತು. ಪಂದ್ಯವನ್ನು ಗೆಲ್ಲಲು ಜಮ್ಮು-ಕಾಶ್ಮೀರ ತಂಡ 126 ರನ್ ಸೇರಿಸಬೇಕಿತ್ತು.

ಜಮ್ಮು-ಕಾಶ್ಮೀರ ತಂಡದ ಪರ ಎರಡನೇ ಇನಿಂಗ್ಸ್ನಲ್ಲಿ ಅಕಿಬ್ ನಬಿ ಹಾಗೂ ಸುನಿಲ್ ಕುಮಾರ್ ತಲಾ 4 ವಿಕೆಟ್ ಪಡೆದರು. ಅಲ್ಲದೆ ಯಧುವೀರ್ 2 ವಿಕೆಟ್ ಕಬಳಿಸಿದರು.
126 ರನ್ಗಳ ಗುರಿಯನ್ನು ಬೆನ್ನಟ್ಟಿದ ಜಮ್ಮು ಕಾಶ್ಮೀರ ತಂಡ ಎರಡನೇ ಇನಿಂಗ್ಸ್ನಲ್ಲಿ ಮಂಗಳವಾರದ ದಿನದಾಟದಂತ್ಯಕ್ಕೆ 2 ವಿಕೆಟ್ಗೆ 43 ರನ್ ಸೇರಿಸಿತ್ತು. ಬುಧವಾರದ ಆಟ ಆರಂಭವಾದಾಗ ಶುಭಂ ಪುಂಡಿರ್ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಇವರು 27 ರನ್ ಬಾರಿಸಿದ್ದಾಗ ಶಮಿ ತೋಡಿದ ಖೆಡ್ಡಾಗೆ ಬಲಿಯಾದರು.
ಮಧ್ಯಮ ಕ್ರಮಾಂಕದಲ್ಲಿ ವಂಶಜ್ ಶರ್ಮಾ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಜಯದ ಮಾಲೆ ತೊಡಿಸಿದರು. ಇವರು 83 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ 43 ರನ್ ಸಿಡಿಸಿ ಮಿಂಚಿದರು. ನಾಯಕ ಪರಾಸ್ ಡೋಗ್ರಾ (9) ರನ್ ಕಲೆ ಹಾಕುವಲ್ಲಿ ವಿಫಲರಾಗಿ ನಿರಾಸೆ ಅನುಭವಿಸಿದರು. ಅನುಭವಿ ಬ್ಯಾಟರ್ ಅಬ್ದುಲ್ ಸಮದ್ ಅಜೇಯ 30 ರನ್ ಸಿಡಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.
ಭರ್ಜರಿ ಜಯ ದಾಖಲಿಸಿದ ಜಮ್ಮು ಕಾಶ್ಮೀರ ಫೈನಲ್ನಲ್ಲಿ ಕರ್ನಾಟಕ, ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ ಗೆಲುವು ದಾಖಲಿಸುವ ತಂಡದ ವಿರುದ್ಧ ಕಾದಾಟವನ್ನು ನಡೆಸಲಿದೆ.